ಮದ್ಯಕ್ಕಾಗಿ ಹಣ ನಿರಾಕರಿಸಿದ ತಾಯಿಯನ್ನು ಹತ್ಯೆಗೈದ ಮಗ!
ಸಹರಾನ್ಪುರ: ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ತಾಯಿ-ಮಗನ ನಡುವಿನ ಕುಟುಂಬ ಕಲಹ ದಾರುಣ ಅಂತ್ಯ ಕಂಡಿದೆ. ಮದ್ಯ ಖರೀದಿಸಲು ಹಣ ನೀಡಲು ನಿರಾಕರಿಸಿದ ತಾಯಿಯನ್ನು, ಆಕೆಯ ಮಗನೇ ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಕೊತ್ವಾಲಿ ಠಾಣಾ ವ್ಯಾಪ್ತಿಯ ನಿರ್ಭಯಪುರಂ ಕಾಲೋನಿಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಅಕ್ಷಯ್ ಎಂಬಾತ ತನ್ನ ತಾಯಿ ಆಶಾ ದೇವಿ (55) ಅವರ ಬಳಿ ಮದ್ಯಕ್ಕಾಗಿ ಹಣಕೊಡುವಂತೆ ಪೀಡಿಸಿದ್ದ. ಆದರೆ ತಾಯಿ ಹಣವಿಲ್ಲವೆಂದು ತಿಳಿಸಿದಾಗ, ಆಭರಣಗಳನ್ನು ಮಾರಾಟ ಮಾಡುವಂತೆ ಒತ್ತಾಯಿಸಿದ್ದಾನೆ.
ಈ ಕುರಿತು ತಾಯಿ-ಮಗನ ನಡುವೆ ವಾಗ್ವಾದ ನಡೆದಿದ್ದು, ಕೋಪಗೊಂಡ ಅಕ್ಷಯ್ ತಾಯಿಯನ್ನು ಬಡಿದು, ತಲೆಯನ್ನು ಗೋಡೆಗೆ ಹಲವಾರು ಬಾರಿ ಅಪ್ಪಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಆಶಾ ದೇವಿಯನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿದ್ದಾರೆಂದು ಘೋಷಿಸಿದರು.
ಆರೋಪಿ ಅಕ್ಷಯ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ಷಯ್ ಇತ್ತೀಚೆಗೆ ಬಿಹಾರದಲ್ಲಿ ಮದುವೆಯಾಗಿದ್ದು, 15 ದಿನಗಳ ಹಿಂದೆ ಸಹರಾನ್ಪುರಕ್ಕೆ ವಾಪಾಸಾಗಿದ್ದ. ಪತ್ನಿ ಎರಡು ದಿನಗಳ ಹಿಂದೆ ತನ್ನ ಪೋಷಕರ ಮನೆಗೆ ಹೋದ ಹಿನ್ನೆಲೆಯಲ್ಲಿ ಆತ ಖಿನ್ನತೆಗೆ ಒಳಗಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.