ವಿರಾಜಪೇಟೆ: ತನ್ನ ಅಂಗಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕ್ಷೌರಿಕ
ವಿರಾಜಪೇಟೆ:ಜೀವನದಲ್ಲಿ ಜಿಗುಪ್ಸೆ ಕಾರಣದಿಂದಾಗಿ ವ್ಯಕ್ತಿಯೊಬ್ಬ ತನ್ನ ಅಂಗಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ.
ಮೂಲತಃ ಹುಣಸೂರು ತಾಲೂಕು ಮಾರಗೌಡನ ಹಳ್ಳಿ ನಿವಾಸಿ, ಹಾಲಿ ವಿರಾಜಪೇಟೆ ವಿಜಯನಗರದಲ್ಲಿ ವಾಸಿವಿರವ ದೇವರಾಜ್ (58) ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಮೃತರು ವಿರಾಜಪೇಟೆ ನಗರದ ಹನಿ ಸೊಸೈಟಿ ಸಮೀಪದ ಖಾಸಗಿ ಕಟ್ಟಡದಲ್ಲಿ ಕ್ಷೌರಿಕ ಮಳಿಗೆಯ ಮಾಲೀಕರಾಗಿದ್ದು, ಸುಮಾರು 30 ವರ್ಷಗಳಿಂದ ನಗರದಲ್ಲಿ ಪತ್ನಿ ಮತ್ತು ಎರಡು ಹೆಣ್ಣು ಮಕ್ಕಳ ತಂದೆಯಾಗಿ ಜೀವನ ನಡೆಸುತ್ತಿದ್ದರು. ಈರ್ವರು ಮಕ್ಕಳಿಗೆ ಮದುವೆಯಾಗಿ ಸುಖಿ ಸಂಸಾರ ನಡೆಸುತ್ತಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ, ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿ ಕಾಯಕದಲ್ಲಿ ಏರುಪೇರು ಆಗಿತ್ತು.ಭಾನುವಾರ ಸಂಜೆ ಸುಮಾರು 8-30 ರ ಸಮಯದಲ್ಲಿ ಸ್ವತಃ ಮಳಿಗೆಯ ಗಾಳಿ ಯಂತ್ರಕ್ಕೆ ನೈಲಾನ್ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪತ್ನಿ ವರಲಕ್ಷ್ಮಿ ಅವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
ವರದಿ: ಕಿಶೋರ್ ಕುಮಾರ್ ಶೆಟ್ಟಿ