ಅಕ್ರಮ ಸಂಬಂಧದ ಶಂಕೆ; ವಿವಾಹಿತ ಮಹಿಳೆಯನ್ನು ಭೇಟಿ ಮಾಡಲು ಬಂದವನನ್ನು ಕಟ್ಟಿ ಹಾಕಿ ಹಲ್ಲೆ; ಯುವಕ ಮೃತ್ಯು

ಅಕ್ರಮ ಸಂಬಂಧದ ಶಂಕೆ; ವಿವಾಹಿತ ಮಹಿಳೆಯನ್ನು ಭೇಟಿ ಮಾಡಲು ಬಂದವನನ್ನು ಕಟ್ಟಿ ಹಾಕಿ ಹಲ್ಲೆ; ಯುವಕ ಮೃತ್ಯು

ಬೀದರ್, ಅ. 26: ಅಕ್ರಮ ಸಂಬಂಧ ಶಂಕೆಯಿಂದ ಹಲ್ಲೆಗೊಳಗಾದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗನಪಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಗೌಣಗಾಂವ್ ಮೂಲದ ವಿಷ್ಣು (27) ಎಂದು ಗುರುತಿಸಲಾಗಿದೆ. ಅಕ್ಟೋಬರ್ 21ರಂದು ವಿಷ್ಣುವನ್ನು ನಾಗನಪಳ್ಳಿಯ ನಿವಾಸಿಗಳು ಕೈಕಾಲು ಕಟ್ಟಿಹಾಕಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಸ್ಥಳಕ್ಕೆ ಚಿಂತಾಕಿ ಠಾಣೆ ಪೊಲೀಸರು ಭೇಟಿ ನೀಡಿ ಗಾಯಾಳುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತೀವ್ರ ಗಾಯಗಳಿಂದ ಬಳಲುತ್ತಿದ್ದ ವಿಷ್ಣು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಘಟನೆಯ ದಿನ ವಿಷ್ಣು ಇಬ್ಬರು ಸ್ನೇಹಿತರೊಂದಿಗೆ ವಿವಾಹಿತೆಯ ಮನೆಗೆ ಬಂದಿದ್ದ ವೇಳೆ ಮಹಿಳೆಯ ಕುಟುಂಬದವರು ಅಕ್ರಮ ಸಂಬಂಧ ಶಂಕೆಯಿಂದ ಹಿಡಿದು ಬಡಿಗೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ವಿವಾಹಿತೆಯ ತಂದೆ ಅಶೋಕ್ ಹಾಗೂ ಸಹೋದರ ಗಜಾನನ ವಿರುದ್ಧ ಕೊಲೆ ಆರೋಪ ದಾಖಲಿಸಲಾಗಿದೆ. ಮೃತ ವಿಷ್ಣುವಿನ ತಾಯಿ ಲಕ್ಷ್ಮೀ ಅವರು “ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ನಡೆಸಲಾಗಿದೆ” ಎಂದು ಚಿಂತಾಕಿ ಠಾಣೆಗೆ ದೂರು ನೀಡಿದ್ದಾರೆ.

ಹಲ್ಲೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.