ಆಸ್ತಿ ವಿಚಾರಕ್ಕೆ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಕೊ*ಲೆ ಮಾಡಿದ ಮಗ
ಯಲ್ಲಾಪುರ: ಆಸ್ತಿ ಹಂಚಿಕೆಯ ವಿಷಯವಾಗಿ ತಂದೆಯೊಂದಿಗೆ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಮಗನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಯಲ್ಲಾಪುರ ತಾಲೂಕಿನ ಬೆಳ್ಳುಂಬಿ ಹತ್ತಿರದ ಮಾವಿನಕಟ್ಟಾದಲ್ಲಿ ನಡೆದಿದೆ.
ಮೃತರನ್ನು ನಾರಾಯಣ ಪರಶು ಮರಾಠಿ (51) ಎಂದು ಗುರುತಿಸಲಾಗಿದೆ. ಕೊಲೆ ಬಳಿಕ ಕೊಡಲಿಯೊಂದಿಗೆ ಪರಾರಿಯಾಗಿದ್ದ ಅವರ ಪುತ್ರ ಹರೀಶನನ್ನು ಪೊಲೀಸರು ಬಂಧಿಸಿದ್ದಾರೆ.
ನಾರಾಯಣ ಮರಾಠಿ ತಮ್ಮ ಪುತ್ರ ಹರೀಶ, ಪುತ್ರಿ ತಾರಾ ಮತ್ತು ಪುತ್ರವಧು ಸವಿತಾ ಜೊತೆ ಒಂದೇ ಮನೆಯಲ್ಲಿದ್ದು, ತೋಟದ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಮನೆಯೊಳಗೆ ಆಗಾಗ ಪತ್ನಿ–ಸೊಸೆ ಹಾಗೂ ಸಹೋದರಿ ನಡುವೆ ಕಲಹ ನಡೆಯುತ್ತಿದ್ದು, ಕುಟುಂಬದೊಳಗಿನ ಅಸಮಾಧಾನ ಹೆಚ್ಚಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಸಹೋದರಿ ತಾರಾ ಮತ್ತು ಪತ್ನಿ ಸವಿತಾ ನಡುವೆ ಮತ್ತೆ ಜಗಳ ಉಂಟಾಗಿದ್ದು, ಕೋಪಗೊಂಡ ಹರೀಶ ತಾರಾ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ತಂದೆ ನಾರಾಯಣ ಮಧ್ಯ ಪ್ರವೇಶಿಸಿ, “ಇನ್ನೊಮ್ಮೆ ಇಂತಹ ವರ್ತನೆ ಮಾಡಿದರೆ ನಿನ್ನ ವಿರುದ್ಧ ಪೊಲೀಸ್ ದೂರು ಕೊಡುತ್ತೇನೆ” ಎಂದು ಎಚ್ಚರಿಸಿದ್ದರು ಎನ್ನಲಾಗಿದೆ.
ತಂದೆಯ ಮಾತಿಗೆ ಕೋಪಗೊಂಡ ಹರೀಶ ಕೊಡಲಿಯನ್ನು ಎತ್ತಿ ನಾರಾಯಣನ ತಲೆಗೆ ಬಾರಿಸಿದ್ದಾನೆ. “ಮನೆ ಸಾಲ, ಮದುವೆ ಸಾಲ ನಾನೇ ತೀರಿಸಿದ್ದರೂ ಆಸ್ತಿ ಕೊಡಲಿಲ್ಲ” ಎಂದು ಅಬ್ಬರಿಸುತ್ತಾ ಮತ್ತೊಮ್ಮೆ ಕೊಡಲಿ ಬೀಸಿದ ಆರೋಪಿ, ಎಡ ಕಿವಿಯ ಭಾಗಕ್ಕೂ ಬಲವಾದ ಹೊಡೆದಿದ್ದಾನೆ. ಇದರಿಂದ ನಾರಾಯಣ ಮರಾಠಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ನಂತರ ತಂಗಿ ತಾರಾ ತಂದೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ಅದಾಗಲೇ ಅವರು ಮೃತಪಟ್ಟಿದ್ದರು. ಕೊಲೆ ಬಳಿಕ ಪರಾರಿಯಾಗಿದ್ದ ಹರೀಶನನ್ನು ಪೊಲೀಸರು ಸಂಜೆ ವೇಳೆ ಬಂಧಿಸಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.