ಸೈನಿಕ ಶಾಲೆಯಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕುಶಾಲನಗರ: ಕೊಡಗು ಸೈನಿಕ ಶಾಲೆಯಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಬೆಳಿಗ್ಗೆ 07:00 ರಿಂದ 07:50 ರವರೆಗೆ ಶಿಸ್ತು ಮತ್ತು ಉತ್ಸಾಹಭರಿತವಾಗಿ ಶಾಲೆಯ ಕುವೆಂಪು ವಿವಿದೋದ್ದೇಶ ಸಭಾಂಗಣದಲ್ಲಿ ಆಚರಿಸಲಾಯಿತು. ಈ ವರ್ಷದ ಯೋಗ ದಿನಾಚರಣೆಯನ್ನು “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಶೀರ್ಷಿಕೆಯಡಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಹಾಜರಿದ್ದರು. ಜೊತೆಗೆ ಆಡಳಿತಾಧಿಕಾರಿಯಾದ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್, ಉಪಪ್ರಾಂಶುಪಾಲರು ಹಾಗೂ ಎನ್ ಸಿ ಸಿ ಜೆಡಿ ಕಂಪನಿಯ ಕಮಾಂಡಿಂಗ್ ಅಧಿಕಾರಿಯಾದ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಮತ್ತು ಎನ್ಸಿಸಿ ಘಟಕದ ಅಧಿಕಾರಿಗಳು ಹಾಗೂ ಶಾಲಾ ವೈದ್ಯಾಧಿಕಾರಿಯಾದ ಡಾ. ಚಿನ್ಮಯ್ ಅವರು ಉಪಸ್ಥಿತರಿದ್ದರು.
ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಬೋಧಕ-ಬೋಧಕೇತರ ವರ್ಗದವರು, ಎನ್ಸಿಸಿ ಸಿಬ್ಬಂದಿ ವರ್ಗ ಹಾಗೂ ದೈಹಿಕ ಶಿಕ್ಷಕರು ಹಾಜರಿದ್ದರು. ಶಾಲೆಯ ದೈಹಿಕ ಶಿಕ್ಷಕರಾದ ಸಿ ಎಚ್ ಎಮ್ ಅನೂಪ್ ಚೌಹಾನ್ ರವರು ಆಯುಷ್ ಸಚಿವಾಲಯದಿಂದ ಅನುಮೋದಿತವಾದ ಯೋಗಾಸನದ ವಿವಿಧ ಆಸನಗಳ ಪ್ರದರ್ಶನ ನೀಡಿ ಭಾಗವಹಿಸಿದವರಿಗೆ ಮಾರ್ಗದರ್ಶನ ನೀಡಿದರು.
ಪ್ರಸ್ತುತ ಕಾರ್ಯಕ್ರಮವನ್ನು ಶಾಲೆಯ ಎನ್ಸಿಸಿ ಘಟಕವು ಆಯೋಜಿಸಿದ್ದು, ಯೋಗಾಸನವು ಆರೋಗ್ಯದಲ್ಲಿ ಸ್ಥಿರತೆ, ಶಿಸ್ತು ಹಾಗೂ ಆನಂದಮಯ ಜೀವನಕ್ಕೆ ಅತಿ ಅವಶ್ಯಕವೆಂಬ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲಾಯಿತು. ಇದರೊಂದಿಗೆ ವಿದ್ಯಾರ್ಥಿಗಳು ತಮ್ಮ ದೈನಂದಿನ ಬದುಕಿನಲ್ಲಿ ಯೋಗವನ್ನು ಅಳವಡಿಸಿಕೊಳ್ಳುವ ಅಗತ್ಯತೆಯೊಂದಿಗೆ ಪ್ರಕೃತಿಯೊಂದಿಗೆ ಸಹ-ಜೀವನ ನಡೆಸಬೇಕೆನ್ನುವ ಜಾಗೃತಿಯನ್ನು ಮೂಡಿಸಲಾಯಿತು.
What's Your Reaction?






