ವಿರಾಜಪೇಟೆ: ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ ಹಾಗೂ ಸಹೃದಯರ ಸಹಕಾರದಲ್ಲಿ ವಿರಾಜಪೇಟೆಯ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನಕ್ಕೆ ಅನ್ನ ಶೇಖರಣಾ ಮಂಚ ಕೊಡುಗೆ
ವಿರಾಜಪೇಟೆ:ವಿರಾಜಪೇಟೆಯ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ ಹಾಗೂ ಸಹೃದಯರ ಸಹಕಾರದಲ್ಲಿ ವಿರಾಜಪೇಟೆಯ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನಕ್ಕೆ ೧ಲಕ್ಷ ೨೦ ಸಾವಿರ ವೆಚ್ಚದಲ್ಲಿ ನಿರ್ಮಾಣ ಮಾಡಿದ ಅನ್ನ ಶೇಖರಣಾ ಮಂಚವನ್ನು ನೀಡಲಾಯಿತು.
ಮಂಗಳವಾರ ದೇವಾಲಯದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ಅವರು ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನದ ಅಧ್ಯಕ್ಷ ಟಿ.ಕೆ. ರಾಜನ್ ಅವರಿಗೆ ಅನ್ನ ಶೇಖರಣಾ ಮಂಚವನ್ನು ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ಅವರು, ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನದಲ್ಲಿ ವರ್ಷಂಪ್ರತಿ ಮುತ್ತಪ್ಪ ತೆರೆ ಮಹೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಮುತ್ತಪ್ಪ ತೆರೆ ಮಹೋತ್ಸವ ಮೂರು ದಿನಗಳ ಕಾಲ ನಡೆಯುತ್ತದೆ.
ಇಂತಹ ಸಂದರ್ಭದಲ್ಲಿ ಸುಮಾರು ೮-೧೦ ಕ್ವಿಂಟಾಲ್ ರಷ್ಟು ಅಕ್ಕಿಯ ಅನ್ನ ಪ್ರಸಾದ ಮಾಡಬೇಕಾಗುತ್ತದೆ. ಈ ವೇಳೆ ಅನ್ನ ಬಸಿಯುವುದು ಸೇರಿದಂತೆ ಶೇಖರಣೆ ಮಾಡಲು ಅನುಕೂಲವಾಗುವಂತೆ ಗುಣಮಟ್ಟದ ಸ್ಟೀಲ್ನಲ್ಲಿ ರೂ. ೧ಲಕ್ಷ ೨೦ ಸಾವಿರ ಮೌಲ್ಯ ವೆಚ್ಚದಲ್ಲಿ ಅನ್ನ ಶೇಖರಣಾ ಮಂಚವನ್ನು ನಿರ್ಮಿಸಿ ದೇವಸ್ಥಾನಕ್ಕೆ ಹಸ್ತಾಂತರಿಸಲಾಗಿದೆ ಎಂದರು. ಈ ಮಹತ್ಕಾರ್ಯಕ್ಕೆ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಹಲವು ಸದಸ್ಯರು ಹಾಗೂ ನನ್ನ ಸ್ನೇಹಿತರಾದ ಚೆರಿಯಪಂಡ ಸುರೇಶ್, ಮಾಳೇಟಿರ ಚುಕ್ಕು ದೇವಯ್ಯ, ಮುಕ್ಕಾಟಿರ ಬೋಪಣ್ಣ ಅವರು ಧನ ಸಹಾಯ ನೀಡಿ ಸಹಕರಿಸಿದ್ದಾರೆ.
ಎಲ್ಲರ ನೆರವಿನಿಂದ ಅನ್ನ ಶೇಖರಣಾ ಮಂಚ ನಿರ್ಮಾಣವಾಗಿದೆ. ಇದು ಕೊಡಗಿನಲ್ಲಿ ಮೊದಲ ಬಾರಿಗೆ ಈ ರೀತಿಯ ಅನ್ನ ಶೇಖರಣಾ ಮಂಚ ನಿರ್ಮಾಣ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ದೇವಾಲಯಗಳಲ್ಲಿ ಅನ್ನ ಸಂತರ್ಪಣೆ ಇರುವಂತಹ ಸಂದರ್ಭ ಬಳಸಿಕೊಳ್ಳಬಹುದು.
ಹಾಗೆಯೇ ಯುದ್ದದ ಭೀತಿ ಎದುರಿಸುತ್ತಿರುವ ನಮ್ಮ ಭಾರತೀಯರಿಗೆ ಯಾವುದೇ ಸಮಸ್ಯೆಗಳು ಉದ್ಭವವಾಗಬಾರದು ಎಂದು ಪ್ರಾರ್ಥಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಸದಸ್ಯರುಗಳು ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.