ವಿರಾಜಪೇಟೆ; ಕೊಡಗು ಮಹಿಳಾ ಸಹಕಾರದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ವಿರಾಜಪೇಟೆ:ನಂ.371 ನೇ ಕೊಡಗು ಮಹಿಳಾ ಸಹಕಾರ ಸಂಘ ನಿಯಮಿತ ವಿರಾಜಪೇಟೆ ಇವರ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶಾಲಿ ಪ್ರಮೋದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆ ಮನೆಯಿಂದಲೇ ದೇಶಭಕ್ತಿ, ದೈವಭಕ್ತಿ ಗಳಿಸುತ್ತಾಳೆಂದು ಈಗಿನ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿದ್ದಾರೆ. ಆದರೆ ಮನ್ನಣೆ ಸಿಗುವುದು ಮಾತ್ರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವರಿಗೆ. ದೇಶದ ಯಶಸ್ಸಿನ ಹಿಂದೆ ಎಷ್ಟೋ ಕೋಟಿ ಹೆಣ್ಣುಮಕ್ಕಳ ಶ್ರಮವಿದೆ. ಅಂತಹ ಪರಿಶ್ರಮಕ್ಕೆ ಬೆಲೆ ನೀಡಬೇಕು ಎಂದರು.
ಆರೋಗ್ಯವಿದ್ದರೆ ನಾವು ಏನು ಬೇಕಾದರೂ ಸಾಧಿಸಬಹುದು. ಹಾಗಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಲು ಮುಖ್ಯ. ಹಾಗೆಯೇ ನಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿಕೊಡಬೇಕು. ಇದರಿಂದ ಮಕ್ಕಳು ಸುಸಂಸ್ಕೃತರಾಗಿ ಬೆಳೆಯಲು ಸಾದ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರಲ್ಲದೆ ಮಹಿಳಾ ಸಮಾಜದ ಅಧ್ಯಕ್ಷೆಯಾಗಿ ತಮ್ಮ ಅತ್ತೆ ದಿ. ಲೀಲಾವತಿ ಆಸ್ರಣ್ಣ ಅವರ ಸಾಮಾಜಿಕ ಬದ್ದತೆ, ಸಮಾಜದ ಮೇಲೆ ಇದ್ದ ಅವರ ಹಿತಾಶಕ್ತಿ ಹಾಗೂ ಕಾಳಜಿ, ಸೇರಿದಂತೆ ಸಮಾಜಕ್ಕಾಗಿ ದುಡಿದ ಪರಿಯನ್ನು ಸ್ಮರಿಸಿಕೊಂಡರಲ್ಲದೆ ಪ್ರತಿಯೊಬ್ಬ ಮಹಿಳೆಯೂ ತಮ್ಮ ಪ್ರತಿಭೆಯನ್ನು ಹೊರಹಾಕುವಂತೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಸಾಹಿತಿ ರಜಿತ ಕಾರ್ಯಪ್ಪ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಮಹಿಳಾ ದಿನ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದಿರಲಿ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಸ್ತ್ರೀತ್ವವನ್ನು, ಸ್ತ್ರೀಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಾಧನೆಗಳನ್ನು, ಸಮಾಜಕ್ಕೆ ಅವರ ಕೊಡುಗೆಗಳನ್ನು ಸಂಭ್ರಮಿಸುವ ದಿನ. 1977 ರಲ್ಲಿ ವಿಶ್ವಸಂಸ್ಥೆಯಿಂದ ಅಳವಡಿಸಿಕೊಳ್ಳಲಾದ ಈ ದಿನಾಚರಣೆಯ ಇತಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರತಿವರ್ಷ ಮಾರ್ಚ್ 8 ರಂದು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ.
ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ಇಂದು ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಅವರಿಗೆ ಮೀಸಲಿರಿಸಲಾಗಿದೆ. ಹಾಗೂ ಅಂದು ಅವರ ಕೊಡುಗೆಯನ್ನು ನೆನೆಯುತ್ತಾ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು. ಒಂದು ಕುಟುಂಬದ ಸೌಕರಣೆ, ಸಲುಹುವ ಸಾಮರ್ಥ್ಯ ಗಂಡಿಗಿಂತ ಹೆಚ್ಚಿನದಾಗಿ ಇರುವುದೇ ಮಹಿಳೆಗೆ. ಹೆಣ್ಣು ಸಂಸಾರದ ಒಂದು ಕಣ್ಣು.
ಪ್ರಪಂಚದಾದ್ಯಂತ ಇನ್ನೂ ಪ್ರಗತಿಪರ ಮನಸ್ಸುಗಳು ಹೆಚ್ಚಬೇಕಿದೆ ಮತ್ತು ಅಂತರ್ಗತ ನಡವಳಿಕೆಗಳನ್ನು ಪ್ರಗತಿಗಾಗಿ ಪಾಲನೆ ಮಾಡಬೇಕಿದೆ. ಪುರುಷರು ಸಾಧನೆ ಮಾಡಿದ ಹಲವು ಕ್ಷೇತ್ರಗಳಲ್ಲಿ ಇಂದು ಮಹಿಳೆಯರು ಸಾಧನೆ ಮಾಡಿದ್ದಾರೆ. ಅದರೊಂದಿಗೆ ಪ್ರತಿ ಹೆಣ್ಣುಮಕ್ಕಳು, ಮಹಿಳೆಯರು ತಮ್ಮ ಸಂಪ್ರದಾಯ ಆಚಾರ ವಿಚಾರಗಳನ್ನು ಪಾಲಿಸಬೇಕು.
ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡಬೇಕು ಎಂದು ಹೇಳಿದರು. ಮಹಿಳಾ ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ ಅಧ್ಯಕ್ಷತೆ ವಹಿಸಿ ಮಾತನಾಡಿ ನಿರ್ದೇಶಕರುಗಳ ಸಹಕಾರದಿಂದ ಸಮಾಜ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸ್ತ್ರೀ ಪುರುಷರಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ ಅನ್ನುವುದು ಈಗಾಗಲೇ ಸಾಬೀತಾಗಿದೆ, ಆದರೂ ಪುರುಷ ಪ್ರದಾನ ಸಮಾಜದಲ್ಲಿ ಎಷ್ಟೋ ಪ್ರತಿಭಾನ್ವಿತ ಮಹಿಳೆಯರು ಮೂಲೆಗುಂಪಾಗುತ್ತಿದ್ದಾರೆ. ಆದರೂ ಇಂತಹ ಸಮಾಜದ ಮುಂದೆ ಸಾಧಕ ಮಹಿಳೆಯರನ್ನು ಗುರುತಿಸಿ ಆತ್ಮ ಸ್ಥೆöÊರ್ಯವನ್ನು ತುಂಬಿಸುವ ಕಾರ್ಯ ನಡೆಯುತ್ತಿದೆ. ಈಗಿನ ಮಹಿಳೆಯರಿಗೆ ಪುರುಷರಿಂದ ಪ್ರೋತ್ಸಾಹ ಇರುವುದರಿಂದ ಮನೆ ಒಳಗೆ ಹೊರಗೆ ಕೆಲಸ ಮಾಡಲು ಉತ್ಸಾಹವಿದೆ ಎಂದರು.
1974ರಿಂದ ಸುಮಾರು 20 ವರ್ಷಗಳ ಕಾಲ ಮಹಿಳಾ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಸಂಘದ ಅಭಿವ್ರದ್ದಿಗೆ ಅವಿರತವಾಗಿ ಶ್ರಮಿಸಿದ ಹಾಗೂ ಸಮಾಜದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ, ದಿವಂಗತ ಡಾ. ಆಸ್ರಣ್ಣ ಅವರ ಪತ್ನಿ ಲೀಲಾವತಿ ಆಸ್ರಣ್ಣ ಅವರನ್ನು ಸ್ಮರಿಸುತ್ತಾ, ಹಾಗೂ ಸಮಾಜಮುಖಿಯಾಗಿರುವ ವಕೀಲರಾದ ಪ್ರಮೋದ್ ಅವರ ಪತ್ನಿ ವಿಶಾಲಿ ಪ್ರಮೋದ್ ಅವರನ್ನು ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭ ಸಾಹಿತಿ, ಪತ್ರಕರ್ತೆ, ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿಯುತ್ತ ಸಮಾಜ ಸೇವೆ ಗೈಯುತ್ತಿರುವ ಪತ್ರಕರ್ತೆ ರಜಿತ ಕಾರ್ಯಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ವಿವಿಧ ಮನೊರಂಜನೆ ಹಾಗೂ ಆಟೋಟ ಸ್ಪರ್ಧೆ ನಡೆಯಿತು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ ಈ ಸಂದರ್ಭ ಮಹಿಳಾ ಸಹಕಾರ ಸಂಘದ ಉಪಾಧ್ಯಕ್ಷೆ ಬಿ.ಆರ್. ಸಬಿತ, ನಿರ್ದೆಶಕರಾದ ಆಶಾ ಚಿಣ್ಣಪ್ಪ, ಯು.ಕೆ. ಪೊನ್ನಮ್ಮ, ಕುಸುಮ ಸೋಮಣ್ಣ, ಜಯಲೀಲಾ ಸತೀಶ್, ಪಿ.ಕೆ. ನೀಲಮ್ಮ, ಪ್ರೇಮ ಮಂಜುನಾಥ್, ಬಿ.ಎನ್. ಭಾರತಿ, ಬಿ.ಯಶೋಧ, ಹೆಚ್.ಆರ್. ಪುಷ್ಪ ವಾಸು, ಪುಷ್ಪ ಐತಪ್ಪ, ಮೆಟಿಲ್ಡಾ ಲೋಬೋ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಜಿ. ಪುಷ್ಪಲತಾ ಸೇರಿದಂತೆ ಸದಸ್ಯರುಗಳು, ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.