ಸೋಮವಾರಪೇಟೆ:ತಪೋಕ್ಷೇತ್ರ ಮನೆಹಳ್ಳಿ ಮಠದ ಜಾತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ

ಸೋಮವಾರಪೇಟೆ:ತಪೋಕ್ಷೇತ್ರ ಮನೆಹಳ್ಳಿ ಮಠದ ಜಾತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ

ಸೋಮವಾರಪೇಟೆ:- ತಪೋಕ್ಷೇತ್ರ ಮನೆಹಳ್ಳಿ ಮಠದ ಜಾತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ತಾಲೂಕಿನ ಆಲೂರುಸಿದ್ದಾಪುರ ಸಮೀಪದ ಮನೆಹಳ್ಳಿ ಮಠದ ಆವರಣದಲ್ಲಿ ಇಂದು ಬೆಳಿಗ್ಗೆ ಮಠದ ಶ್ರೀ ಮಹಾಂತಶಿವಲಿಂಗ ಸ್ವಾಮೀಜಿ ಕ್ಷೇತ್ರದ ಆರಾಧ್ಯ ದೇವರುಗಳಾದ ವೀರಭದ್ರೇಶ್ವರ,ಭದ್ರಕಾಳಿ,ಶ್ರೀ ಗುರುಸಿದ್ದವೀರೇಶ್ವರ ಹಾಗೂ ತಪೋವನೇಶ್ವರಿ ದೇವಿಯವರಿಗೆ ರುದ್ರಾಭಿಷೇಕ,ಅಷ್ಟೋತ್ತರ ನಂತರ ಮಹಾಮಂಗಳಾರತಿ ನೆರವೇರಿಸಿದರು.

ಆನಂತರ ಕಲ್ಯಾಣಿ ಸಮೀಪ ಶಟಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ 2026 ರ ಜಾತ್ರಾಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಸ್ವಾಮೀಜಿ ಶ್ರೀ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಜಾತ್ರಾಮಹೋತ್ಸವ ಶ್ರದ್ಧಾ,ಭಕ್ತಿ ಹಾಗೂ ಸಂಭ್ರಮದಿಂದ ನಡೆಯಲಿದೆ.

ಮೂರು ದಿನಗಳು ನಡೆಯಲಿರುವ ಜಾತ್ರಾಮಹೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಪಾಲ್ಗೊಳ್ಳಲಿದ್ದಾರೆ,ಏಪ್ರಿಲ್ 4 ರ ಶನಿವಾರ ಮದ್ಯಾಹ್ನ 3 ಗಂಟೆಗೆ ಧಾರ್ಮಿಕ ಸಮಾರಂಭ ನಡೆಯಲಿದೆ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು,ಜನಪ್ರತಿನಿಧಿಗಳು ಹಾಗೂ ಗಣ್ಯರು ಆಗಮಿಸಲಿದ್ದಾರೆ. ಸಂಜೆ 7 ಗಂಟೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸ್ವಾಮಿಯವರ ಮಹಾರಥೋತ್ಸವ ನಡೆಯಲಿದೆ ಎಂದರು.