ಸಿದ್ದಾಪುರ:ಮದ್ಯದ ಅಮಲಿನಲ್ಲಿ ಪತ್ನಿ,ಹಾಗೂ ಅತ್ತೆಯ ಮೇಲೆ‌ ಹಲ್ಲೆ

ಸಿದ್ದಾಪುರ:ಮದ್ಯದ ಅಮಲಿನಲ್ಲಿ ಪತ್ನಿ,ಹಾಗೂ ಅತ್ತೆಯ ಮೇಲೆ‌ ಹಲ್ಲೆ

ಸಿದ್ದಾಪುರ: ಮದ್ಯದ ಅಮಲಿನಲ್ಲಿ ಪತ್ನಿಗೆ ಹಲ್ಲೆ ನಡೆಸಿದ ವ್ಯಕ್ತಿ, ತಡೆಯಲು ಬಂದ ಅತ್ತೆಯ ಮೇಲೂ ಮರದ ಸೌದೆಯ ತುಂಡಿನಿಂದ ಹಲ್ಲೆ ನಡೆಸಿದ ಘಟನೆ ಸಿದ್ದಾಪುರ ಸಮೀಪದ ಹೊಸೂರು ಗ್ರಾಮದಲ್ಲಿ ನಡೆದಿದ್ದು, ಆರೋಪಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಕೃಷ್ಣ ಎಸ್. ಮೇ 31ರಂದು ಸಂಜೆ ಊಟದ ವಿಚಾರವಾಗಿ ಪತ್ನಿ ಸುನೀತಾ ಅವರೊಂದಿಗೆ ಗಲಾಟೆ ನಡೆಸಿ, ಅವರ ಮುಖಕ್ಕೆ ಗುದ್ದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ವೇಳೆ ಸುನೀತಾ ಅವರ ತಾಯಿ ಗಂಗು ಗಂಗಮ್ಮ ಮಧ್ಯಪ್ರವೇಶಿಸಿ ಪ್ರಶ್ನಿಸಿದಾಗ, ಅವರ ಮೇಲೂ ಮರದ ಸೌದೆಯ ತುಂಡಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.  

ಹಲ್ಲೆಯಿಂದ ಗಂಗು ಗಂಗಮ್ಮ ಅವರ ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಗಾಯಾಳುವಿಗೆ ಮೂಳೆ ಮುರಿತ ಉಂಟಾಗಿರುವುದಾಗಿ ತಿಳಿಸಿದ್ದಾರೆ.

ಸುನೀತಾ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಮೊ.ಸಂ. 66/2026ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.