ಸಿದ್ದಾಪುರ;ಕಾಡಾನೆ ದಾಳಿ: ಜೀಪು ಜಖಂ, ಮಹಿಳೆಗೆ ಗಂಭೀರ ಗಾಯ
ಸಿದ್ದಾಪುರ:-ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ತಟ್ಟಳ್ಳಿಯಲ್ಲಿ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ನಡೆದಿದೆ.
ದಾಳಿಯಲ್ಲಿ ಕಾರ್ಮಿಕ ಮಹಿಳೆ ಸುನಿತಾ ಗಂಭೀರವಾಗಿ ಗಾಯಗೊಂಡು ಮೊದಲಿಗೆ ಮಾಲ್ದಾರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಶುಕ್ರವಾರ ಮಧ್ಯಾಹ್ನದ ವೇಳೆ ಕಾಫಿ ತೋಟದಿಂದ ಏಕಾಏಕಿ ಹೊರಬಂದ ಕಾಡಾನೆ ಕಾರ್ಮಿಕರತ್ತ ದಾಳಿ ನಡೆಸಲು ಯತ್ನಿಸಿದಾಗ ಇತರ ಕಾರ್ಮಿಕರು ಪ್ರಾಣಪಾಯದಿಂದ ಓಡಿ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ತಕ್ಷಣ ಆಗಮಿಸಿದ ಆರ್ಆರ್ಟಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಕಾಡಿಗಟ್ಟಲು ಮುಂದಾದರು. ಈ ನಡುವೆ ಕಲ್ಲಳ–ತಟ್ಟಳ್ಳಿ ಮಾರ್ಗದ ರಸ್ತೆಯಲ್ಲಿ ನಿಲ್ಲಿಸಿದ್ದ ಪ್ರವೀಣ ಅವರಿಗೆ ಸೇರಿದ ಜೀಪಿನ ಮೇಲೆ ಕಾಡಾನೆ ದಾಳಿ ನಡೆಸಿ ವಾಹನವನ್ನು ಜಖಂಗೊಳಿಸಿದೆ.
ಆನೆಯನ್ನು ಅಟ್ಟಲು ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೂ ದಾಳಿ ಮಾಡಲು ಯತ್ನಿಸಿದಾಗ ಇಬ್ಬರು ಸಿಬ್ಬಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ನಂತರ ಆನೆಯನ್ನು ಕಾಡಿಗಟ್ಟುವಲ್ಲಿ ಸಿಬ್ಬಂದಿ ಯಶಸ್ವಿಯಾದರು.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದು, ಕಾರ್ಮಿಕರಲ್ಲಿ ಆತಂಕ ಹೆಚ್ಚಾಗಿದೆ. ಆತಂಕ ಸೃಷ್ಟಿಸುತ್ತಿರುವ ಕಾಡಾನೆಯನ್ನು ಸೆರೆಹಿಡಿದು ಸ್ಥಳಾಂತರಿಸಬೇಕೆಂದು ಕಾರ್ಮಿಕ ಸಂಘಟನೆಯ ಮುಖಂಡ ಮಣಿ ಒತ್ತಾಯಿಸಿದ್ದಾರೆ.