ಬಾಗಿಲು ಮುಚ್ಚಲಿದೆ 62 ವರ್ಷಗಳ ಇತಿಹಾಸದ ಮರಗೋಡು ಭಾರತಿ ಸಂಯುಕ್ತ ವಿದ್ಯಾಸಂಸ್ಥೆ

ಸಿದ್ದಾಪುರ:ಸುಮಾರು 62 ವರ್ಷಗಳ ಇತಿಹಾಸ ಹೊಂದಿರುವ ಮರಗೋಡು ಭಾರತಿ ಸಂಯುಕ್ತ ವಿದ್ಯಾಸಂಸ್ಥೆ ಮುಚ್ಚುವ ಹಂತಕ್ಕೆ ಬಂದು ತಲುಪಿದೆ. ಈಗಾಗಲೇ ಪ್ರೌಢ ಶಾಲೆಗೆ ಬೀಗ ಹಾಕಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಕಾಲೇಜ್ ಕೂಡ ಬಂದ್ ಆಗಲಿದೆ.
ಮಡಿಕೇರಿ ತಾಲ್ಲೂಕಿನ ಮರಗೋಡು ಗ್ರಾಮದಲ್ಲಿರುವ ಮರಗೋಡು ಭಾರತಿ ಸಂಯುಕ್ತ ವಿದ್ಯಾಸಂಸ್ಥೆ 1963 ಜುಲೈನಲ್ಲಿ ಸ್ಥಾಪನೆಗೊಂಡಿತು. ಈ ಅನುದಾನಿತ ವಿದ್ಯಾಸಂಸ್ಥೆ ಇಲ್ಲಿಯವರೆಗೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಾ ಬಂದಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ವರದಾನವಾಗಿದ್ದ ವಿದ್ಯಾಸಂಸ್ಥೆ ಇಂದು ಇತಿಹಾಸದ ಪುಟಗಳಲ್ಲಿ ಸೇರಿ ಹೋಗುತ್ತಿದೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಪ್ರತಿಯೊಂದು ಸರ್ಕಾರ ಕನ್ನಡ ಶಾಲೆಗಳು ಉಳಿಯಬೇಕೆನ್ನುವ ಅಭಿಲಾಷೆಯನ್ನು ವ್ಯಕ್ತಪಡಿಸುತ್ತವೆ. ಇದರ ಜೊತೆಯಲ್ಲೇ ಕನ್ನಡ ಶಾಲೆಗಳಿಗೆ ಪೈಪೋಟಿ ನೀಡಲು ಆಂಗ್ಲ ಮಾಧ್ಯಮದ ಶಾಲೆಗಳಿಗೆ ಅನುಮತಿಯನ್ನೂ ನೀಡುತ್ತವೆ. ಸರ್ಕಾರದ ಈ ದ್ವಂದ್ವ ನಿಲುವುಗಳಿಂದ ರಾಜ್ಯದ ಸಾವಿರಾರು ಕನ್ನಡ ಶಾಲೆಗಳು ಮುಚ್ಚಿ ಹೋಗಿದ್ದು, ಇವುಗಳ ಸಾಲಿಗೆ ಮರಗೋಡು ಭಾರತಿ ಸಂಯುಕ್ತ ವಿದ್ಯಾಸಂಸ್ಥೆಯೂ ಸೇರ್ಪಡೆಯಾಗಲಿದೆ.
ನುರಿತ ಶಿಕ್ಷಕರ ಪಾಠ, ಉತ್ತಮ ಫಲಿತಾಂಶ, ಮೂಲಭೂತ ಸೌಲಭ್ಯಗಳ ಲಭ್ಯತೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತೋರಿದ ದಕ್ಷತೆಯಿಂದ ಈ ವಿದ್ಯಾಸಂಸ್ಥೆ ಅತ್ಯಂತ ಖ್ಯಾತಿ ಗಳಿಸಿತ್ತು. ಮರಗೋಡು ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಿದ್ದಾರೆ. ಅನೇಕರು ಉನ್ನತ ಹುದ್ದೆ ಮತ್ತು ಸರ್ಕಾರಿ ಉದ್ಯೋಗದಲ್ಲಿದ್ದು, ಹಲವರು ಸ್ವಾವಲಂಬಿಗಳಾಗಿ ಉದ್ಯಮ ಹಾಗೂ ವ್ಯಾಪಾರದಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳಿಗೆ ಸುಂದರ ಜೀವನವನ್ನು ನೀಡಿದ ಮರಗೋಡು ಭಾರತಿ ಸಂಯುಕ್ತ ವಿದ್ಯಾಸಂಸ್ಥೆ ಇಂದು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಕ್ಕೆ ಬಂದು ತಲುಪಿದೆ.
ತಾವು ವ್ಯಾಸಂಗ ಮಾಡಿದ ವಿದ್ಯಾಸಂಸ್ಥೆಗೆ ಶಾಶ್ವತವಾಗಿ ಬೀಗ ಬೀಳ್ತುರುವ ಬಗ್ಗೆ ಹಳೆಯ ವಿದ್ಯಾರ್ಥಿಗಳು ಅತೀವ ದು:ಖ ವ್ಯಕ್ತಪಡಿಸಿದ್ದಾರೆ. ಪ್ರೌಢ ಶಾಲೆಗೆ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಬಂದಿರುವುದರಿಂದ ದಾಖಲಾತಿಯನ್ನು ಸ್ಥಗಿತಗೊಳಿಸಲಾಗಿದೆ. ಪದವಿ ಪೂರ್ವ ಕಾಲೇಜ್ ನ ಕೊನೆಯ ಬ್ಯಾಚ್ ನ ದ್ವಿತೀಯ ಪಿಯುಸಿ ತರಗತಿ ಮಾತ್ರ ಪ್ರಸ್ತುತ ವರ್ಷ ನಡೆಯಲಿದೆ. ಮುಂದಿನ ವರ್ಷದಿಂದ ಪದವಿ ಪೂರ್ವ ಕಾಲೇಜ್ ಕೂಡ ಬಂದ್ ಆಗಲಿದೆ.
ನವೀನ ತಂತ್ರಜ್ಞಾನದ ಇಂದಿನ ವೇಗದ ಯುಗದಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲ ಪೋಷಕರು ಕೂಡ ಆಂಗ್ಲ ಮಾಧ್ಯಮ ಶಾಲೆಗಳ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಜ್ಞಾನ ದೇಗುಲವಾಗಿರುವ ಮರಗೋಡು ಭಾರತಿ ಸಂಯುಕ್ತ ವಿದ್ಯಾಸಂಸ್ಥೆಯನ್ನು ಸರ್ಕಾರ ಉಳಿಸಿಕೊಳ್ಳುವ ಕಾರ್ಯವನ್ನು ಮಾಡಬಹುದಾಗಿತ್ತು. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪೈಪೋಟಿ ನೀಡಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಿ ಪ್ರೋತ್ಸಾಹಿಸಬಹುದಾಗಿತ್ತು. ಆದರೆ ಇಂದು ಈ ವಿದ್ಯಾಸಂಸ್ಥೆ ಯಾರಿಗೂ ಬೇಡವಾಗಿದೆ, 62 ವರ್ಷಗಳ ವಿದ್ಯಾವೈಭವಕ್ಕೆ ತೆರೆ ಬೀಳಲಿದೆ.
ವರದಿ:ಅಂಚೆಮನೆ ಸುಧಿ
What's Your Reaction?






