ಆಲೀರ ಕ್ರಿಕೆಟ್ ಕಪ್:ಕೊಡಗಿನ ಗ್ರಾಮೀಣ ಭಾಗದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟವನ್ನು ಪ್ರತಿನಿಧಿಸುವಂತಾಗಲಿ: ಹೆಚ್.ಎ ಹಂಸ ಕೊಟ್ಟಮುಡಿ

ಮಡಿಕೇರಿ:ಮಾಪಿಳತೋಡುವಿನಲ್ಲಿ ನಡೆದ ಕೊಡವ ಮುಸ್ಲಿಂ ಕುಟುಂಬಗಳ ನಡುವಿನ ಆಲೀರ ಕ್ರಿಕೆಟ್ ಕಪ್ ಮುಖ್ಯ ಅತಿಥಿಯಾಗಿ ಆಗಮಿಸಿ, ಸಮಾರೋಪ ಸಮಾರಂಭದಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹೊದ್ದೂರು ಗ್ರಾಮ ಪಾಚಾಯಿತಿ ಅಧ್ಯಕ್ಷ ಹಂಸ ಕೊಟ್ಟಮುಡಿ ಮಾತನಾಡಿ, ಆಲೀರ ಕುಟುಂಬಸ್ಥರು ಕಳೆದ ಎಂಟು ದಿನಗಳಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಕೊಡಗಿನ ಎಲ್ಲಾ ಜನಾಂಗ ಬಾಂಧವರನ್ನು ಒಗ್ಗೂಡಿಸಿ ವಾಲಿಬಾಲ್ ಪಂದ್ಯಾವಳಿ ಆಯೋಜಿಸುತ್ತಿರುವುದು ಸಂತಸದ ವಿಚಾರ. ಕೊಡಗು ಜಿಲ್ಲೆ ಸೇನೆ ಮತ್ತು ಕ್ರೀಡೆಗೆ ಹೆಸರುವಾಸಿಯಾಗಿದ್ದು, ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಆಶಿಸಿದರು.
ಅಲೀರ ಕುಟುಂಬದ ಸೇವಾ ಸಂಘದ ಅಧ್ಯಕ್ಷರಾದ ಎರ್ಮು ಹಾಜಿ ಅವರು ಮಾತನಾಡಿ, ಶಾಸಕರಾದ ಎ. ಎಸ್. ಪೊನ್ನಣ್ಣ ನವರ ಸಹಕಾರದಿಂದ ಕ್ರೀಡಾಕೂಟ ಯಶಸ್ವಿಯಾಗಿದೆ. ಸಚಿವರು, ಮಡಿಕೇರಿ ಶಾಸಕರರನ್ನು ಕ್ರೀಡಾ ಕೂಟಕ್ಕೆ ಆಹ್ವಾನಿಸಿದ್ದೆವು ಆದರೆ ಅವರು ಗೈರು ಹಾಜರಾಗಿರುವುದು ಬೇಸರ ತಂದಿದೆ. ಪಂದ್ಯಾವಳಿ ಯಶಸ್ಸಿಗೆ ಆಲೀರ ಕುಟುಂಬದ ಸದಸ್ಯರು ಹಗಲು ರಾತ್ರಿ ಎನ್ನದೆ ಶ್ರಮಿಸಿ ಮಳೆಯ ಅಡಚಣೆ ನಡುವೆಯೂ ಅಚ್ಚುಕಟ್ಟಾಗಿ ಕ್ರೀಡಾಕೂಟವನ್ನು ನಡೆಸಿ ರುವುದು ಸಂತಸ ತಂದಿದೆ ಎಂದರು.
ಪೊನ್ನಂಪೇಟೆ ನಾಗರಿಕ ವೇದಿಕೆಯ ಅಧ್ಯಕ್ಷ ವಿಶ್ವನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಆನೇಕಲ್ ನ್ಯಾಯಾಲಯದ ನ್ಯಾಯಾಧೀಶರಾದ ಅಲೀರ ಸಲ್ಮಾ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆಲೀರ ಕುಟುಂಬದ 30 ಸಾಧಕ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊಡವ ಜಮ್ಮ ಮುಸ್ಲಿಂ ಲೋಗೋವನ್ನು ಕೊಡವ ಜಮ್ಮ ಮುಸ್ಲಿಂ ಸ್ಪೋರ್ಟ್ಸ್ ಅಯಿಂಡ್ ಕಲ್ಚರ್ ಅಧ್ಯಕ್ಷ ಕುವೆಲರ ಅನೀಸ್ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಆಲೀರ ಕುಟುಂಬ ತಕ್ಕಮುಖ್ಯಸ್ಥ ಕುಟ್ಟಿ ಆಲಿ, ಆಲೀರ ಕುಟುಂಬದ ಸೇವಾ ಸಂಘದ ಅಧ್ಯಕ್ಷ ಆಲೀರ ಪವಿಲ್ ಉಸ್ಮಾನ್, ಉಪಾಧ್ಯಕ್ಷರಾದ ಆಲೀರ ಅಹಮದ್ ಹಾಜಿ, ಆಲೀರ ಅಬ್ದುಲ್ಲ, ಮಾಪಿಳೆತೋಡು ಕಲ್ಲಾಯಿ ಜುಮ್ಮಾ ಮಸೀದಿ ಅಧ್ಯಕ್ಷ ಆಲೀರ ಪಿ. ಆಲಿ, ಕ್ರೀಡಾ ಸಮಿತಿ ಸಂಚಾಲಕ ಆಲೀರ ನಸೀರ್ ಬಾಜಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಪಿ.ಎ ಹನೀಫ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೋಳುಮಂಡ ರಫೀಕ್, ಪೊನ್ನಂಪೇಟೆ ವಕೀಲರಾದ ಸುಳ್ಳಿಮಾಡ ಧ್ಯಾನ್ ದೇವಯ್ಯ, ಬೇಗೂರು ಈಶ್ವರ ದೇವಸ್ಥಾನದ ಅಧ್ಯಕ್ಷರಾದ ಬೊಳ್ಳಂಗಡ ದಾದು ಪೂವಯ್ಯ, ವಿರಾಜಪೇಟೆ ರಿಟೈರ್ಡ್ ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ಆಲೀರ ಉಸ್ಮಾನ್, ನಿವೃತ್ತ ಅಬಕಾರಿ ಇನ್ಸ್ಪೆಕ್ಟರ್ ಆಲೀರ ಹುಸೇನ್, ಮುಂಬೈನ ಎನ್. ಸಿ. ಟಿ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕ ಅಕ್ಕಳತಂಡ ಮೊಯ್ದು, ಆಲೀರ ಸಾದಲಿ ಅಂಬಟ್ಟಿ, ಕಾಟ್ರಕೊಲ್ಲಿ ವಕ್ಸ್ ಬೋರ್ಡ್ ಸದಸ್ಯ ಆಲೀರ ಅಬ್ದುಲ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಹಕೀಂ, ಆಲೀರ ಕ್ರಿಕೆಟ್ ಕ್ರೀಡಾಕೂಟದ ಸದಸ್ಯರು, ಇನ್ನಿತರರು ಉಪಸ್ಥಿತರಿದ್ದರು.