ವಿರಾಜಪೇಟೆ: ಶಿವರಾತ್ರಿ ಪ್ರಯುಕ್ತ ಅಂಗಳಾಪರಮೇಶ್ವರಿ ದೇವಿಯ ಪಲ್ಲಕ್ಕಿ ಉತ್ಸವ
ವಿರಾಜಪೇಟೆ:ತೆಲುಗರ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಅಂಗಳಾ ಪರಮೇಶ್ವರಿ ದೇವಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಮೂರು ದಿನಗಳ ಕಾಲ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಮೂರು ದಿನಗಳಿಂದ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು, ಅಭಿಷೇಕ ಪೂಜೆ, ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ ಹಾಗೂ ಸರ್ವ ಭಕ್ತಾಧಿಗಳಿಗೆ ಪ್ರತಿದಿನ ಪ್ರಸಾದ ವಿನಿಯೋಗ ಮಾಡಲಾಯಿತು.
ಉತ್ಸವದ ಕೊನೆಯ ದಿನ ರಾತ್ರಿ ಶ್ರೀ ಅಂಗಳಾ ಪರಮೇಶ್ವರಿಯ ಉತ್ಸವ ಮೂರ್ತಿಯೊಂದಿಗೆ ಪಲ್ಲಕ್ಕಿ ಉತ್ಸವವನ್ನು ತೆಲುಗರ ಬೀದಿಯಿಂದ ಮೀನುಪೇಟೆಯ ಇತಿಹಾಸ ಪ್ರಸಿದ್ಧ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದವರಗೆ ನಡೆಸಲಾಯಿತು. ಉತ್ಸವದ ಅಂಗವಾಗಿ ಪೇಟೆ ಬೀದಿಗಳನ್ನು ತಳಿರು ತೋರಣಗಳಿಂದ, ವಿದ್ಯುತ್ ದೀಪಗಳಿಂದ ಶೃಂಗಾರ ಮಾಡಲಾಗಿತ್ತು.
ಮೆರವಣಿಗೆಗೆ ಬ್ಯಾಂಡ್ ಸೆಟ್, ವಿವಿಧ ರೂಪಕಗಳನ್ನೊಳಗೊಂಡ ಗೊಂಬೆ ಕುಣಿತ ಕೊಟ್ಟಿಯಾರ್ ಕುಣಿತ, ಮಹಿಳೆಯರಿಂದ ನವಧಾನ್ಯಗಳ ಮೊಳಕೆಯೊಡೆದ ಕಳಸ, ವಾದ್ಯಗಳ ತಂಡ ಮೆರುಗು ನೀಡಿತ್ತು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಉಪಾಧ್ಯಕ್ಷ ಟಿ.ಜಿ ಮಂಜುನಾಥ್, ಮಹೇಶ್ ಶೆಟ್ಟಿ, ಅಯ್ಯಪ್ಪ ಶೆಟ್ಟಿ, ಲೋಕೇಶ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಮಂಜುನಾಥ್, ಷಣ್ಮುಗ ಶೆಟ್ಟಿ ಹರೀಶ್ ಶೆಟ್ಟಿ, ಭರತ್ ಶೆಟ್ಟಿ, ರಂಜಿತ್ ಶೆಟ್ಟಿ, ಟಿ.ಎನ್. ವೆಂಕಟೇಶ್ ಶೆಟ್ಟಿ, ಸೇರಿದಂತೆ ಹತ್ತು ಕುಲಸ್ಥರು, 24 ಮನೆ ಸಾಧು ಚೆಟ್ಟಿಯಾರ್ ಕುಟುಂಬದ ಎಲ್ಲ ಸದಸ್ಯರು, ವಿರಾಜಪೇಟೆ ಹಾಗೂ ಸುತ್ತಮುತ್ತಲ ಭಕ್ತಾಧಿಗಳು ಪಾಲ್ಗೊಂಡಿದ್ದರು.