ಪ್ರೇಯಸಿಯನ್ನು ಕೊಂದು ಆಕೆಯ ತಲೆ ಕತ್ತರಿಸಿ ಕಾಲುವೆಗೆ ಎಸೆದ ಪ್ರೇಮಿ!
ಆಗ್ರಾ, ಜನವರಿ 27: ಉತ್ತರ ಪ್ರದೇಶದ ಆಗ್ರಾದಲ್ಲಿ 30 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯನ್ನು ಕೊಂದು, ಆಕೆಯ ದೇಹವನ್ನು ತುಂಡರಿಸಿ, ಆಕೆಯ ತಲೆಯನ್ನು ಪ್ಯಾಕೆಟ್ನಲ್ಲಿ ಹಾಕಿ ಕಾಲುವೆಗೆ ಎಸೆದಿದ್ದಾನೆ.
ಈ ಘಟನೆ ದೇಶವನ್ನು ಬೆಚ್ಚಿ ಬೀಳಿಸಿದೆ. ಈಗಾಗಲೇ ಕೊಲೆಗಾರನನ್ನು (Killer) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಯನ್ನು ಮಿಂಕಿ ಶರ್ಮಾ ಎಂದು ಗುರುತಿಸಲಾಗಿದೆ. ಅವರು ಆಗ್ರಾದಲ್ಲಿರುವ ಖಾಸಗಿ ಕಂಪನಿಯೊಂದರ ಕಚೇರಿಯಲ್ಲಿ ಹೆಚ್ಆರ್ ಆಗಿ ಕೆಲಸ ಮಾಡುತ್ತಿದ್ದರು. ಅದೇ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ವಿನಯ್ ಜೊತೆ ಸಂಬಂಧ ಹೊಂದಿದ್ದರು.
ಅವರಿಬ್ಬರ ನಡುವೆ ಮದುವೆಯ ವಿಷಯಕ್ಕೆ ಜಗಳ ನಡೆಯುತ್ತಿತ್ತು. ವಿನಯ್ ಮಿಂಕಿಯನ್ನು ಮದುವೆಯಾಗಲು ಬಯಸಿದ್ದ. ಆದರೆ ಆಕೆ ಅದಕ್ಕೆ ನಿರಾಕರಿಸಿದ್ದರಿಂದ ಅವರ ನಡುವೆ ಜಗಳ ಉಂಟಾಗಿದೆ. ಇದೇ ಕೋಪದಿಂದ ಆತ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಜಗಳದ ನಂತರ ತೆಂಗಿನಕಾಯಿ ಕತ್ತರಿಸಲು ಬಳಸುವ ಚಾಕುವಿನಿಂದ ವಿನಯ್ ಪದೇ ಪದೇ ಆಕೆಯ ಮೇಲೆ ಹಲ್ಲೆ ಮಾಡಿ, ಆಕೆಯ ಕುತ್ತಿಗೆಯನ್ನು ಕತ್ತರಿಸಿದ್ದಾನೆ.
ನಂತರ ಅವನು ಆಕೆಯ ದೇಹವನ್ನು ತುಂಡು ಮಾಡಿ, ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಿ ಪಾರ್ಸೆಲ್ ಟೇಪ್ನಿಂದ ಮುಚ್ಚಿದ್ದಾನೆ. ಆಕೆಯ ತಲೆಯನ್ನು ಬೇರೆ ಚೀಲದಲ್ಲಿ ಹಾಕಿ ಎಸೆದಿದ್ದಾನೆ. ಆ ತಲೆ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಅದಕ್ಕಾಗಿ ಹುಡುಕಾಟ ನಡೆಯುತ್ತಿದೆ.
ಜನವರಿ 24ರ ರಾತ್ರಿ ಕೊಲೆಯ ನಂತರ, ಅವನು ದೇಹವನ್ನು ಚೀಲದಲ್ಲಿ ಹಾಕಿ ಯಮುನಾ ನದಿಗೆ ಎಸೆಯಲು ಹೊರಟಿದ್ದನು. ಆದರೆ ಅದನ್ನು ಸೇತುವೆಯ ಮೇಲೆ ಬಿಟ್ಟು ಪರಾರಿಯಾಗಿದ್ದನು. ತುಂಡರಿಸಿದ ತಲೆಯನ್ನು ಕಪ್ಪು ಪ್ಯಾಕೆಟ್ನಲ್ಲಿ ಇರಿಸಲಾಗಿತ್ತು.
ಅದನ್ನು ಕಾಲುವೆಯಲ್ಲಿ ಎಸೆದಿದ್ದ. ಅದನ್ನು ಪತ್ತೆಹಚ್ಚಲು ಡೈವರ್ಗಳಿಗೆ ಸೂಚಿಸಲಾಗಿದೆ. ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ಚಾಕು, ಸ್ಕೂಟರ್ ಮತ್ತು ಬಟ್ಟೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.