ಅಭಿವೃದ್ಧಿ ಕಾಣದ ವಿರಾಜಪೇಟೆ ಪಟ್ಟಣ: ನಾಗರಿಕ ಸಮಿತಿ ಅಸಮಾಧಾನ
ವಿರಾಜಪೇಟೆ: ನಗರದಲ್ಲಿ ರಸ್ತೆ ದುರಸ್ಥಿ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಪಾದಚಾರಿ ರಸ್ತೆ, ಬೀದಿ ದೀಪ ಸೇರಿದಂತೆ ಹಲವಾರು ಮೂಲಭೂತ ಸಮಸ್ಯೆಗಳಿವೆ. ಅಭಿವೃದ್ದಿ ಹೆಸರಿನಲ್ಲಿ ಜನ ಸಮಾನ್ಯರ ತೆರಿಗೆ ಹಣ ಪೋಲಾಗುತ್ತಿದೆ. ನಿರ್ದಿಷ್ಟವಾದ ಯೋಜನೆಗಳಿಗೆ ವಿನಿಯೋಗವಾಗದೆ, ದುಂದುವೆಚ್ಚಕ್ಕೆ ಸರ್ಕಾರದ ಹಣ ಸಂದಾಯವಾಗುತ್ತಿದೆ ಎಂದು ನಾಗರಿಕ ಸಮಿತಿಯು ಆರೋಪಿಸಿದೆ.
ನಾಗರಿಕ ಸಮಿತಿ ವಿರಾಜಪೇಟೆ ವತಿಯಿಂದ ನಗರದ ದೊಡ್ಡಟ್ಟಿ ಚೌಕಿ ಬಳಿಯ ಕಛೇರಿಯಲ್ಲಿ ನಗರದ ಸಮಸ್ಯೆಗಳ ಚಿತ್ರಣವನ್ನು ಮುಖ್ಯಾಧಿಕಾರಿಗಳಿಗೆ ಮನದಟ್ಟು ಮಾಡಿರುವ ವಿಚಾರಕ್ಕೆ ಸಂಭಂದಿಸಿದಂತೆ ಪತ್ರಿಕಾಗೋಷ್ಟಿ ಕರೆಯಲಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಗರಿಕ ಸಮಿತಿಯ ಸಂಚಾಲಕರಾದ ಡಾ.ಇ.ಆರ್. ದುರ್ಗಾಪ್ರಸಾದ್, ನಗರದಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ. ಹೈಟೆಕ್ -ಹೈಟೆಕ್ ಎಂದು ಅಭಿವೃದ್ದಿ ಪಡಿಸುತ್ತೇವೆ ಎಂಬ ಹೆಸರಿನಲ್ಲಿ ಜನ ಸಾಮಾನ್ಯರ ತೆರಿಗೆ ಹಣವು ದುಂದುವೆಚ್ಚಗಳಿಗೆ ವ್ಯಯವಾಗುತ್ತಿರುವುದು ಶೋಚನೀಯ.ಬ್ಲಾಕ್ ನಂ 06 ರಲ್ಲಿ ಯಾವುದೇ ಪರವಾನಿಗೆ ಇಲ್ಲದೆ, ಅಕ್ರಮವಾಗಿ ಟವರ್ ನಿರ್ಮಾಣಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿ ರಾಜ್ಯ ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ನ್ಯಾಯಾಲಯವು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾಹಿಸಿತು. ಜಿಲ್ಲಾಧಿಕಾರಿಗಳು ಆದೇಶ ಮಾಡಿದರು ಪುರಸಭೆಯು ಆದೇಶ ಪಾಲನೆ ಮಾಡುವಲ್ಲಿ ವಿಫಲವಾಗಿದೆ. ನಗರದಲ್ಲಿ ಕೆರೆಗಳ ಅಭಿವೃದ್ದಿ ಎಂದು ಕೋಟಿ ಹಣ ವ್ಯಯ ಮಾಡಿದ್ದಾರೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಆದೇಶ, ರಾಜ್ಯ ಸರ್ಕಾರದ ಆದೇಶ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಪಾಲನೆ ಮಾಡದೆ ಕಾನೂನು ಬಾಹಿರವಾಗಿ ಕಾಮಗಾರಿಗಳು ನಡೆದಿರುವುದು ಅಕ್ಷಮ್ಯ ಅಪರಾಧವಾಗಿದೆ. ಪಟ್ಟಣ ಪಂಚಾಯಿತಿಯಿಂದ ಪುರಸಭೆಗೆ ಮೇಲ್ದರ್ಜೆಗೆ ಏರಿಕೆ ಕಂಡಿದೆ. ನಗರದ ಸನಿಹದ ಗ್ರಾಮಗಳ ಕೆಲವು ಭಾಗಗಳು ನಗರದ ವ್ಯಾಪ್ತಿ ಸೇರ್ಪಡೆಗೊಂಡಿದೆ. ಗ್ರಾಮ ವಾಸಿಗಳು ನಗರಕ್ಕೂ ಗ್ರಾಮ ಪಂಚಾಯಿತಿಗೂ ತೆರಿಗೆ ಪಾವತಿ ಮಾಡುತಿದ್ದಾರೆ. ಇಂದಿನ ವರೆಗೆ ಗ್ರಾಮ ವ್ಯಾಪ್ತಿ ಭಾಗಗಳ ಸ್ಥಳದ ಗಡಿಭಾಗ ನಿಗದಿಗೊಳಿಸಲಿಲ್ಲ. ಗ್ರಾಮವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.ದಿನದಿನ ವಾಹನ ದಟ್ಟಣೆಗಳಿಂದ ನಗರದಲ್ಲಿ ಸಂಚಾರ ಸುವ್ಯವಸ್ಥೆ ಹದಗೆಟ್ಟಿದೆ. ರಸ್ತೆ ಆಗಲೀಕರಣವಾಗಬೇಕು ಮತ್ತು ಅಭಿವೃದ್ದಿಯಾಗಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಆದರೆ ರಸ್ತೆ ಬದಿಯ ನಿವಾಸಿಗಳಿಗೆ ಸೂಕ್ತ ಪರಿಹಾರ ನೀಡಿ ಅಭಿವೃದ್ದಿಪಡಿಸಬೇಕು. ಮೂಲಭೂತ ಸೌಕರ್ಯಗಳಲ್ಲಿ ಒಳಚರಂಡಿ ವ್ಯವಸ್ಥೆ ತೀರ ಹದಗೆಟ್ಟಿದೆ. ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ದುರ್ಗಂದ ಬೀರುತ್ತಿದೆ. ಚರಂಡಿಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಒಳಚರಂಡಿ ವ್ಯವಸ್ಥೆ ಸರಿಪಡಿಬೇಕು ಎಂದು ಸಮಸ್ಯೆಗಳ ಅನಾವರಣ ಮಾಡಿದರು.
ನಾಗರಿಕ ಸಮಿತಿಯ ಸದಸ್ಯರಾದ ಎನ್.ಕೆ.ಶರೀಫ್ ಮಾತನಾಡಿ, ರಾಜ್ಯ ಹಸಿ ಮೀನು ಮಾರಾಟ ಮಂಡಳಿ ಅವರು ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಆದರೆ ಮೂಲಭೂತ ಸೌಕರ್ಯ ನೀಡಿರುವುದಿಲ್ಲ. ಮಾರುಕಟ್ಟೆಯಲ್ಲಿ ಕೆಲವು ಅಂಗಡಿ ಮಳಿಗೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹರಾಜು ಪ್ರಕ್ರಿಯೆಯಿಂದ ಮೀನಿನ ದರಗಳು ಗಗನಕ್ಕೇರಿದೆ. ಇದರಿಂದ ಬಂಡವಾಳಶಾಹಿಗಳ ಹೊಟ್ಟೆ ತುಂಬಿದೆ. ದಿನದಿನ್ಯ ಹಸಿ ಮೀನು ಕಡಿಮೆ ದರದಲ್ಲಿ ನಗರಕ್ಕೆ ಆಗಮಿಸುತ್ತಿದೆ. ಬಿಡಿ ಮೀನು ಮಾರಾಟಗಾರರಿಗೂ ಅವಕಾಶ ಮಾಡಿಕೊಟ್ಟಲ್ಲಿ ಹಸಿ ಮೀನಿನ ದರ ಕಡಿಮೆಯಾಗುತ್ತದೆ. ನಗರದಲ್ಲಿ ಅಲ್ಲಲ್ಲಿ ಕುರಿ ಮಾಂಸ ಮತ್ತು ಕೋಳಿ ಮಾಂಸದ ಅಂಗಡಿಗಳು ತಲೆಎತ್ತಿವೆ. ನಗರದಲ್ಲಿ ಶುಚಿತ್ವದ ಕೊರತೆ ಎದ್ದು ಕಾಣುತ್ತಿದೆ.ಮೊದಲಿನಂತೆ ಕುರಿ ಮಾಂಸ ,ಕೋಳಿ ಮಾಂಸ ಮೀನು ಮತ್ತು ಒಣ ಮೀನುನ ಮಳಿಗೆಗಳ ಒಂದೇ ಸೂರಿನಡಿಯಲ್ಲಿ ಲಭ್ಯವಾಗಬೇಕು ಎಂದು ಆಗ್ರಹಿಸಿದರು.
ನಾಗರಿಕ ಸಮಿತಿಯ ಸದಸ್ಯರಾದ ಹೆಚ್.ಆರ್. ಶಿವಪ್ಪ ಮಾತನಾಡಿ, ಪುರಸಭೆಯ ಕಛೇರಿಯಲ್ಲಿ ಫಾರಂ ನಂ 03 ನೀಡುವ ಸಮಯದಲ್ಲಿ ತಪ್ಪುಗಳಾದಲ್ಲಿ ಮರು ತಿದ್ದಲು 45 ದಿನಗಳ ಕಾಲಾವಕಾಶ ಕೇಳಲಾಗುತ್ತಿದೆ. ಸಿಬ್ಬಂದಿಗಳು ಲೋಪ ಮಾಡಿ ನಂತರ ಅರ್ಜಿದಾರರನ್ನು ಗುರಿಯಾಗಿಸಿ ಕಾಲಾವಕಾಶ ಕೇಳುವುದರಲ್ಲಿ ಆರ್ಥವಿಲ್ಲ.ವಿನಾ: ಕಾರಣ ಆರ್ಜಿದಾರರನ್ನು ಸತಾಯಿಸುವುದು ದಿನನಿತ್ಯ ಕ್ರಮವಾಗಿದೆ. ಅರ್ಜಿದಾರರು ಸಲ್ಲಿಸುವ ಅರ್ಜಿಗಳು ಶೀಘ್ರಗತಿಯಲ್ಲಿ ವಿಲೇವಾರಿಯಾಗದೆ, ಸಕಾಲದಲ್ಲಿ ಫಾರಂ ನಂ 03 ಮತ್ತು ಇತರ ದಾಖಲೆಗಳು ದೊರಕುವುದು ಕಷ್ಟಕರವಾಗಿದೆ ಎಂದು ದೂರಿದರು. ಇದು ಹಣ ಮಾಡುವ ಉದ್ದೇಶದಿಂದ ಪದೇ ಪದೆ ಕಛೇರಿಗೆ ಅಲೆಸುವುದು ವಾಡಿಕೆಯಾಗಿದೆ ಎಂದು ಆರೋಪಿಸಿದರು.
ನಾಗರಿಕ ಸಮಿತಿ ವಿರಾಜಪೇಟೆ ವತಿಯಿಂದ ಸಮಿತಿಯ ಸದಸ್ಯರು ಮುಖ್ಯಾಧಿಕಾರಿಗಳನ್ನು ಭೇಟಿ ಮಾಡಿ ನಗರದ ಸಮಸ್ಯೆಗಳ ಬಗ್ಗೆ ತಿಳಿಯಪಡಿಸಿದ್ದು,ಸಮಸ್ಯೆ ಇತೈರ್ಥ ಮಾಡಲು ಎರಡು ತಿಂಗಳ ಗಡವು ನೀಡಲಾಗಿದೆ. ಬಳಿಕ ಹಂತ ಹಂತವಾಗಿ ನಗರದ ಸಾರ್ವಜನಿಕರೊಂದಿಗೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
What's Your Reaction?






