ಪುಷ್ಪಾ ಸ್ಟೈಲ್‌ನಲ್ಲಿ ಶ್ರೀಗಂಧ ಕಳ್ಳಸಾಗಣೆ: ಚೀನಾಗೆ ಕಳುಹಿಸಲು ಸಿದ್ಧವಾಗಿದ್ದ 750 ಕೆಜಿ ಶ್ರೀಗಂಧ ವಶ; ನಾಲ್ವರ ಬಂಧನ

ಪುಷ್ಪಾ ಸ್ಟೈಲ್‌ನಲ್ಲಿ ಶ್ರೀಗಂಧ ಕಳ್ಳಸಾಗಣೆ: ಚೀನಾಗೆ ಕಳುಹಿಸಲು ಸಿದ್ಧವಾಗಿದ್ದ 750 ಕೆಜಿ ಶ್ರೀಗಂಧ ವಶ; ನಾಲ್ವರ ಬಂಧನ
Photo credit: TV09

ಬೆಂಗಳೂರು, ಅ.27: ತೆಲುಗು ಚಲನಚಿತ್ರ ಪುಷ್ಪಾಯ ಕಥೆಯನ್ನು ಹೋಲುವ ರೀತಿಯಲ್ಲಿ ಶ್ರೀಗಂಧ ಕಳ್ಳಸಾಗಣೆ ಮಾಡುತ್ತಿದ್ದ ಅಂತರರಾಜ್ಯ ಗ್ಯಾಂಗ್‌ವೊಂದು ಸಿದ್ದಾಪುರ ಪೊಲೀಸ್ ಬಲೆಗೆ ಸಿಕ್ಕಿಬಿದ್ದಿದೆ. ಆಂಧ್ರ ಪ್ರದೇಶದ ಕರ್ನೂಲ್ ಕಾಡುಗಳಿಂದ ಅಕ್ರಮವಾಗಿ ಕಡಿದ ಸುಮಾರು 750 ಕೆಜಿ ಶ್ರೀಗಂಧದ ಮರದ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಿದ್ದಾಪುರ ಪೊಲೀಸರು ನಾಕಾಬಂದಿ ನಡೆಸುತ್ತಿದ್ದ ವೇಳೆ, ಈರುಳ್ಳಿ ತುಂಬಿದ ಪಿಕ್‌ಅಪ್ ವಾಹನವನ್ನು ತಡೆದು ಪರಿಶೀಲಿಸಿದಾಗ, ಚೀಲಗಳ ಅಡಿಯಲ್ಲಿ ಅಡಗಿಸಲಾಗಿದ್ದ ಶ್ರೀಗಂಧ ಪತ್ತೆಯಾಯಿತು. ಒಟ್ಟು 18 ಬ್ಯಾಗ್‌ಗಳಲ್ಲಿ ಶ್ರೀಗಂಧದ ಮರದ ತುಂಡುಗಳು ಪತ್ತೆಯಾಗಿದ್ದು, ಈ ವಸ್ತುವಿನ ಅಂದಾಜು ಮೌಲ್ಯ ಲಕ್ಷಾಂತರ ರೂಪಾಯಿಗಳಷ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆಂಧ್ರ ಪ್ರದೇಶದ ಸಿರಾಜ್ ಎಂಬಾತನೇ ಈ ಕಳ್ಳಸಾಗಣೆ ಜಾಲದ ಪ್ರಮುಖ ಮಾಸ್ಟರ್‌ಮೈಂಡ್ ಎಂದು ಬಹಿರಂಗವಾಗಿದೆ. ಆತ ತನ್ನ ಸಹಚರರಾದ ಶೇಖ್ ಶಾರೂಕ್, ಶೇಖ್ ಅಬ್ದುಲ್, ಪರಮೇಶ್ ಹಾಗೂ ರಾಮ್ ಭೂಪಾಲ್ ಅವರೊಂದಿಗೆ ಸೇರಿ ಶ್ರೀಗಂಧವನ್ನು ಕತ್ತರಿಸಿ, ಈರುಳ್ಳಿ ವ್ಯಾಪಾರಿಗಳ ವೇಷದಲ್ಲಿ ಬೆಂಗಳೂರಿಗೆ ಸಾಗಿಸುತ್ತಿದ್ದ. ಬಳಿಕ ನಗರದ ಅಕ್ರಮ ಡೀಲರ್‌ಗಳ ಮೂಲಕ ಚೀನಾಕ್ಕೆ ಪೂರೈಕೆ ಮಾಡುವ ಯೋಜನೆ ಇತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಬಂಧಿತರಿಂದ ಪೊಲೀಸರು ಶ್ರೀಗಂಧದ ಮೂಲ, ಖರೀದಿದಾರರು ಹಾಗೂ ಅಂತರಾಷ್ಟ್ರೀಯ ಸಂಪರ್ಕಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಈ ಅಕ್ರಮ ವ್ಯಾಪಾರದ ಹಿಂದಿರುವ ಬೆಂಗಳೂರು ಮೂಲದ ಡೀಲರ್ ತಲೆಮರೆಸಿಕೊಂಡಿದ್ದು, ಅವನಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡುತ್ತಾ, “ಈ ಗ್ಯಾಂಗ್ ಸಿನೆಮಾ ಸ್ಟೈಲ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರೂ, ಅವರ ಚಿತ್ರಕಥೆಯ ಅಂತ್ಯ ನಾಕಾಬಂದಿಯಲ್ಲೇ ಆಯಿತು,” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.