ಕಾಂಗ್ರೆಸ್ನಲ್ಲಿ ಗುಂಪು ರಾಜಕೀಯವಿಲ್ಲ: ಡಿ.ಕೆ.ಶಿವಕುಮಾರ್
ಬೆಂಗಳೂರು: “ಪಕ್ಷದ ವರಿಷ್ಠರು ಏನು ಹೇಳುತ್ತಾರೋ ಅದರಂತೆ ನಡೆದುಕೊಳ್ಳುತ್ತೇವೆ. ಕಾಂಗ್ರೆಸ್ನಲ್ಲಿ ಯಾವುದೇ ಗುಂಪು ಇಲ್ಲ, ಗುಂಪು ಮಾಡಬೇಕಾದ ಅಗತ್ಯವೂ ಇಲ್ಲ. ನಮ್ಮದು ಒಂದೇ ಗುಂಪು—ಕಾಂಗ್ರೆಸ್ ಗುಂಪು,” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶನಿವಾರ ಸ್ಪಷ್ಟಪಡಿಸಿದರು.
ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಉಪಾಹಾರ ಸಭೆಯ ನಂತರ ಇಬ್ಬರೂ ನಾಯಕರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಕಳೆದ ವಾರದಿಂದ ಅಧಿಕಾರ ಹಂಚಿಕೆ, ಬಣ ರಾಜಕೀಯ ಹಾಗೂ ಉಭಯ ನಾಯಕರ ಮುಸುಕಿನ ಅಸಮಾಧಾನದ ನಡುವೆ ಈ ಸಭೆ ಹೆಚ್ಚಿನ ಕುತೂಹಲವಿತ್ತು.
ಸಭೆಯ ನಂತರ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್,“ಜನತೆಗೆ ನೀಡಿದ ಮಾತಿನಂತೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನಡೆದುಕೊಂಡಿದೆ. ಮುಂದೆಯೂ ಇದೇ ರೀತಿಯಲ್ಲಿ ಮುಂದುವರಿಯಲಿದೆ. 2028ರಲ್ಲಿ ಕಾಂಗ್ರೆಸ್ನ್ನು ಮತ್ತೆ ಅಧಿಕಾರಕ್ಕೆ ತರುವ ಗುರಿಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ,” ಎಂದರು.
ಬೆಳಗಾವಿ ಅಧಿವೇಶನಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷವನ್ನು ಎದುರಿಸಲು ಪ್ರತಿತಂತ್ರ ಸಿದ್ಧಪಡಿಸಿರುವುದಾಗಿ ಅವರು ತಿಳಿಸಿದರು.
ನಾಯಕತ್ವ ಗೊಂದಲದ ನಡುವೆಯೇ ಹೈಕಮಾಂಡ್ ಸೂಚನೆಯಂತೆ ಪರಸ್ಪರ ಮಾತುಕತೆಗೆ ಇಬ್ಬರು ನಾಯಕರು ಒಂದೇ ಮೇಜಿನಲ್ಲಿ ಕೂತಿದ್ದು, ಪಕ್ಷದ ಒಳಕಲಹಕ್ಕೆ ತೆರೆ ಎಳೆಯುವ ರಾಜಕೀಯ ಸಂದೇಶ ನೀಡಿದರು.