₹15 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದಿನೊಂದಿಗೆ ವ್ಯಾಪಾರಿ ನಾಪತ್ತೆ; ದೀಪಾವಳಿಗೆ ಆರ್ಡರ್ ಕೊಟ್ಟಿದ್ದವರಿಗೆ ಆತಂಕ
ಜೋಧ್ಪುರ (ರಾಜಸ್ಥಾನ): ಚಿನ್ನ ಹಾಗೂ ಬೆಳ್ಳಿಯ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಯೊಬ್ಬ ಸುಮಾರು ₹15 ಕೋಟಿಯ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದಿನೊಂದಿಗೆ ನಾಪತ್ತೆಯಾಗಿರುವ ಘಟನೆ ಜೋಧ್ಪುರ ನಗರದಲ್ಲಿ ಬೆಳಕಿಗೆ ಬಂದಿದೆ.
ಈ ಕುರಿತು ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಮಾಹಿತಿಯ ಪ್ರಕಾರ, ಶಬ್ಬಿರ್ ಅಲಿ ಎಂಬ ವ್ಯಾಪಾರಿ ಕಳೆದ ಆರು ವರ್ಷಗಳಿಂದ ಚಿನ್ನ ಮತ್ತು ಬೆಳ್ಳಿಯ ಖರೀದಿ–ಮಾರಾಟದಲ್ಲಿ ತೊಡಗಿಸಿಕೊಂಡು, ಸ್ಥಳೀಯ ಆಭರಣ ವ್ಯಾಪಾರಿಗಳ ವಿಶ್ವಾಸ ಗಳಿಸಿದ್ದ. ಆದರೆ ಕಳೆದ ಕೆಲವು ದಿನಗಳಿಂದ ಆತ ಸಂಪರ್ಕಕ್ಕೆ ಸಿಗುತ್ತಿಲ್ಲ.
ಸೋಮವಾರ ವ್ಯಾಪಾರಿಗಳು ಸರಕು ಪಡೆಯಲು ತೆರಳಿದಾಗ ಆತನ ಅಂಗಡಿ ಬಂದ್ ಆಗಿರುವುದು ಕಂಡುಬಂದಿದ್ದು, ಮೊಬೈಲ್ ಫೋನ್ ಸಹ ಸ್ವಿಚ್ ಆಫ್ ಆಗಿದೆ.
“ವ್ಯಾಪಾರಿಗಳ ದೂರು ಆಧರಿಸಿ ಶಬ್ಬಿರ್ ಅಲಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತ ಹಲವಾರು ವ್ಯಾಪಾರಿಗಳಿಂದ ಚಿನ್ನ ಹಾಗೂ ಬೆಳ್ಳಿ ತಯಾರಿಸಿ ಕೊಡುತ್ತೇನೆ ಎಂದು ಹೇಳಿ ಮುಂಗಡ ಹಣ ಪಡೆದು ನಾಪತ್ತೆಯಾಗಿದ್ದು, ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ,” ಎಂದು ಸದರ್ ಬಜಾರ್ ಪೊಲೀಸ್ ಠಾಣೆಯ ಉಪನಿರೀಕ್ಷಕ ಕಲು ಸಿಂಗ್ ಅವರು ತಿಳಿಸಿದ್ದಾರೆ.
ದೀಪಾವಳಿ ಮುನ್ನ ದೊಡ್ಡ ಬುಕ್ಕಿಂಗ್, ಬಳಿಕ ಪರಾರಿ
“ದೀಪಾವಳಿ ಮತ್ತು ದಂತೇರಸ್ ಹಬ್ಬದ ಹಿನ್ನೆಲೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿದ್ದು, ಶಬ್ಬಿರ್ ಸುಮಾರು ₹4.50 ಕೋಟಿಯ ಮೌಲ್ಯದ ಬುಕ್ಕಿಂಗ್ ಸ್ವೀಕರಿಸಿದ್ದ. ಆದರೆ ಬಳಿಕ ಆತ ಕಾಣೆಯಾಗಿದ್ದಾನೆ,” ಎಂದು ದೂರುದಾರ ಮನೀಶ್ ಶರ್ಮಾ ತಿಳಿಸಿದ್ದಾರೆ.
ಇನ್ನೊಬ್ಬ ವ್ಯಾಪಾರಿ ಕೈಲಾಶ್ ಜೈನ್, “ಅಕ್ಟೋಬರ್ 8ರಂದು ಶಬ್ಬಿರ್ ನಮ್ಮ ಅಂಗಡಿಗೆ ಬಂದು ಚಿನ್ನ ಖರೀದಿಸಿ, ₹79,15,940 ರೂ. ಮೊತ್ತದ ಚೆಕ್ ನೀಡುವ ಭರವಸೆ ನೀಡಿದ್ದ. ನಂತರ ಆತನ ಅಂಗಡಿ ಬಂದ್ ಆಗಿತ್ತು,” ಎಂದು ವಿವರಿಸಿದರು.
ಆರು ವರ್ಷಗಳಿಂದ ವಿಶ್ವಾಸಾರ್ಹ ವ್ಯಾಪಾರಿ ಆರೋಪಿ ಶಬ್ಬಿರ್ ಅಲಿ ಬಿಕಾನೇರ್ ಮೂಲದವನು. ಜೋಧ್ಪುರದ ಗೋಡಾ ಚೌಕ್ನ ಬಿಷ್ಟಿ ಕಾಲೊನಿಯಲ್ಲಿ ‘ಜಗದಂಬಾ ಗೋಲ್ಡ್ ಟೆಸ್ಟಿಂಗ್’ ಎಂಬ ಹೆಸರಿನಲ್ಲಿ ಅಂಗಡಿ ನಡೆಸುತ್ತಿದ್ದ. ಶಬ್ಬಿರ್ನ ಸಹೋದರ ಕೂಡ ಆತನೊಂದಿಗೆ ವ್ಯಾಪಾರದಲ್ಲಿ ಭಾಗಿಯಾಗಿದ್ದನೆಂದು ತನಿಖೆಯಲ್ಲಿ ತಿಳಿದುಬಂದಿದೆ.
ಶಬ್ಬಿರ್ ಅಲಿ ಅಶೋಕ್ ಅವರಿಂದ 550 ಗ್ರಾಂ ಚಿನ್ನ ಮತ್ತು 10 ಕೆ.ಜಿ. ಬೆಳ್ಳಿ, ಹೀರಾಲಾಲ್ ಅವರಿಂದ ₹25 ಲಕ್ಷ, ಮೋಹಿತ್ ಸೋನಿ ಅವರಿಂದ ₹9.35 ಲಕ್ಷ ಮತ್ತು ಭೂಪತಿ ಸಿಂಗ್ ಅವರಿಂದ ₹1.20 ಕೋಟಿ ಪಡೆದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಘಟನೆಯ ನಂತರ ವ್ಯಾಪಾರಿಗಳು ಶಾಸಕ ಅತುಲ್ ಭನ್ಸಾಲಿ ಮತ್ತು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ಆರೋಪಿಯನ್ನು ಶೀಘ್ರ ಬಂಧಿಸಲು ಒತ್ತಾಯಿಸಿದ್ದಾರೆ.
ಪೊಲೀಸರು ಶಬ್ಬಿರ್ ಅಲಿಯ ನಾಪತ್ತೆಯ ಹಿನ್ನೆಲೆ, ಹಣದ ಹಾದಿ ಹಾಗೂ ಭಾಗಿಯಾದವರ ಬಗ್ಗೆ ಆಳವಾದ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.