₹7.11 ಕೋಟಿ ದರೋಡೆ ಕೇಸ್: ಟೋಲ್ ಸಿಬ್ಬಂದಿಯ ವೇಷ ತೊಟ್ಟು ಕಾರ್ಯಾಚರಣೆ ಮಾಡಿದ್ದ ಪೊಲೀಸರು
ಬೆಂಗಳೂರು: ಎಟಿಎಂ ಹಣ ಸಾಗಣೆ ವಾಹನ ದರೋಡೆ ಪ್ರಕರಣ ಭೇದಿಸಲು ನಗರ ಪೊಲೀಸರು ಕೈಗೊಂಡ ನಾಟಕೀಯ ಕಾರ್ಯಾಚರಣೆಯ ವಿವರ ಹೊರಬಿದ್ದಿದೆ. ಟೋಲ್ ಸಿಬ್ಬಂದಿಯ ವೇಷ ತೊಟ್ಟು ಕಾಯುತ್ತಿದ್ದ ಪೊಲೀಸರು, ₹7.11 ಕೋಟಿ ದರೋಡೆ ನಡೆಸಿದ ಮೂವರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನವೆಂಬರ್ 19ರಂದು ಸಿಎಂಎಸ್ ಏಜೆನ್ಸಿಯ ಹಣ ಸಾಗಣೆ ವಾಹನವನ್ನು ಅಡ್ಡಗಟ್ಟಿ, ಇನೋವಾ ಕಾರಿಗೆ ನಕಲಿ ನಂಬರ್ಪ್ಲೇಟ್ ಅಳವಡಿಸಿಕೊಂಡು ದರೋಡೆಕೋರರು ಪರಾರಿಯಾಗಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ, ಪೊಲೀಸ್ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್ ವಶಕ್ಕೆ ಸಿಕ್ಕಿದ ನಂತರ, ತಂಡದ ಉಳಿದವರು ಮೂರು ಗುಂಪುಗಳಾಗಿ ಪರಾರಿಯಾಗಿದ್ದರು.
ಈ ಪೈಕಿ ರವಿ, ನವೀನ್ ಹಾಗೂ ನೆಲ್ಸನ್ ಹೊಸೂರಿನಲ್ಲಿ ಕಾರು ಬುಕ್ ಮಾಡಿಕೊಂಡು ಹೈದರಾಬಾದ್ ನಲ್ಲಿ ತಲೆಮರೆಸಿಕೊಂಡಿದ್ದರು. ಇವರು ವಾಪಸ್ಸಾದ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ, ಹೈದರಾಬಾದ್ ಗಡಿಯ ಶೇಕ್ಪುರ ಟೋಲ್ ಬಳಿ ಪೊಲೀಸರ ತಂಡ ಕಾದು ಕುಳಿತಿತ್ತು. ಟೋಲ್ ಸಿಬ್ಬಂದಿಯ ಸಮವಸ್ತ್ರ ತೊಟ್ಟು, ಕೇವಲ ಎರಡು ಗೇಟ್ಗಳನ್ನು ಮಾತ್ರ ತೆರೆಯುವಂತೆ ಸೂಚಿಸಿ ಆರೋಪಿಗಳಿಗಾಗಿ ಪೊಲೀಸರು ಕಾದು ಕುಳಿತಿದ್ದರು. ಆದರೆ ಕಾರು ಗಮನಕ್ಕೆ ಬಾರದಂತೆ ಇನ್ನೊಂದು ಮಾರ್ಗವಾಗಿ ಸಾಗಿದ್ದು, ಪೊಲೀಸರು ತಡವಾಗಿ ಅರಿತುಕೊಂಡರು. ತಕ್ಷಣವೇ ಮೊಬೈಲ್ ಲೊಕೇಷನ್ ಆಧರಿಸಿ ಹಿಂಬಾಲಸಿ ನಡೆಸಿ, ಕಾರನ್ನು ಅಡ್ಡಗಟ್ಟುವಲ್ಲಿ ಯಶಸ್ವಿಯಾಗಿದ್ದರು.