ಸುಂಟಿಕೊಪ್ಪ: ಅಂಗಡಿಯಲ್ಲಿ 10 ಸಾವಿರ ರೂ ಕಳ್ಳತನ ಪ್ರಕರಣ ,ಇಬ್ಬರ ಬಂಧನ
ಮಡಿಕೇರಿ; ವ್ಯಾಪಾರಿಗಳ ಗಮನ ಬೇರೆಡೆ ಸೆಳೆದು ಗಲ್ಲಾಪೆಟ್ಟಿಗೆಯಿಂದ ಹಣ ಹಾಗೂ ಪರ್ಸ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಸಿದ್ದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಸನ ಮೂಲದ ಮಹಮ್ಮದ್ ಇಕ್ಬಾಲ್ (57) ಮತ್ತು ಶಾಹಿದ್ ಅಮ್ಮದ್ ಪಾಷ (50) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸುತ್ತಿದ್ದ ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಹಾಡಹಗಲೇ ಅಂಗಡಿಗಳಿಗೆ ಗಿರಾಕಿಗಳ ಸೋಗಿನಲ್ಲಿ ಗಲ್ಲಾಪೆಟ್ಟಿಗೆಯಲ್ಲಿದ್ದ ಹಣ ಅಥವಾ ಪರ್ಸ್ ಎಗರಿಸಿ ಪರಾರಿಯಾಗುತ್ತಿದ್ದರು. ಇತ್ತೀಚೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆ ಸಮೀಪದಲ್ಲೇ ಮಹಿಳೆಯೊಬ್ಬರು ವ್ಯಾಪಾರ ನಡೆಸುತ್ತಿದ್ದ ಅಂಗಡಿಗೆ ನುಗ್ಗಿದ್ದ ಖದೀಮರು, ಅವರ ಗಮನ ಬೇರೆಡೆಗೆ ಬರುತ್ತಿದ್ದರು. ಒಬ್ಬ ಮಾತುಕತೆ ಮೂಲಕ ವ್ಯಾಪಾರಸ್ಥರ ಗಮನ ಬೇರೆಡೆ ಸೆಳೆದರೆ, ಮತ್ತೊಬ್ಬ ಸಮಯ ಸಾಧಿಸಿ ಸೆಳೆದು ಗಲ್ಲಾಪೆಟ್ಟಿಗೆಯಲ್ಲಿದ್ದ 10 ಸಾವಿರ ರೂ. ಎಗರಿಸಿಪರಾರಿಯಾಗಿದ್ದರು. ಇವರು ಜಿಲ್ಲೆಯ ಸುಂಟಿಕೊಪ್ಪ, ಶನಿವಾರಸಂತೆ, ಸಿದ್ದಾಪುರ, ಪೊನ್ನಂಪೇಟೆ ಹಾಗೂ ಹಾಸನ ಜಿಲ್ಲೆ ಸೇರಿದಂತೆ ಒಟ್ಟು 17 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿದ್ದಾಪುರದ ಫೈವುಡ್ ಅಂಗಡಿಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಕೂಡ ಇದೇ ಆರೋಪಿಗಳು ಭಾಗಿಯಾಗಿದ್ದರು.ಪ್ರಕರಣ ಭೇದಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಮತ್ತು ತಂಡ ಸತತ ಕಾರ್ಯಾಚರಣೆ ನಡೆಸಿ ಈ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಹಾಗೂ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಸೂರಜ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿದ್ದಾಪುರ ಸಹಾಯಕ ಠಾಣಾಧಿಕಾರಿ ಮಂಜುನಾಥ್, ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ರಾಜೇಶ್, ಮಣಿಕಂಠ ಹಾಗೂ ಪ್ರಕಾಶ್ ಪಾಲ್ಗೊಂಡಿದ್ದರು.

