ವಿರಾಜಪೇಟೆ;ಮಾರ್ಚ್ 12 ರಂದು ಹೋರಾಟ,ಹಕ್ಕೋತ್ತಾಯಕ್ಕೆ ಸಿಪಿಐಎಂ ಬೆಂಬಲ
ವಿರಾಜಪೇಟೆ:ವಿರಾಜಪೇಟೆ ಪುರಸಭೆಯಲ್ಲಿ ಮುಖ್ಯ ರಸ್ತೆಯ ಬದಿಗಳಲ್ಲಿರುವ ಕಟ್ಟಡದ ಮಾಲೀಕರಿಗೆ ಕಾನೂನು ರೀತಿಯ ಪರಿಹಾರಕ್ಕಾಗಿ ಮತ್ತು ಹಲವು ಮಂಡನೆಗಳ ಅಂಗೀಕಾರಕ್ಕೆ ಒತ್ತಾಯಿಸಿ ವಿರಾಜಪೇಟೆ ಪುರಸಭೆ ಕಛೇರಿಯ ಮುಂದೆ ಮಾರ್ಚ್ 12 ರಂದು ನಾಗರಿಕ ಸಮಿತಿ ಮತ್ತು ಸಾರ್ವಜನಿಕ ಕಾರ್ಯಕರ್ತರ ಕೂಟದ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ನಡೆಯುವ ಹೋರಾಟ, ಹಕ್ಕೋತ್ತಾಯಕ್ಕೆ ವಿರಾಜಪೇಟೆಯ ಸಿಪಿಐಎಂ ಪಕ್ಷದ ಘಟಕದಿಂದ ಸಂಪೂರ್ಣವಾಗಿ ಬೆಂಬಲಿ¸ಸುವುದಾಗಿ ಮತ್ತು ಹೋರಾಟದಲ್ಲಿ ಭಾಗವಹಿಸುವುದಾಗಿ ಸಿಪಿಐಎಂ ವಿರಾಜಪೇಟೆ ಘಟಕ ಕಾರ್ಯದರ್ಶಿ ಕೆ.ಎಸ್ ರಮೇಶ್ (ಶಾಜಿ)ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ರಮೇಶ್ ಅವರು, ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನಾಗರಿಕ ಸಮಿತಿ ಮತ್ತು ಇನ್ನಿತರ ಜನಪರ ಕಾಳಜಿ ಉಳ್ಳ ಸಂಘಟನೆಗಳು ನಡೆಸುವ ಈ ಹೋರಾಟಕ್ಕೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ನೀಡುತ್ತದೆ. ಮುಖ್ಯ ರಸ್ತೆಯಲ್ಲಿ ಮಾಡುತ್ತಿರುವ ಕೆಲಸಗಳ ಯೋಜನೆಯ ಸಂಪೂರ್ಣ ವಿವರಗಳನ್ನು ಜನರ ಮುಂದೆ ಮಂಡಿಸಬೇಕು.
ವಿರಾಜಪೇಟೆಯ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿರುವ ಕಟ್ಟಡ, ಮನೆ ಮಾಲಕರುಗಳಿಗೆ ಕಾನೂನು ರೀತಿಯಲ್ಲಿ ಪರಿಹಾರ ಕೊಡಬೇಕು. ಪುರಸಭೆಯ ವ್ಯಾಪ್ತಿಯಲ್ಲಿನ ನಿವಾಸಿಗಳು ಎದುರಿಸುತ್ತಿರುವ ಇನ್ನೂ ಹಲವಾರು ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸಂಘಟನೆಯ ಎಲ್ಲರೂ ಭಾಗವಹಿಸಬೇಕೆಂದು ತಿಳಿಸಿದ್ದಾರೆ.