ವಿರಾಜಪೇಟೆ; ಮಹಿಳೆಯ ಗರ್ಭಕೋಶದಲ್ಲಿ ಏಳು‌ ಕೆಜಿ ತೂಕದ ಗೆಡ್ಡೆ

ವಿರಾಜಪೇಟೆ; ಮಹಿಳೆಯ ಗರ್ಭಕೋಶದಲ್ಲಿ ಏಳು‌ ಕೆಜಿ ತೂಕದ ಗೆಡ್ಡೆ
ಸಾಂದರ್ಭಿಕ ಚಿತ್ರ

ವೀರಾಜಪೇಟೆ; ಇಲ್ಲಿನ‌ ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ,47 ವರ್ಷದ ಮಹಿಳೆಯೊಬ್ಬರ ಗರ್ಭಾಶಯದಲ್ಲಿದ್ದ 7 ಕೆ.ಜಿ. ತೂಕದ ಗೆಡ್ಡೆಯನ್ನು ಹೊರತೆಗೆಯಲಾಗಿದೆ.

ವೀರಾಜಪೇಟೆಯ ಸ್ಥಳೀಯ ನಿವಾಸಿ ಮಹಿಳೆಯೊಬ್ಬರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವೈದ್ಯರಾದ ಡಾ.ವಿಶ್ವನಾಥ್ ಸಿಂಪಿಯವರು ಹಲವು ಪರೀಕ್ಷೆಗಳನ್ನು ನಡೆಸಿದಾಗ ಮಹಿಳೆಯ ಗರ್ಭಾಶಯದಲ್ಲಿ ದೊಡ್ಡ ಗೆಡ್ಡೆ ಇರುವುದು ಪತ್ತೆಯಾಗಿತ್ತು.

ಮಾರ್ಚ್ 6 ರಂದು ಶಸ್ತ್ರ ಚಿಕಿತ್ಸಾ ವೈದ್ಯರಾದ ವಿಶ್ವನಾಥ್ ಸಿಂಪಿಯವರ ನೇತೃತ್ವದಲ್ಲಿ ನಡೆದ ಶಸ್ತ್ರ ಚಿಕಿತ್ಸೆಗೆ ಡಾ.ಪ್ರಜ್ವಲ್ ಕುಮಾರ್ (ಶಸ್ತ್ರ ಚಿಕಿತ್ಸಕರು), ಡಾ. ಶಾಂತಕುಮಾರ್ (ಅರವಳಿಕೆ) ಮತ್ತು ಡಾ. ಮಧುರಾ (ಮಹಿಳಾ ಮತ್ತು ಪ್ರಸೂತಿ) ಹಾಗೂ ಸಿಬ್ಬಂದಿಗಳಾದ ಮಾಲಾ,ಕೇಶ್ವರಿ, ಡಿ ಗ್ರೂಪ್ ನ ಪೂವಿ ಮತ್ತು ಮಮತಾ ಅವರು ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದರು.

 ವೀರಾಜಪೇಟೆ ಸರಕಾರಿ ಆಸ್ಪತ್ರೆಯ ಮುಖ್ಯ ಶಸ್ತ್ರ ಚಿಕಿತ್ಸಾ ವೈದ್ಯರಾದ ಡಾ.ವಿಶ್ವನಾಥ್ ಪಿ.ಸಿಂಪಿ ಮಾತನಾಡಿ, ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ಇದಕ್ಕೂ ಮೊದಲು ಇವರು ಮಂಗಳೂರು ಆಸ್ಪತ್ರೆಗೆ ಭೇಟಿ ಮಾಡಿ ಪರೀಕ್ಷಿಸಿದರು. ಇಲ್ಲಿ ಪರಿಚಯಸ್ಥರು ಇರುವ ಕಾರಣ ಇಲ್ಲಿಯೇ ಶಸ್ತ್ರ ಚಿಕಿತ್ಸೆ ಮಾಡಲು ತೀರ್ಮಾನಿಸಿದರು. ಶಸ್ತ್ರ ಚಿಕಿತ್ಸೆ ಮಾಡಿ 7 ಕೆಜಿ ತೂಕವಿರುವ ಗೆಡ್ಡೆ ಹೊರ ತೆಗೆಯಲಾಗಿದೆ. ಅನಸ್ತೇಶಿಯ ಡಾಕ್ಟರ್ ಇಲ್ಲ, ನಾವು ಶಾಸಕರಿಗೆ ಮನವಿ ಮಾಡಿ ವಾರಕ್ಕೆ ಎರಡು ದಿನ ಬೇೆರೆಡೆಯಿಂದ ಡಾ. ಶಾಂತಕುಮಾರ್ ಬರುತ್ತಿದ್ದಾರೆ. ಆದರಿಂದ ಶಸ್ತ್ರ ಚಿಕಿತ್ಸೆಗೆ ನೆರವಾಗಿದೆ, ಚಿಕಿತ್ಸೆ ಪಡೆದ ಮಹಿಳೆ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.