ಸಿದ್ದಾಪುರ;ಅಸಲಿ ಚಿನ್ನವನ್ನು ಪಡೆದು ನಕಲಿ ಚಿನ್ನ ನೀಡಿ ಮಹಿಳೆಗೆ ವಂಚನೆ
ಸಿದ್ದಾಪುರ; ಅಸಲಿ ಚಿನ್ನವನ್ನು ಪಡೆದು ನಕಲಿ ಚಿನ್ನವನ್ನು ನೀಡಿ ಮಹಿಳೆಗೆ ವಂಚನೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆಯನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಿದ್ದಾಪುರ ಸಮೀಪದ ನೆಲ್ಲಿ ಹುದಿಕೇರಿ ಗ್ರಾಮದ ಎಂ ಜಿ. ಕಾಲೋನಿಯ ನಿವಾಸಿ ಕುಮುದಾ ಎಂಬ ಮಹಿಳೆ ಸಿದ್ದಾಪುರ ಸಂತೆಗೆ ಆಗಮಿಸಿದ ಸಂದರ್ಭ ತಮಿಳುನಾಡಿನ ಸೇಲಂ ನಿವಾಸಿ ಭಾಗ್ಯವತಿ (30) ಎಂಬ ಮಹಿಳೆ ಪರಿಚಯಿಸಿಕೊಂಡು ಪುಸಲಾಯಿಸಿ ನಕಲಿ ಚಿನ್ನವನ್ನು ನೀಡಿ ಕುಮುದಾ ಅವರಿಂದ ಅಸಲಿ ಚಿನ್ನವನ್ನು ಪಡೆದು ವಂಚನೆ ಮಾಡಿ ಪರಾರಿಯಾಗಿದ್ದಳು.
ಈ ಬಗ್ಗೆ ಕುಮದಾ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿದ್ದಾಪುರ ಪೊಲೀಸರು ತನಿಖೆ ನಡೆಸಿ ಆರೋಪಿ ಭಾಗ್ಯವತಿಯನ್ನು ಚೆನ್ನೈನ ಸೇಲಂ ನಲ್ಲಿ ಪತ್ತೆ ಹಚ್ಚಿ ಆಸಲಿ ಚಿನ್ನವನ್ನು ಆರೋಪಿ ಭಾಗ್ಯವತಿಯಿಂದ ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಮಡಿಕೇರಿ ವಿಭಾಗದ ಡಿವೈಎಸ್ಪಿ ಸೂರಜ್ ಮಾರ್ಗದರ್ಶನದಲ್ಲಿ ಸಿದ್ದಾಪುರ ಠಾಣಾಧಿಕಾರಿ ದ ಮಂಜುನಾಥ್ ನೇತೃತ್ವದಲ್ಲಿ ಅಪರಾಧ ಪತ್ತೆ ದಳದ ಸಿಬ್ಬಂದಿ ಮಣಿಕಂಠ ಹಾಗೂ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
