ಮೈಸೂರಿಗೆ ಸೀಮಿತಗೊಂಡರೆ ಯುವರಾಜ!! ಯದುವೀರ್ ಒಡೆಯರ್ ಸಂಸದರಾಗಿ ಗೆಲುವು ಸಾಧಿಸಿ ಒಂದು ವರ್ಷ ಪೂರ್ಣ!

Jun 4, 2025 - 15:56
 0  46
ಮೈಸೂರಿಗೆ ಸೀಮಿತಗೊಂಡರೆ ಯುವರಾಜ!!  ಯದುವೀರ್ ಒಡೆಯರ್ ಸಂಸದರಾಗಿ ಗೆಲುವು ಸಾಧಿಸಿ ಒಂದು ವರ್ಷ ಪೂರ್ಣ!

(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ:ಯದುವೀರ್ ಶ್ರೀ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ರಾಜವಂಶಸ್ಥ ಹಾಗೂ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ.ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದು ಸುಲಭದ ಗೆಲುವು ದಾಖಲಿಸಿ ಲೋಕಸಭೆಯ ಮೆಟ್ಟಿಲೇರಿದರು.ಇದೀಗ ಯದುವೀರ್ ಒಡೆಯರ್ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಗೆಲುವು ಸಾಧಿಸಿ(ಇಂದಿಗೆ) ಜೂನ್ 04 ಕ್ಕೆ ಒಂದು ವರ್ಷ ಪೂರ್ಣಗೊಂಡಿದೆ.ಅನಿರೀಕ್ಷಿತವಾಗಿ ರಾಜಕೀಯಕ್ಕೆ ಎಂಟ್ರಿಕೊಟ್ಟು,ಮೊದಲ ಪ್ರಯತ್ನದಲ್ಲೇ ಸಂಸದರಾಗಿ ಗೆಲುವು ಸಾಧಿಸಿದ್ದ ಯದುವೀರ್ ಒಡೆಯರ್ ಅವರ ಮೇಲೆ ಹಲವು ನಿರೀಕ್ಷೆಗಳು ಇವೆ.ಸಂಸದರಾಗಿ ಒಂದು ವರ್ಷ ಪೂರೈಸಿರುವ ಯದುವೀರ್ ಒಡೆಯರ್ ಮೈಸೂರು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಹಾಗೂ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುವ ಸಂಸದ. ಆದರೆ ಒಂದು ವರ್ಷ ಪೂರ್ಣಗೊಳ್ಳುವಾಗ ಯದುವೀರ್ ಒಡೆಯರ್ ಮೈಸೂರು ಜಿಲ್ಲೆಗೆ ಸೀಮಿತಗೊಂಡಂತೆ ಕಾಣುತ್ತಿದೆ. ಕೊಡಗು ಜಿಲ್ಲೆಗೆ ಎರಡು ತಿಂಗಳಿಗೊಮ್ಮೆ ಅಥವಾ ತಿಂಗಳಿಗೆ ಒಂದೆರೆಡು ಬಾರಿ ಮಾತ್ರ ಭೇಟಿ ನೀಡುತ್ತಿದ್ದಾರೆ.ಕೊಡಗು ಜಿಲ್ಲೆಗೆ ಪ್ರವಾಸ ಕೈಗೊಂಡರೂ ಕೂಡ ಜನಸಾಮಾನ್ಯರ ಅಹವಾಲು ಸ್ವೀಕರಿಸಲು ಸಂಸದರು ಜನರ ಕೈಗೆ ಸಿಗುವುದಿಲ್ಲ ಎಂಬ ಆರೋಪಗಳು ಇವೆ.ಮೇ ತಿಂಗಳು ಕೊನೆಯ ವಾರದಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಮಳೆಗಾಲಕ್ಕೂ ಮುನ್ನವೇ ಅನಾಹುತಗಳು ಸಂಭವಿಸಿದೆ.ಆದರೆ ಯದುವೀರ್ ಇದುವರೆಗೆ ಕೊಡಗು ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿಲ್ಲ.ಜಿಲ್ಲಾ ಕೆಡಿಪಿ ಸಭೆಗಳಿಗೆ ಮಾತ್ರ ಯದುವೀರ್ ಒಡೆಯರ್ ಸೀಮಿತಗೊಂಡತೆ ಕಾಣುತ್ತಿದೆ. ಯದುವೀರ್ ಒಡೆಯರ್ ಮೈಸೂರು ಜಿಲ್ಲೆಗೆ ಅತೀ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ.ಮೈಸೂರು ದೊಡ್ಡ ಜಿಲ್ಲೆ,ಹೆಚ್ಚಿನ ಸಮಯವನ್ನು ಮೈಸೂರು ಜಿಲ್ಲೆಗೆ ನೀಡಬೇಕು.ಆದರೆ ಕೊಡಗು ಜಿಲ್ಲೆಯನ್ನು ಕಡೆಗಣಿಸದೆ ಇತ್ತ ಕಡೆ ಕೂಡ ಸಂಸದರು ಗಮನಕೊಡಬೇಕಿದೆ.ಪುಟ್ಟ ಜಿಲ್ಲೆ ಎಂದು ಆರಂಭದಲ್ಲೇ ನಿರ್ಲಕ್ಷ್ಯವಹಿಸುವುದು ಸರಿಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

ಕೊಡಗು ಬಿಜೆಪಿಗರ ಕೈಗೂ ಸಿಗದ ಸಂಸದ!

ಯದುವೀರ್ ಒಡೆಯರ್ ಅವರನ್ನು ಮಾನಸಿಕವಾಗಿ ಕೊಡಗು ಬಿಜೆಪಿಯ ಬಹುತೇಕ ಮುಖಂಡರು ಕಾರ್ಯಕರ್ತರು,ಸಂಸದ ಎಂದು ಇದುವರೆಗೆ ಒಪ್ಪಿಕೊಂಡಿಲ್ಲ.ಕೊಡಗಿನ ಬಿಜೆಪಿಗರಿಗೆ ಇಂದಿಗೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರೇ ಸಂಸದ ಎಂಬ ಅಭಿಪ್ರಾಯ ಬಿಜೆಪಿ ವಲಯದಲ್ಲಿ ಇದೆ.ಯದುವೀರ್ ಒಡೆಯರ್ ಅವರಿಗೆ ರಾಜಕೀಯ ಅನುಭವ ಇಲ್ಲ.ಮೊದಲ ಪ್ರಯತ್ನದಲ್ಲೇ ಸಂಸದರಾದ ಯದುವೀರ್ ಅವರು ಕೊಡಗು ಬಿಜೆಪಿ ಮುಖಂಡರು ,ಕಾರ್ಯಕರ್ತರ ಕೈಗೆ ಸಿಗುತ್ತಿಲ್ಲ ಎಂಬ ಆರೋಪಗಳಿವೆ.ಕಳೆದ ಎರಡು ದಶಕಗಳ‌ ಬಳಿಕ ಕೊಡಗು ಜಿಲ್ಲಾ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ತಮ್ಮ ಪಕ್ಷದ ಶಾಕಸರು ಇಲ್ಲದಂತಾಗಿದೆ.ವಿಧಾನಪರಿಷತ್ ಸದಸ್ಯರು ಇದ್ದರೂ ಕೂಡ ಅವರೇನೂ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಕಾರ್ಯಕರ್ತರ ಕೈಗೆ ಸಿಗುತ್ತಿಲ್ಲ. ಸುಜಾ ಕುಶಾಲಪ್ಪ ಕೊಡಗು ಜಿಲ್ಲೆಯ ಎಲ್ಲಾ ಭಾಗಗಳಿಗೆ ಪ್ರವಾಸ ಕೈಗೊಂಡಿರುವುದು ವಿರಳ.ಬರೀ ವಿರಾಜಪೇಟೆಗೆ ಭಾಗಗಳಿಗೆ ಸೀಮಿತಗೊಂಡಿದ್ದಾರೆ.ಪದವೀಧರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಧನಂಜಯ ಸರ್ಜಿ ಗೆಲುವು ಸಾಧಿಸಿದ ನಂತರ ಕೊಡಗಿಗೆ ತಿರುಗಿ ನೋಡಿಯೇ ಇಲ್ಲ. ತಮ್ಮ ಪಕ್ಷದ ಸಂಸದ ಯದುವೀರ್ ಒಡೆಯರ್ ಕೂಡ ಬಿಜೆಪಿಗರ ಕೈಗೆ ಸಿಗದೆ,ಕೊಡಗು ಬಿಜೆಪಿ ಒಂದು ರೀತಿಯಲ್ಲಿ ತಾಯಿ ಇದ್ದರೂ ಕೂಡ ಅನಾಥ ಎಂಬ ಸ್ಥಿತಿಯಲ್ಲಿದೆ.ಒಂದು ವೇಳೆ ಯದುವೀರ್ ಕೊಡಗು ಪ್ರವಾಸ ಕೈಗೊಂಡರು ಸಹಾ,ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಪದಾಧಿಕಾರಿಗಳಿಗೆ ಸರಿಯಾದ ಮಾಹಿತಿ ಕೂಡ ಇರಲ್ಲ.ಯದುವೀರ್ ಒಡೆಯರ್ ಕೊಡಗಿಗೆ ಬಂದರು ಕೂಡ ಕಾರ್ಯಕ್ರಮ ಮುಗಿಸಿ ಪಟ್ಟನೇ ಮೈಸೂರು ಕಡೆ ಮುಖ ಮಾಡುತ್ತಾರೆ ಎಂಬ ಅಸಮಾಧಾನ ಬಿಜೆಪಿಯೊಳಗೆ ಇದೆ.ಆದರೆ ಶಿಸ್ತಿನ ಪಕ್ಷದಲ್ಲಿ ಬಹಿರಂಗವಾಗಿ ವ್ಯಕ್ತಪಡಿಸುತ್ತಿಲ್ಲ ಅಷ್ಟೇ.ಅದಲ್ಲದೇ ಮಾಜಿ ಶಾಸಕದ್ವಯರು ಬಿಜೆಪಿ ಪಕ್ಷದಲ್ಲಿ ಸೋಲು‌ ಕಂಡ ನಂತರ ಆ್ಯಕ್ಟೀವ್ ಆಗಿರುವುದರಿಂದಲೂ ಕೂಡ ಯದುವೀರ್ ಒಡೆಯರ್ ಅವರಿಗೆ ಅವರನ್ನು ಬ್ರೇಕ್ ಮಾಡಿ‌ ಯಾವುದೇ ತೀರ್ಮಾನ ಕೂಡ ಕೈಗೊಳ್ಳುವುದು ಕನಸಿನ ಮಾತು.

ಹಾಲಿಗಿಂತ ಮಾಜಿಯೇ ಆ್ಯಕ್ಟೀವ್!

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಪ್ರತಾಪ್ ಸಿಂಹ ಅವರ ಕನಸಿಗೆ ಕಳೆದ ವರ್ಷ ಫೆಬ್ರವರಿ ಅಂತ್ಯ ಹಾಗೂ ಮಾರ್ಚ್ ಮೊದಲ ವಾರ ನಡೆದ ಅಚ್ಚರಿ ರಾಜಕೀಯ ಬೆಳವಣಿಗೆಯಲ್ಲಿ ಟಿಕೆಟ್ ಕೈ ತಪ್ಪಿ,ಯದುವೀರ್ ಒಡೆಯರ್ ಅವರ ಪಾಲಾಗಿತ್ತು.ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಅನಾಯಾಸವಾಗಿ ಗೆಲುವು ಸಾಧಿಸಿ ಮಂತ್ರಿ ಸ್ಥಾನದ ಕನಸಿನಲ್ಲಿ ಇದ್ದ ಪ್ರತಾಪ್ ಸಿಂಹ ಅವರಿಗೆ,ಬಿಜೆಪಿಯಲ್ಲಿ ತಂದೆ-ಮಗನನ್ನು ಬಹಿರಂಗವಾಗಿ ವಿರೋಧಿಸಿದ್ದ ಕಾರಣಕ್ಕಾಗಿ ಲೋಕಸಭಾ ಟಿಕೆಟ್ ಕೈ ತಪ್ಪಿತ್ತು ಎಂಬುದು ಗುಟ್ಟಾಗಿಯೇನೂ ಉಳಿದಿಲ್ಲ.ಪ್ರತಾಪ್ ಸಿಂಹ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ದಿನಗಳಿಂದ ಬಿಜೆಪಿಯ ರೆಬಲ್ ಬಣದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದಾರೆ.ಆದರೆ ಇದೀಗ ಕಳೆದ ಒಂದು ವರ್ಷಗಳಿಂದ ಕೊಡಗಿನ ರಾಜಕೀಯದಲ್ಲಿ ಪ್ರತಾಪ್ ಸಿಂಹ ಸಕ್ರಿಯವಾಗಿ ಬಿಜೆಪಿಯಲ್ಲಿ‌ ತೊಡಗಿಸಿಕೊಂಡಿದ್ದಾರೆ.ಮೈಸೂರು ಜಿಲ್ಲಾ ಬಿಜೆಪಿ ಕಾರ್ಯಕ್ರಮಗಳಿಗಿಂತ ಕೊಡಗು ಬಿಜೆಪಿ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ‌.ಮೈಸೂರು ಬಿಜೆಪಿಯಲ್ಲಿ ಪ್ರತಾಪ್ ಸಿಂಹನನ್ನು ವಿರೋಧಿಸುವವರೇ ಬಹುತೇಕರು ಎಂಬುದು ಕೂಡ ಮತ್ತೊಂದು ಸತ್ಯ.ಆದ್ದರಿಂದಲೇ ಮಾಜಿ ಸಂಸದ ಕೊಡಗು ಜಿಲ್ಲೆಯಲ್ಲಿ ಆ್ಯಕ್ಟೀವ್ ಆಗಿ‌ ಕಾಣಿಸಿಕೊಳ್ಳುತ್ತಿದ್ದಾರೆ.ಕೊಡಗಿನ ಶಾಸಕದ್ವಯರನ್ನು ಬಹಿರಂಗವಾಗಿ ವಿರೋಧಿಸಲು ಹಾಗೂ ಅವರ ವಿರುದ್ಧ ಹೇಳಿಕೆ ಕೊಡಲು ಕೊಡಗು ಬಿಜೆಪಿಗರು ಹಿಂದೇಟು ಹಾಕುತ್ತಿರುವುದರ ನಡುವೆ ಮಾಜಿ ಸಂಸದ ಪ್ರತಾಪ್ ಸಿಂಹ ಬಹಿರಂಗವಾಗಿಯೇ ಶಾಸಕದ್ವಯರ ವಿರುದ್ಧ ರಾಜಕೀಯ ಹೇಳಿಕೆಗಳು ನೀಡುತ್ತಲೇ ಇದೆ.ಹಾಲಿ‌ ಸಂಸದ ಯದುವೀರ್ ಒಡೆಯರ್ ಕೊಡಗಿನಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗುತ್ತಿದ್ದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಕೊಡಗಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ಕೊಡಗು ಬಿಜೆಪಿಗರು ಮರೆತರು ಕೂಡ ಕೊಡಗಿಗೆ ಆಗಮಿಸುವ ವೇಳೆ ಪದೇ ಪದೇ ಪ್ರತಾಪ್ ಸಿಂಹ ಕಾಂಗ್ರೆಸ್ ಶಾಸಕದ್ವಯರ ಮೇಲೆ ಆರೋಪ ಮಾಡುತ್ತಲೇ ಇದ್ದಾರೆ.ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕನನ್ನು ಟೀಕಿಸುವ ಬರದಲ್ಲಿ ಜನಾಂಗವೊಂದರ ವಿರೋಧವನ್ನು ಕೂಡ ಒಳಗೊಳಗೆ ಕಟ್ಟಿಕೊಂಡಿದ್ದಾರೆ.ಆದ್ದರಿಂದಲೇ ಇತ್ತೀಚಿನ ದಿನಗಳಲ್ಲಿ ಆ ಜನಾಂಗದ ಶಾಸಕನ ವಿರುದ್ಧ ರಾಜಕೀಯ ಹೇಳಿಕೆಗಳು ಕಡಿಮೆ ಮಾಡಿ,ಮಡಿಕೇರಿ ಕ್ಷೇತ್ರದತ್ತ ಕಣ್ಣಿಟ್ಟಿದ್ದಾರೆ.ಕೊಡಗಿನ ಬಿಜೆಪಿಗರಿಗೆ ಹಾಗೂ ಬಹುತೇಕ ಕಾರ್ಯಕರ್ತರಿಗೆ ಹಾಲಿ ಸಂಸದನಿಗಿಂತ ಮಾಜಿ ಸಂಸದನೇ,ಪ್ರಸ್ತುತ ಸಂಸದ ಎಂಬಂತೆ ಇದೆ.ತಮ್ಮ ಕೆಲಸಗಳಿಗೆ ಹಾಲಿ ಸಂಸದ ಯದುವೀರ್ ಒಡೆಯರ್ ಗಿಂತ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನೇ ಬಿಜೆಪಿಗರು ನೆಚ್ಚಿಕೊಂಡಿದ್ದಾರೆ.ಮತ್ತೊಂದೆಡೆ ರಾಜಕೀಯ ಸೂಕ್ಷ್ಮ ಹೇಳಿಕೆಗಳಿಂದ ದೂರವಿದ್ದು, ಹಾವು ಸಾಯಬಾರದು-ಕೋಲು ಮುರಿಯಬಾರದು ಎಂಬ ಪತ್ರಿಕಾ ಹೇಳಿಕೆಗಳನ್ನು ನೀಡುತ್ತಾ ಎಲ್ಲರನ್ನೂ ಯದುವೀರ್ ಒಡೆಯರ್ ಬ್ಯಾಲೆನ್ಸ್ ಮಾಡುತ್ತಾ,ಎಲ್ಲಾ ಜಾತಿ,ಧರ್ಮಗಳ ಪ್ರೀತಿ, ವಿಶ್ವಾಸ ಗಿಟ್ಟಿಸಿಕೊಂಡಿರುವುದು ಶ್ಲಾಘನೀಯ ಎನ್ನಬಹುದು.

ಕೊಡಗಿನ ಜನತೆಯ ನಿರೀಕ್ಷೆಗಳು ಹುಸಿಗೊಳ್ಳದಿರಲಿ!

ಕೊಡಗು-ಮೈಸೂರು ಲೋಕಸಭೆ ಕ್ಷೇತ್ರದ ಸಂಸದ ಯುವರಾಜ ಯದುವೀರ್ ಒಡೆಯರ್ ಅವರ ಮೇಲೆ ಹಲವು ನಿರೀಕ್ಷೆಗಳು ಜಿಲ್ಲೆಯ ಜನತೆ ಇಟ್ಟುಕೊಂಡಿದೆ.ಆರಂಭದ ಮೊದಲ ವರ್ಷವೇ ಯದುವೀರ್ ಒಡೆಯರ್ ಜಿಲ್ಲೆಯ ಜನತೆಯ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ.ಇನ್ನುಳಿದ ನಾಲ್ಕು ವರ್ಷಗಳ ಕಾಲ ಕೊಡಗಿನ ಜನತೆಯ ಧ್ವನಿಯಾಗಿ ಸಂಸದರು ಕಾರ್ಯನಿರ್ವಹಿಸಬೇಕಾಗಿದೆ.ಕೇಂದ್ರ ಸರ್ಕಾರದ ಯೋಜನೆಗಳನ್ನು ಮೈಸೂರು ಜಿಲ್ಲೆಗೆ ಮಾತ್ರ ಸೀಮಿತಗೊಳಿಸದೆ, ಕೊಡಗಿನತ್ತ ಗಮನಹರಿಸಬೇಕಾಗಿದೆ.ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಸಂಸತ್ ನಲ್ಲಿ ಧ್ವನಿಯಾಗಿ ಪರಿಹಾರ ಒದಗಿಸಬೇಕಾಗಿದೆ.ಕಾಡಾನೆ-ಮಾನವ ಸಂಘರ್ಷ, ಕಾಫಿ ಬೆಳಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ವಿಶೇಷ ಯೋಜನೆ ರೂಪಿಸಲು ಪ್ರಯತ್ನಿಸಬೇಕಾಗಿದೆ.ಅದಲ್ಲದೇ ಕಳೆದ ಹಲವು ದಶಕಗಳಿಂದ ನೆನಗುದಿಗೆ ಬಿದ್ದಿರುವ ಕುಶಾಲನಗರದವರಗೆ ರೈಲು ಮಾರ್ಗ ಯೋಜನೆಗೆ ಜೀವ ತುಂಬ ಬೇಕಿದೆ.ಸಂಸದ ಯದುವೀರ್ ಅವರ ಗೆಲುವಿಗೆ ಕೊಡಗಿನ ಜನತೆ ದೊಡ್ಡ ಕೊಡುಗೆ ನೀಡಿದ್ದಾರೆ.ಕೊಡಗು ಜಿಲ್ಲೆಯಿಂದ ಸಂಸದ ಯದುವೀರ್ ಒಡೆಯರ್ 73,859 ಮತಗಳ ಮುನ್ನಡೆ ಪಡೆದಿದ್ದರು ಎಂಬುದು ಸಂಸದರು ಮರೆಯಬಾರದು.ಕೆಡಿಪಿ ಸಭೆಗೆ ಮಾತ್ರ ಸೀಮಿತಗೊಳ್ಳದೆ,ಮೈಸೂರು ಜಿಲ್ಲೆಗೆ ಮಾತ್ರ ಆಸಕ್ತಿ ಕೊಡದೆ, ಕೊಡಗಿನ ಕಡೆಗೂ ಕೂಡ ಯುವ ರಾಜ ಸಂಸದ ಯದುವೀರ್ ಒಡೆಯರ್ ಗಮನಹರಿಸಬೇಕಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0