ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆಗೆ ಯತ್ನ;ಕೊಡಗಿನ ಇಬ್ಬರ ಬಂಧನ
ಮೈಸೂರು: ಎಚ್.ಡಿ. ಕೋಟೆ ತಾಲ್ಲೂಕು ವ್ಯಾಪ್ತಿಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನಲ್ಲಿರುವ ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನದ ಬಳಿಯ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಬೇಟೆಯಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರಿ ದಳದ ತಂಡ ಬಂಧಿಸಿದೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದ ನಿವಾಸಿಗಳಾದ ಸುರೇಶ್ ಕುಮಾರ್ ಕೆ.ಎಚ್. (43) ಹಾಗೂ ಮಧುಸೂದನ್ ಎಂ.ಬಿ (29) ಬಂಧಿತರು.
'ಅರಣ್ಯ ಸಂಚಾರಿ ದಳದ ವಿಶೇಷ ಗಸ್ತು ತಂಡವು ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಗಳನ್ನು ಗಮನಿಸಿ ಅವರನ್ನು ಹಿಡಿದು ವಿಚಾರಣೆ ನಡೆಸಿದರು.
ಕಾರಿನೊಳಗೆ ಡಬಲ್ ಬ್ಯಾರೆಲ್ ಗನ್, ಸಿಂಗಲ್ ಬ್ಯಾರೆಲ್ ಗನ್. 14 ಜೀವಂತ ಕಾಡತೂಸುಗಳು, ಗನ್ ಪೌಡರ್, ಸೀಸದ ಚಿಲ್ಸ್ ಕತ್ತಿಗಳು, ಕ್ಲಚ್ವೈರ್ನಿಂದ ತಯಾರಿಸಿದ 6 ಉರುಳುಗಳು, 2 ತಲೆ ಬ್ಯಾಟರಿಗಳು, ಗ್ಯಾಸ್ ಸಿಲಿಂಡರ್ ಮತ್ತು ಬರ್ನರ್, ಟಾರ್ಪಲ್, ಪಾತ್ರೆ ಸಿಕ್ಕಿವೆ. ಕಾಡುಹಂದಿ ಮತ್ತು ಜಿಂಕೆಗಳ ಬೇಟೆಗೆ ಯತ್ನಿಸುತ್ತಿರುವುದು ಗೊತ್ತಾಗಿ ಅವರನ್ನು ಬಂಧಿಸಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.