ಮದ್ಯ ಕುಡಿಯಲು ಹಣ ಕೊಡಲಿಲ್ಲ ಎಂದು ತಾಯಿಯನ್ನೇ ಹತ್ಯೆಗೈದ ಮಗ: ಹೆತ್ತು ಹೊತ್ತ ತಾಯನ್ನೆ ಕೈಕಾಲು ಕಟ್ಟಿ ಕೊಲೆ ಮಾಡಿದಾತ ಬಾರ್ ನಲ್ಲಿ ಕುಡಿಯತ್ತಿದ್ದ

ಮದ್ಯ ಕುಡಿಯಲು ಹಣ ಕೊಡಲಿಲ್ಲ ಎಂದು ತಾಯಿಯನ್ನೇ ಹತ್ಯೆಗೈದ ಮಗ:  ಹೆತ್ತು ಹೊತ್ತ ತಾಯನ್ನೆ ಕೈಕಾಲು ಕಟ್ಟಿ ಕೊಲೆ ಮಾಡಿದಾತ ಬಾರ್ ನಲ್ಲಿ ಕುಡಿಯತ್ತಿದ್ದ

ಬಾಗಲಕೋಟೆ : ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಪುತ್ರನೇ ಹೆತ್ತ ತಾಯಿಯನ್ನೇ ಹತ್ಯೆಗೈದ ಘಟನೆ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ.

 ಹತ್ಯೆಯಾದವರನ್ನು ಶಾವಕ್ಕ ಗಿರಿಸಾಗರ್ (58). ಅವರ ಪುತ್ರ ವೆಂಕಟೇಶ್ ಗಿರಿಸಾಗರ್ (28) ತಾಯಿಯ ಕೈಕಾಲು ಕಟ್ಟಿ, ಬಾಯಲ್ಲಿ ಬಟ್ಟೆ ತುರುಕಿ, ಕತ್ತಿಯಿಂದ ಕತ್ತು ಕೊಯ್ದು ಹತ್ಯೆಗೈದ ಬಳಿಕ, ಬಾರ್‌ಗೆ ತೆರಳಿ ನಿರಾಳವಾಗಿ ಕುಡಿಯುತ್ತಿದ್ದ ಎಂದು ತಿಳಿದು ಬಂದಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಶಾವಕ್ಕ ಅವರ ಪತಿ ಹಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಮಗಳು ಮದುವೆಯಾಗಿ ಬೇರೆ ಊರಿಗೆ ತೆರಳಿದ್ದರಿಂದ ಶಾವಕ್ಕ ತಮ್ಮ ಮಗ ವೆಂಕಟೇಶ್ ಜೊತೆ ಕಳೆದ 15 ವರ್ಷಗಳಿಂದ ತುಳಸಿಗೇರಿಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ತಾಯಿ ಶಾವಕ್ಕ ಕೂಲಿ ಕೆಲಸದ ಮೂಲಕ ಜೀವನ ನಡೆಸುತ್ತಿದ್ದು, ವೆಂಕಟೇಶ್ ಯಾವುದೇ ಉದ್ಯೋಗವಿಲ್ಲದೆ ಮದ್ಯಪಾನ ವ್ಯಸನಿಯಾಗಿದ್ದನು.

 ಪ್ರತಿ ದಿನವೂ ತಾಯಿಯಿಂದ ಮದ್ಯಕ್ಕಾಗಿ ಹಣ ಬೇಡುವ ವೆಂಕಟೇಶ್, ಗುರುವಾರ ಕೂಡ ಹಣ ನೀಡಲು ಒತ್ತಾಯಿಸಿದಾಗ ಶಾವಕ್ಕ ನಿರಾಕರಿಸಿದ್ದರಿಂದ ಕೋಪಗೊಂಡು ಬಟ್ಟೆಯಿಂದ ಕೈಕಾಲು ಕಟ್ಟಿ, ಬಾಯಲ್ಲಿ ಬಟ್ಟೆ ತುರುಕಿ, ಕತ್ತಿಯಿಂದ ಕತ್ತು ಕೊಯ್ದು ಪರಾರಿಯಾಗಿದ್ದಾನೆ.

 ಸಂಜೆಯಾದರೂ ಶಾವಕ್ಕ ಕಾಣಿಸದ ಹಿನ್ನೆಲೆಯಲ್ಲಿ ನೆರೆಹೊರೆಯವರು ಬಾಗಿಲು ತೆರೆಯಿಸಿ ನೋಡಿದಾಗ, ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

 ಹತ್ಯೆಯ ಬಳಿಕ ಪರಾರಿಯಾಗಿದ್ದ ವೆಂಕಟೇಶ್, ಗದ್ದನಕೇರಿ ಕ್ರಾಸ್ ಬಳಿಯ ಬಾರ್‌ನಲ್ಲಿ ಕುಡಿಯುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.