ಶನಿವಾರಸಂತೆ;ಮಾಲಂಬಿ ಶ್ರೀ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಶಿವಸ್ಮರಣೆ

ಶನಿವಾರಸಂತೆ;ಮಾಲಂಬಿ ಶ್ರೀ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಶಿವಸ್ಮರಣೆ

ಶನಿವಾರಸಂತೆ:ಫೆ15:-ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಭಾನುವಾರ ಸಮೀಪದ ಮಾಲಂಬಿ ಗ್ರಾಮದಲ್ಲಿರುವ ಶ್ರೀ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಹಬ್ಬವನ್ನು ಶ್ರದ್ದಾಭಕ್ತಿಯಿಂದ ಆಚರಿಸಿದರು.

ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ 1999ರಿಂದ ಬೆಟ್ಟದ ತುದಿಯಲ್ಲಿ ನಿರ್ಮಿಸಿರುವ ಮಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಭಾನುವಾರ ಮುಂಜಾನೆಯಿಂದ ಸಂಜೆ ವರೆಗೂ ಸ್ಥಳೀಯ ಭಕ್ತಾಧಿಗಳು ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಯಿಂದ ಆಗಮಿಸುತ್ತಿದ್ದ ಸಾವಿರಾರು ಭಕ್ತರು ಬೆಟ್ಟ ಹತ್ತುತ್ತಿದ್ದರು. ಹಾಸನ ಜಿಲ್ಲೆಯಿಂದ ಬರುತ್ತಿದ್ದ ಭಕ್ತರು ಶನಿವಾರಸಂತೆ-ಬೀಟಿಟೆಕಟ್ಟೆ ಮಾರ್ಗವಾಗಿ, ಮೈಸೂರು-ಕುಶಾಲನಗರ ಕಡೆಯಿಂದ ಆಗಮಿಸುತ್ತಿದ್ದ ಭಕ್ತರು ಬಾಣವಾರ-ಶನಿವಾರಸಂತೆ ಮಾರ್ಗವಾಗಿ ಮಾಲಂಬಿ ಗ್ರಾಮದ ಮೂಲಕ ಬೆಟ್ಟ ಹತ್ತುತ್ತಿದ್ದರು.

 ಶಿವರಾತ್ರಿ ಹಬ್ಬದ ಪ್ರಯುಕ್ತ ಮಳೆ ಮಲ್ಲೇಶ್ವರ ಸ್ವಾಮಿಗೆ ಭಾನುವಾರ ಮುಂಜಾನೆ 4-30 ರಿಂದ ತುಮಕೂರಿನ ಸುಕ್ಷೇತ್ರ ದೇವರಹೊಸಹಳ್ಳಿ ವೀರಭದ್ರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಬ್ರಹ್ಮ ಅಭಿಲಾಷ್ ಶಾಸ್ತಿç ಅವರ ನೇತೃತ್ವದಲ್ಲಿ ಅರ್ಚಕರ ತಂಡ ಮತ್ತು ಸ್ಥಳೀಯ ಅರ್ಚಕರು ದೇವಸ್ಥಾನದಲ್ಲಿ ಶ್ರೀ ಸ್ವಾಮಿಗೆ ಪುಷ್ಪಾಭಿಷೇಕ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ವಿದಿ ವಿಧಾನಗಳನ್ನು ನೆರವೇರಿಸಿದರು. ಬೆಳಗ್ಗೆ 9 ಗಂಟೆಗೆ ಮಹಾ ಮಂಗಳಾರತಿ ಸಲ್ಲಿಸಿದ ನಂತರ ಅರ್ಚಕರು ಭಕ್ತಾಧಿಗಳಿಗೆ ಶ್ರೀ ಸ್ವಾಮಿಯ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು.

 ಬೆಟ್ಟದ ತದಿಯಲ್ಲಿ ಭಕ್ತಾಧಿಗಳು ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ಸಾವಿರಾರು ಭಕ್ತರು ಬೆಟ್ಟವನ್ನೇರಿ ಮಳೆ ಮಲ್ಲೇಶ್ವರ ಸ್ವಾಮಿಯ ದರ್ಶನ ಪಡೆದರು. ಯುವಕರು, ಯುವತಿಯರು, ವಯಸ್ಕರು, ಕಿರಿಯರು, ಮಕ್ಕಳು ಉತ್ಸಾಹದಿಂದ ಬೆಟ್ಟವನ್ನೇರಿ ಸಂಭ್ರಮ ಪಟ್ಟರು. ಶಿವರಾತ್ರಿ ಹಬ್ಬದ ಪ್ರಯುಕ್ತ ಬೆಟ್ಟದ ಕೆಳ ಭಾಗದಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಪುಟ್ಟ ಜಾತ್ರೆ ನಡೆಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು ದಾರಿ ಮಧ್ಯದಲ್ಲಿ ಭಕ್ತಾಧಿಗಳಿಗೆ ಕುಡಿಯಲು ಮಜ್ಜಿಗೆ, ನೀರು ವಿತರಣೆ ಮಾಡಲಾಯಿತು.

 ಶಿವರಾತ್ರಿ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಜಿಲ್ಲೆ ಹೊರ ಜಿಲ್ಲೆ ಸೇರಿದಂತೆ ಸುಮಾರು 7 ರಿಂದ 8 ಸಾವಿರ ಭಕ್ತಾಧಿಗಳು ಶ್ರೀ ಸ್ವಾಮಿಯ ದರ್ಶನ ಪಡೆದ್ದಾರೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ ಹೇಳಿದರು. ಪೂಜಾ ಮಹೋತ್ಸವದಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ದಾನಿಗಳು, ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು. ಯುವಕರ ತಂಡ ದಾರಿಯುದ್ದಕ್ಕೂ ಭಕ್ತಾಧಿಗಳಿಗೆ ಮಜ್ಜಿಗೆ ಮತ್ತು ಕುಡಿಯುವ ನೀರು ವಿತರಣೆ ಮಾಡಿದರು .