ಕೊಡವರಿಗೆ ನೋವಾದ ಧಾರವಾಹಿಯ ಭಾಗವನ್ನು ತೆಗೆದಿದ್ದೇವೆ, ವಾಹಿನಿ ಸ್ಟಷ್ಟನೆ

ಕೊಡವರಿಗೆ ನೋವಾದ ಧಾರವಾಹಿಯ ಭಾಗವನ್ನು ತೆಗೆದಿದ್ದೇವೆ, ವಾಹಿನಿ ಸ್ಟಷ್ಟನೆ

ಮಡಿಕೇರಿ;ಇತ್ತೀಚೆಗೆ ಕನ್ನಡ ಖಾಸಗಿ ಚಾನೆಲ್‌ನ ಧಾರವಾಹಿಯೊಂದರಲ್ಲಿ ಕೊಡವ ಪರಂಪರೆಗೆ ಅವಮಾನ ಆಗುವ ರೀತಿಯಲ್ಲಿ ಪಾತ್ರದಾರಿಗಳಿಗೆ ಉಡುಪು ಧರಿಸಿದ್ದ ಘಟನೆಗೆ ವಾಹಿನಿಯು ಸ್ಪಷ್ಟನೆ ನೀಡಿದ್ದು, ಕೊಡವರ ಭಾವನೆಗೆ ನೋವಾದ ಸಂದರ್ಭವನ್ನು ವಾಹಿನಿ ಸೇರಿದಂತೆ ತನ್ನೆಲ್ಲ ಸಾಮಾಜಿಕ ಮತ್ತು ದೃಶ್ಯಮಾಧ್ಯಮಗಳಿಂದಲೂ ತೆಗೆದು ಹಾಕಲಾಗಿದೆ ಎಂದು, ದೂರುದಾರರಾದ ಕೊಡವಾಮೆರ ಕೊಂಡಾಟ ಸಂಘಟನೆಗೆ ಮಾಹಿತಿ ನೀಡಿದೆ. 

 ಸಂಘಟನೆಯ ಅಧ್ಯಕ್ಷ ಚಾಮಿರ ದಿನೇಶ್‌ಬೊಳ್ಯಪ್ಪ ಅವರಿಗೆ ಈ-ಮೈಲ್‌ ಮೂಲಕ ಸ್ಪಷ್ಟೀಕರಣ ನೀಡಿರುವ, ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ನ ದೂರು ನಿರ್ವಹಣಾ ಅಧಿಕಾರಿ ಅನಂತ್ ಭಾರ್ಗವ್ ಅವರು, ದಿನಾಂಕ 19ನೇ ಮಾರ್ಚ್ 2026 ರಂದು ಪ್ರಸಾರವಾದ ನಮ್ಮ ಕಲ್ಪಿತ ಕಥಾಹಂದರದ “ಅಮೃತಧಾರೆ” ಧಾರಾವಾಹಿಯ 906ನೇ ಸಂಚಿಕೆಯಲ್ಲಿನ ಕೆಲವು ಭಾಗಗಳ ಬಗ್ಗೆ ನೀವು, 20/3/2026ರಂದು ನೀಡಿದ ದೂರನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ನಿಮ್ಮ ದೂರು ತಲುಪಿದ ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ನಾವು, ಎಲ್ಲಾ ಪ್ಲಾಟ್ಫಾರ್ಮ್ಗಳಿಂದ (ಟಿವಿ ಮತ್ತು ಡಿಜಿಟಲ್) ಸದರಿ ದೃಶ್ಯಗಳನ್ನು ತೆಗೆದುಹಾಕಿದ್ದೇವೆ. ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್, ಯಾವುದೇ ಸಾಂಸ್ಕೃತಿಕ, ಭಾಷಾ ಮತ್ತು ಸಮುದಾಯಗಳ ಪ್ರಾತಿನಿಧ್ಯದ ವಿಷಯದಲ್ಲಿ ಅತ್ಯುನ್ನತ ಮಟ್ಟದ ಸಂವೇದನಾಶೀಲತೆಯನ್ನು ಕಾಪಾಡಿಕೊಳ್ಳಲು ಬದ್ಧರಾಗಿದ್ದೇವೆ. ಯಾವುದೇ ನಿರ್ದಿಷ್ಟ ಧರ್ಮ ಅಥವಾ ಸಮುದಾಯವನ್ನು ತಪ್ಪಾಗಿ ಚಿತ್ರಿಸುವ ಅಥವಾ ಗುರಿ ಮಾಡುವ ಉದ್ದೇಶ ನಮಗಿರಲಿಲ್ಲ ಎಂದು ನಾವು ಈ ಮೂಲಕ ಸ್ಪಷ್ಟಪಡಿಸಲು ಬಯಸುತ್ತೇವೆ. ಇನ್ನು ಮುಂದೆ, ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ದೃಶ್ಯಗಳನ್ನು ಮರುಪರಿಶೀಲಿಸುವಾಗ ನಾವು ಹೆಚ್ಚಿನ ಜಾಗರೂಕತೆ ವಹಿಸುತ್ತೇವೆ ಮತ್ತು ಅಂತಹ ಚಿತ್ರಣಗಳನ್ನು ಅತ್ಯಂತ ಗೌರವ ಹಾಗೂ ಸಂವೇದನಾಶೀಲತೆಯಿಂದ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಈ ವಿಷಯವನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ನಾವು ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದಿದ್ದಾರೆ. 

ಉಲ್ಲೇಖಿತ ಧಾರಾವಾಹಿಯಲ್ಲಿ ಕೊಡವ ಕುಪ್ಯಚಾಲೆ ಮತ್ತು ಮಂಡೆತುಣಿಯನ್ನು ಅಸಂವೇದನೆಯಿಂದ ಬಳಸುವ ಮೂಲಕ ಅತ್ಯಂತ ಪುರಾತನ ಶ್ರೀಮಂತ ಕೊಡವ ಸಂಸ್ಕೃತಿಗೆ ಅವಮಾನ ಮಾಡಿದ್ದ ವಾಹಿನಿಯ ವಿರುದ್ದ, ಕೊಡವಾಮೆರ ಕೊಂಡಾಟ ಸಂಘಟನೆಯು ನವದೆಹಲಿಯ ಬಿಸಿಸಿಸಿಗೆ ದೂರು ದಾಖಲಿಸಿತ್ತು.