ಮಾಲ್ದಾರೆ ವ್ಯಾಪ್ತಿಯಲ್ಲಿ ಕಾಡಾನೆ ಕಾರ್ಯಾಚರಣೆ

ಮಾಲ್ದಾರೆ ವ್ಯಾಪ್ತಿಯಲ್ಲಿ ಕಾಡಾನೆ ಕಾರ್ಯಾಚರಣೆ

ಸಿದ್ದಾಪುರ:- ವಿರಾಜಪೇಟೆ ಅರಣ್ಯ ವಿಭಾಗದ ವ್ಯಾಪ್ತಿಯ ಮಾಲ್ದಾರೆ ಪ್ರದೇಶದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಹಟ್ಟಿಸುವ ಕಾರ್ಯಾಚರಣೆ ಭಾನುವಾರವೂ ಮುಂದುವರಿಯಿತು.

ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 21 ಕಾಡಾನೆಗಳ ಪೈಕಿ 7 ಆನೆಗಳನ್ನು ಸುರಕ್ಷಿತವಾಗಿ ಮೀಸಲು ಅರಣ್ಯ ಪ್ರದೇಶಗಳಿಗೆ ಹಟ್ಟಿಸಲಾಯಿತು. ಇದರಲ್ಲಿ 6 ಆನೆಗಳನ್ನು ದೇವಮಚ್ಚಿ ಮೀಸಲು ಅರಣ್ಯಕ್ಕೆ ಹಾಗೂ ದಕ್ಷ ಆನೆಯನ್ನು ದುಬಾರೆ ಮೀಸಲು ಅರಣ್ಯಕ್ಕೆ ಕಳುಹಿಸಲಾಯಿತು.

 ಇನ್ನೂ 14 ಕಾಡಾನೆಗಳು ತೋಟ ಪ್ರದೇಶಗಳಲ್ಲೇ ಉಳಿದಿದ್ದು, ಅವುಗಳನ್ನು ಕಾಡಿನತ್ತ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಸೋಮವಾರವೂ ಮುಂದುವರಿಯಲಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿ ಪಿ.ಟಿ., ದೇವರಾಜ್, ಆರ್‌ಆರ್‌ಟಿ ಚೆನ್ನಂಗಿ ತಂಡ, ತಿತಿಮತಿ ಇಟಿಎಫ್ ಸಿಬ್ಬಂದಿ ಹಾಗೂ ವನ್ಯಜೀವಿ ವಲಯದ ಸಿಬ್ಬಂದಿ ಭಾಗವಹಿಸಿದ್ದರು. ಕಾಡಾನೆಗಳ ಹಾವಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.