ವಿದ್ಯಾರ್ಥಿ ಸಂಘದ ಉದ್ಘಾಟನೆ : ಸ್ಪರ್ಧಾತ್ಮಕ ಪರೀಕ್ಷೆಗೆ ಸೂಕ್ತ ತಯಾರಿ ಅವಶ್ಯಕ ತಹಶೀಲ್ದಾರ್ ಕೃಷ್ಣ ಮೂರ್ತಿ
ಮಡಿಕೇರಿ ಜು. 17: ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ನಡೆಯಿತು. ಮುಖ್ಯ ಅತಿಥಿಗಳಾಗಿ ಸೋಮವಾರಪೇಟೆ ತಾಲೂಕಿನ ತಹಶೀಲ್ದಾರ್ ಕೃಷ್ಣ ಮೂರ್ತಿ , ಚುನಾಯಿತ ವಿದ್ಯಾರ್ಥಿ ಪದಾಧಿಕಾರಿಗಳಿಗೆ ಬ್ಯಾಡ್ಜ್ ನ್ನು ಅಳವಡಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಂಸ್ಕಾರ ಹಾಗೂ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ನಿರಂತರವಾಗಿ ಸೂಕ್ತ ತಯಾರಿ ಅತ್ಯವಶ್ಯಕ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಸಿದಾಗ ಅದರ ಮೂಲಕ ಮಕ್ಕಳಿಗೆ ಪ್ರಜಾಪ್ರಭುತ್ವದ ಮಹತ್ವ ತಿಳಿಯುತ್ತದೆ ಎಂದೂ ಕೃಷ್ಣಮೂರ್ತಿ ಹೇಳಿದರು.
ಸಭೆಯಲ್ಲಿ ಹಾಜರಿದ್ದ ಆಡಳಿತ ಮಂಡಳಿಯ ಸದಸ್ಯರಾದ ನಿವೃತ್ತ ಹೆಚ್ಚುವರಿ ವಾಣಿಜ್ಯ ಇಲಾಖೆಯ ಕಮಿಷನರ್ ಬಿ ಎ ನಾಣಿಯಪ್ಪ, ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.
ಈ ಸಂದರ್ಭ ಸಂಸ್ಥೆಯ ಹಿಂದಿ ಉಪನ್ಯಾಸಕ ರಾಜಸುಂದರಂ ಪ್ರಸ್ತಾವಿಕ ಭಾಷಣ ಮಾಡಿದರು. ಕಳೆದ ಬಾರಿ ಹತ್ತನೇ ತರಗತಿಯಲ್ಲಿ ಶೇಕಡಾ ನೂರು ಫಲಿತಾಂಶ ಪಡೆದ ಪ್ರಯುಕ್ತ ಪ್ರೌಢಶಾಲಾ ಮುಖ್ಯ ಶಿಕ್ಷಕಿ ರೀಟಾ ಅವರಿಗೆ ಸಾಧನಾ ಸಿರಿ ಅಭಿನಂದನಾ ಪ್ರಶಸ್ತಿ ಯನ್ನು ನೀಡಲಾಯಿತು. ಹಿರಿಯ ಆಡಳಿತ ಮಂಡಳಿಯ ಹಿರಿಯ ಸದಸ್ಯೆ ಭೋಜಮ್ಮ ಬ್ಯಾಡ್ಜ್ ಅಳವಡಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಮಂದಪ್ಪ, ವಿದ್ಯಾರ್ಥಿ ಸಂಘದ ಕಾರ್ಯ ಹಾಗೂ ಜವಾಬ್ದಾರಿ ಅರಿತು ಮಕ್ಕಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ತಿಳಿ ಹೇಳಿದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಆಂಗ್ಲ ಭಾಷಾ ಉಪನ್ಯಾಸಕಿ ಪ್ರಫುಲ್ಲ ಕುಮಾರಿ ಆಯ್ಕೆಯಾದರು. ಕಾರ್ಯಕ್ರಮಕ್ಕೆ ಮುಖ್ಯ ಶಿಕ್ಷಕಿ ರೀಟಾ ಸ್ವಾಗತಿಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಕ್ಷಾ ನಿರೂಪಿಸಿ ವಂದಿಸಿದರು. ಸಭೆಯಲ್ಲಿ ಸರ್ವ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
