ಶಿರಂಗಾಲ : ಪಂಚಾಯಿತಿ ಗ್ರಾಮಸಭೆ, ಶಿರಂಗಾಲ ಪಶುಆಸ್ಪತ್ರೆಗೆ ಪಶುವೈದ್ಯರ ನೇಮಕಕ್ಕೆ ಗ್ರಾಮಸ್ಥರ ಆಗ್ರಹ

Nov 7, 2025 - 18:41
 0  219
ಶಿರಂಗಾಲ : ಪಂಚಾಯಿತಿ ಗ್ರಾಮಸಭೆ, ಶಿರಂಗಾಲ ಪಶುಆಸ್ಪತ್ರೆಗೆ ಪಶುವೈದ್ಯರ ನೇಮಕಕ್ಕೆ ಗ್ರಾಮಸ್ಥರ ಆಗ್ರಹ

ಕುಶಾಲನಗರ : ಶಿರಂಗಾಲ ಸುತ್ತಮುತ್ತಲಿನ ಗ್ರಾಮದಲ್ಲಿ ರೈತರು ಕೃಷಿಯೊಂದಿಗೆ ಪಶುಸಂಗೋಪನೆ ಕೈಗೊಂಡಿದ್ದಾರೆ. ಆದರೆ‌ ಪಶುಆಸ್ಪತ್ರೆಯಲ್ಲಿ ಪಶು ವೈದ್ಯರಿಲ್ಲದೆ ತುಂಬ ತೊಂದರೆ‌ ಆಗಿದೆ.ಆದ್ದರಿಂದ ಆಸ್ಪತ್ರೆಗೆ ಖಾಯಂ‌ ಪಶುವೈದ್ಯರನ್ನು ನೇಮಕ ಮಾಡುಬೇಕು ಎಂದು ಶುಕ್ರವಾರ ನಡೆದ ಶಿರಂಗಾಲ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.

 ಸಮೀಪದ ಶಿರಂಗಾಲ ಗ್ರಾಮ ಪಂಚಾಯತಿ ವತಿಯಿಂದ ಪಂಚಾಯತಿ ಸಭಾಂಗಣದಲ್ಲಿ ಅಧ್ಯಕ್ಷೆ ಎಂ.ಆರ್.ಲತಾಬಾಯಿ ಅಧ್ಯಕ್ಷತೆಯಲ್ಲಿ ನಡೆದ 2025-26ನೇ ಸಾಲಿನ ಕೊನೆಯ ಗ್ರಾಮಸಭೆಯಲ್ಲಿ ರೈತರಾದ ಜವರೇಗೌಡ,ಸುರೇಶ್ ಮಾತನಾಡಿ, ಹೈನುಗಾರಿಕೆ ಹಾಗೂ ಪಶುಸಂಗೋಪನೆ ರೈತರ ಜೀವನಾಡಿಯಾಗಿದೆ.

ಲಕ್ಷಾಂತರ ರೂಪಾಯಿ ಹಣ ನೀಡ ಖರೀದಿಸಿ ತಂದ ಹಸುಗಳಿಗೆ ಸೂಕ್ತ ಆರೋಗ್ಯ ಚಿಕಿತ್ಸೆ ದೊರೆಯದೆ ತೊಂದರೆಯಾಗಿದೆ. ದನಕರುಗಳ ಯೋಗಕ್ಷೇಮಕ್ಕೆ ದೂರದ ಊರುಗಳ ವೈದ್ಯರನ್ನು ಅವಲಂಬಿಸಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಹೆಬ್ಬಾಲೆ ಪಶು ಆಸ್ಪತ್ರೆಯ ಡಾ.ಅಮೃತ ಮಾತನಾಡಿ, ತಾಲ್ಲೂಕಿನ ಕೇವಲ ಇಬ್ಬರೇ ಪಶುವೈದ್ಯರಿದ್ದು,ರೈತರು ತಮ್ಮ ಜಾನುವಾರುಗಳಿಗೆ ಅನಾರೋಗ್ಯ ಸಂದರ್ಭ ಮಾಹಿತಿ ನೀಡಿದರೆ ಖುದ್ದು ಬಂದು ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದರು.

 ಚಿಕ್ಕನಾಯಕನಹೊಸಳ್ಳಿಯಲ್ಲಿ ಚಿರತೆಯ ಕಂಡುಬಂದಿದ್ದು, ಇದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.ಆದ್ದರಿಂದ ಚಿರತೆ ಸೆರೆಗೆ ಅರಣ್ಯ ಇಲಾಖೆ ಕೂಡಲೇ ಬೋನ್ ಅಳವಡಿಸಿ ಕಾರ್ಯಾಚರಣೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.ಸದಸ್ಯ ಎನ್.ಎಂ.ಧರ್ಮಪ್ಪ ಮಾತನಾಡಿ, ಹಗಲಿನಲ್ಲಿ ಚಿರತೆ‌ ತನ್ನ ‌ಮರಿಗಳೊಂದಿಗೆ ಓಡಾಡುವುದನ್ನು ಗ್ರಾಮಸ್ಥರು ನೋಡಿ ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೋನ್‌ಅಳವಡಿಸಿ ಚಿರತೆ ಸೆರೆಹಿಡಿದು ಗ್ರಾಮಸ್ಥರ ಆತಂಕವನ್ನು ದೂರ ಮಾಡಬೇಕು‌ ಎಂದು ಒತ್ತಾಯಿಸಿದರು.

ಸದಸ್ಯೆ ಸರಿತಾ ಮಾತನಾಡಿ, ಮಣಜೂರು ಸುತ್ತಮುತ್ತ ಮಂಗಗಳ ಕಾಟ ಜಾಸ್ತಿ ಆಗಿದೆ.ತೆಂಗಿ,ಬಾಳೆ,ಜೋಳ ಸೇರಿದಂತೆ ರೈತರ ಕೃಷಿಯನ್ನು ‌ಹಾಳುಮಾಡುತ್ತಿವೆ.ಆದ್ದರಿಂದ ಮಂಗಳ ಹಾವಳಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಸಿಬ್ಬಂದಿಗಳಿಗೆ ತಿಳಿಸಿದರು. ಮಣಜೂರು ಕಲಾಭವನ ಕಾಮಗಾರಿ ಮುಗಿದು ಏಳೆಂಟು ವರ್ಷಗಳೇ ಕಳೆದರೂ ಗುತ್ತಿಗೆದಾರರ ಗ್ರಾಮಸ್ಥರಿಗೆ ಹಸ್ತಾಂತರ ಮಾಡಿಲ್ಲ ಎಂದು ಗ್ರಾಮ ಸಮಿತಿ ಅಧ್ಯಕ್ಷ ರಾಜಶೇಖರ್ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಿಡಿಒ ತಿಳಿಸಿದರು.

 ಗ್ರಾಮದ ಸೊತ್ತೆಹಳ್ಳ ರಸ್ತೆ ಸಂಪೂರ್ಣ ಹಾನಿ ರೈತರಿಗೆ ತೊಂದರೆ ಆಗಿದೆ.ಈ ರಸ್ತೆಯಲ್ಲಿ ಎತ್ತಿನ ಗಾಡಿಗಳು ಸಂಚಾರಿಸಲು ಸಾಧ್ಯವಾಗದ‌ ಸ್ಥಿತಿ ನಿರ್ಮಾಣ ವಾಗಿದೆ ಎಂದು ಸಿ.ಎನ್.ಲೋಕೇಶ್ ಅಧಿಕಾರಿಗಳ ಗಮನ‌ ಸೆಳೆದರು.ಈ‌ಕುರಿತು ನೀರಾವರಿ ಇಲಾಖೆ ಅಧಿಕಾರಿ ಸೌಮ್ಯ ಮಾತನಾಡಿ, ಸ್ಥಳ ಪರಿಶೀಲನೆ ನಡೆಸಿ ರಸ್ತೆ ಅಭಿವೃದ್ಧಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಗ್ರಾಮದ ಮುಖಂಡ ಶ್ರೀನಿವಾಸ್ ಮಾತನಾಡಿ, ಗ್ರಾಮದಲ್ಲಿ ಹಕ್ಕುಪತ್ರ ಇಲ್ಲದ ಕುಟುಂಬಗಳಿಗೆ ಯಾವಾಗ ಹಕ್ಕುಪತ್ರ ನೀಡುತ್ತಿರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.ಪಿಡಿಒ ಹೇಮಲತಾ ಪ್ರತಿಕ್ರಿಯಿಸಿ ಹಕ್ಕುಪತ್ರ ಇಲ್ಲ ಇಲ್ಲದವರ ಪಟ್ಟಿ ಮಾಡಿ ತಹಶೀಲ್ದಾರ್ ಕಚೇರಿಗೆ ಕಳುಹಿಸಿಕೊಡಲಾಗಿದೆ. ತಹಶೀಲ್ದಾರ್ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದರು. ಮುಂದಿನ ದಿನಗಳಲ್ಲಿ ಪಂಚಾಯತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಜಲಜೀವನ್ ಮಿಷನ್ ಯೋಜನೆ ಪರಿಪೂರ್ಣವಾಗಿಲ್ಲ.ಇದರಿಂದ ಈ ಭಾಗದಲ್ಲಿ ‌ಕುಡಿಯುವ‌ ನೀರಿಗೆ ತೊಂದರೆ ಉಂಟಾಗಿದೆ.ಕುಡಿಯುವ ನೀರಿನ ಯೋಜನೆಗಳನ್ನು ಆದಷ್ಟು ಬೇಗ ಮುಗಿಸಬೇಕು ಎಂದು ಅಧ್ಯಕ್ಷೆ ಲತಾಬಾಯಿ ಸೂಚನೆ ನೀಡಿದರು.

 ಅಭಿವೃದ್ಧಿ ಅಧಿಕಾರಿ ಹೇಮಲತಾ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಗೆ ಕಾಮಗಾರಿಗಳನ್ನು ಸೇರ್ಪಡೆ ಮಾಡಬೇಕಾಗಿದೆ.ಮೊದಲು ಆಲ್ ಲೈನ್ ಮೂಲಕ ಮಾಡಲಾಗುತ್ತಿತ್ತು.ಆದರೆ ಈಗ ಪ್ರತ್ಯೇಕ ತಂತ್ರಾಂಶ ಮೂಲಕ ಸಲ್ಲಿಸಬೇಕಾಗಿದೆ.ಆದರೆ ಗ್ರಾಮಸ್ಥರು ಮತ್ತು ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡಬೇಕು.ಗ್ರಾಮಸ್ಥರು ಕೂಡ ಅರ್ಜಿ ಸಲ್ಲಿಸಬೇಕು ಎಂದರು.ಪಂಚಾಯತಿ ವತಿಯಿಂದ ಕುರಿ,ಕೋಳಿ, ಹಸು ಸಾಕಾಣಿಕೆಗೆ ಕೊಟ್ಟಿಗೆ ಧನಸಹಾಯ ನೀಡಲಾಗುತ್ತಿದೆ. ರೈತರು ಅರ್ಜಿ ಸಲ್ಲಿಸಬಹುದು ಎಂದರು.

 ಗ್ರಾಮಸ್ಥರು ತಮ್ಮ ಕೃಷಿ ಭೂಮಿಯನ್ನು ಮನೆದಳ ಅಂತ ಪರಿವರ್ತನೆ ಮಾಡಿದವರಿಗೆ ಎ ಖಾತಾ ಕೊಡಬಹುದು ಎಂದರು.ಪಂಚಾಯತಿ ವತಿಯಿಂದ ಪ್ರಸಕ್ತ ವರ್ಷ ಕಂದಾಯ ಪರಿಷ್ಕರಣೆ ಮಾಡಲಾಗುತ್ತಿದೆ. ಗ್ರಾಮಸ್ಥರು ನಿಗದಿತ ಅವದಿಯಲ್ಲಿ ಕಂದಾಯ ಪಾವತಿ ಮಾಡುವಂತೆ ಗ್ರಾಮದ ಅಭಿವೃದ್ಧಿ ಕೈಜೋಡಿಸಬೇಕು ಎಂದು ಹೇಳಿದರು.

 ಪಂಚಾಯತಿ ಅಧ್ಯಕ್ಷೆ ಎಂ.ಆರ್.ಲತಾಬಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದಿಂದ ಬಂದ ಅನುದಾನವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ‌ ಮಾಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.ರಸ್ತೆ, ಚರಂಡಿ,ಬೀದ ದೀಪ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಪಂಚಾಯತಿ ಒದಗಿಸಲಾಗಿದೆ ಎಂದರು.

ನೋಡೆಲ್ ಅಧಿಕಾರಿ ತೋಟಗಾರಿಕಾ ಹಿರಿಯ ನಿರ್ದೇಶಕ ಎನ್.ಎಸ್.ಪಣೇಂದ್ರ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಸವರಾಜು,ಸದಸ್ಯರಾದ ಧರ್ಮಪ್ಪ, ಶ್ರೀಕಾಂತ್,ಪ್ರದೀಪ್ ,ಸರಿತಾ,ಗೀತಾ,ಲಕ್ಷ್ಮಿ ಅಭಿವೃದ್ಧಿ ಅಧಿಕಾರಿ ಹೇಮಲತಾ ಕಾರ್ಯದರ್ಶಿ ಮಂಜೂರು ಖಾನ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆ ವತಿಯಿಂದ ದೊರೆಯುವ ಸೌಲಭ್ಯಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0