ವಿರಾಜಪೇಟೆ;ಮನೆ ನಿರ್ಮಾಣ,ಮಣ್ಣು ಜರಿದು ಕಾರ್ಮಿಕ ದಾರುಣ ಸಾವು
ವಿರಾಜಪೇಟೆ: ಫೆ:01:ಮನೆ ನಿರ್ಮಾಣ ಸ್ಥಳ ಸಮತಟ್ಟು ಮಾಡುವ ಸಂದರ್ಭ ಕಾರ್ಮಿಕನೋರ್ವನ ಮೇಲೆ ಮಣ್ಣು ಜರಿದು ಕಾರ್ಮಿಕನೋರ್ವ ಸಾವನ್ನಪ್ಪಿದ್ದು ಮತ್ತೋರ್ವ ಕಾರ್ಮಿಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವಿರಾಜಪೇಟೆ ಕದನೂರು ಗ್ರಾಮದಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ,ಗುಡೂರು ಭೀಮನಗಡ ಗ್ರಾಮದ ನಿವಾಸಿ ಬಸವರಾಜು ಎಂಬುವವರ ಪುತ್ರ ಸಂಗಮೇಶ (27)/ಅವಘಡದಲ್ಲಿ ಮೃತ ಹೊಂದಿದ ವ್ಯಕ್ತಿ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕನಾಳ ಭೀಮನಗಡ ನಿವಾಸಿ ಬಸಪ್ಪ ಅವರ ಪುತ್ರ ಧರಿಯಪ್ಪ ಅಲಿಯಾಸ್ ಹರೀಶ್ ಹೆಚ್. ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವ್ಯಕ್ತಿ.
ಘಟನೆಯ ವಿವರ;
ವಿರಾಜಪೇಟೆ ತಾಲ್ಲೂಕಿನ ಕದನೂರು ಗ್ರಾಮದ ನಿವಾಸಿ ಕೋಟೆರ ನಾಣಯ್ಯ ಅವರು ನೂತನ ಮನೆ ನಿರ್ಮಾಣ ಕಾರ್ಯ ಕೈಗೊಂಡಿದ್ದರು. ಹೊಂದಿರುವ ಸ್ಥಳವನ್ನು ಸಮತಟ್ಟು ಮಾಡಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಈ ವೇಳೆ ಕಾರ್ಮಿಕರು ಟಿಪ್ಪರ್ ಲಾರಿಯಲ್ಲಿ ಮಣ್ಣು ತುಂಬಿಕೊಂಡು ಇತರಡೆಗೆ ಸಾಗಿಸಲು ಮುಂದಾಗಿದ್ದರು. ಟಿಪ್ಪರ್ ಲಾರಿಗೆ ಮಣ್ಣು ತುಂಬುವ ಮಣ್ಣು ಅಗೆಯುವ ಯಂತ್ರ(ಜೆ.ಸಿ.ಬಿ) ಮಣ್ಣು ಕೊರೆದು ಟಿಪ್ಪರ್ ಲಾರಿಗೆ ತುಂಬುತ್ತಿತ್ತು.ಟಿಪ್ಪರ್ ಲಾರಿಯ ಚಾಲಕ ಮತ್ತು ಕಾರ್ಮಿಕನಿರುವುದು ಗೋಚರಿಸದೆ,ಮಣ್ಣು ಕೊರೆಯು ಯಂತ್ರದ ಚಾಲಕ ಅಚಾತುರ್ಯದಿಂದ ಏಕಾಏಕಿಯಾಗಿ ಮಣ್ಣು ಲಾರಿಯ ಮೇಲೆ ಸುರಿದಿದ್ದಾನೆ.
ಪರಿಣಾಮ ಟಿಪ್ಪರ್ ಲಾರಿಯ ಮೇಲೆ ನಿಂತಿದ್ದ ಕಾರ್ಮಿಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಅಸ್ವಸ್ಥನಾಗಿದ್ದಾನೆ. ಟಿಪ್ಪರ್ ಚಾಲಕ ಸಹ ಗಾಯಗೊಂಡು ಅಸ್ಪಸ್ಥನಾಗಿದ್ದಾನೆ. ಸ್ಥಳದಲ್ಲಿದ್ದ ಕಾರ್ಮಿಕರು ಮತ್ತು ಮತ್ತು ಇತರರ ಸಹಾಯದಿಂದ ಗಾಯಳುಗಳನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಎದೆ ಭಾಗಕ್ಕೆ ಹಾಗೂ ತಲೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾದ ಪರಿಣಾಮ ಕಾರ್ಮಿಕ ಸಂಗಮೇಶ ಅವರು ಮೃತಪಟ್ಟಿದ್ದಾರೆ. ಮತ್ತೋರ್ವ ಚಾಲಕ ದರಿಯಪ್ಪ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ದಾಖಲಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಯಲ್ಲಿ ಮಣ್ಣು ಕೊರೆಯುವ ಯಂತ್ರ ಚಾಲಕ ಜಾರ್ಖಂಡ್ ರಾಜ್ಯ ಮೂಲದ ಜಾವೀದ್ ಪ್ರಾಯ 32 ವರ್ಷ ಮತ್ತು ಸ್ಥಳದ ಮಾಲೀಕ ಕೋಟೆರ ನಾಣಯ್ಯ ಎಂಬುವವರ ಮೇಲೆ 125(a) 106( 1) ರೆ/ವಿ 3(5) ಬಿ.ಎನ್.ಎಸ್ ಅನ್ವಯ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ವರದಿ;ಕಿಶೋರ್ ಕುಮಾರ್ ಶೆಟ್ಟಿ