ಸಿದ್ದಾಪುರ: ಮುಂದಿನ ವಾರ ಮದುವೆಯಾಗಬೇಕಿದ್ದ ಯುವಕ ಆತ್ಮಹತ್ಯೆ
ಮಡಿಕೇರಿ, ಏ. 13: ಮುಂದಿನ ವಾರ ವಿವಾಹ ಆಗಬೇಕಿದ್ದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಅವರೆಗುಂದ ನಿವಾಸಿ ಹಾಗೂ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಹೆಚ್.ಟಿ. ಮಹೇಶ್ ಎಂಬವರ ಪುತ್ರ ಪ್ರಶಾಂತ್ (26) ಎಂಬ ಯುವಕನೇ ಮೃತ ದುರ್ದೈವಿ.
ಪ್ರಶಾಂತ್ ಬೆಂಗಳೂರಿನಲ್ಲಿ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ 25 ದಿನಗಳ ಹಿಂದೆ ರಜೆ ಮಾಡಿಕೊಂಡು ತನ್ನ ವಿವಾಹ ಕಾರ್ಯ ತಾ. 20 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಅವರೆಗುಂದಕ್ಕೆ ಬಂದಿದ್ದ.
ಸೋಮವಾರ ಅಪರಾಹ್ನ ನಂತರ ಈತ ತನ್ನ ಮನೆ ಸಮೀಪದ ಕಾಫಿ ತೋಟದಲ್ಲಿ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಪ್ರಶಾಂತನ ತಂದೆ ಮಹೇಶ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.