ಚೆಕ್ಕೇರ ಕಪ್ ಕ್ರಿಕೆಟ್ : ಅಜ್ಜಿಕುಟ್ಟಿರ ತಂಡದ ಪರ ಆಲ್ ರೌಂಡರ್ ಆಗಿ ಮೈದಾನಕ್ಕಿಳಿದ ಶಾಸಕ ಪೊನ್ನಣ್ಣ

ಗೋಣಿಕೊಪ್ಪ: ಹುದಿಕೇರಿಯಲ್ಲಿ ನಡೆಯುತ್ತಿರುವ ಚೆಕ್ಕೇರ ಕಪ್ ಕ್ರಿಕೆಟ್ ಪಂದ್ಯಾವಳಿಯ ವಿಶೇಷ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಶುಭ ಕೋರಿದರು. ಕೊಡಗಿನ ಕೊಡವ ಕುಟುಂಬಸ್ಥರ ನಡುವೆ ನಡೆಯುತ್ತಿರುವ ಪ್ರತಿಷ್ಠಿತ ಚೆಕ್ಕೇರ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ, ಹಲವು ಪ್ರಬಲ ಕ್ರಿಕೆಟ್ ಕುಟುಂಬಗಳು ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸೆಣಸಾಟ ನಡೆಸುತ್ತಿದೆ. ಇಂದು ಮೈದಾನಕ್ಕೆ ಭೇಟಿ ನೀಡಿದ ಶಾಸಕರು, ಕ್ರಿಕೆಟ್ ತಂಡಗಳ ಸದಸ್ಯರೊಂದಿಗೆ ಹಲವು ಸಮಯವನ್ನು ಕಳೆದು ಎಲ್ಲರಿಗೂ ಯಶಸ್ಸಿನ ಶುಭ ಕೋರಿದರು. ಕಪ್ ಗಾಗಿ ಸೆಣಸಾಡುತ್ತಿರುವ ಆಟಗಾರರಿಗೆ ಕಿವಿಮಾತು ಹೇಳಿದ ಮಾನ್ಯ ಶಾಸಕರು, ಪಂದ್ಯಾಟವು ಆರೋಗ್ಯಕರ ಸೆಣಸಾಟದಿಂದ ಕೂಡಿರಲಿ ಹಾಗೂ ಗೆಲುವಿನ ಸಂಭ್ರಮವನ್ನು ಎಲ್ಲರೂ ಖುಷಿಯಿಂದ ಆಸ್ವಾದಿಸುವಂತಾಗಲಿ ಎಂದು ಹಾರೈಸಿದರು. ಕ್ರಿಕೆಟ್ ಆಯೋಜಕರ ಪರಿಶ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಮಾನ್ಯ ಶಾಸಕರು, ಮುಂದಿನ ದಿನಗಳಲ್ಲಿ ಈ ಪಂದ್ಯಾಟವು ಮತ್ತಷ್ಟು ಪ್ರಬಲವಾಗಿ ಮೂಡಿಬರಲಿ ಎಂದು ಹಾರೈಸಿದರು.
What's Your Reaction?






