ಅನಾಥ ಮಕ್ಕಳ ಆಶಾಕಿರಣ; 50ನೇ ಸಂಭ್ರಮಾಚರಣೆಗೆ ಸಜ್ಜಾಗಿರುವ ಸಿದ್ದಾಪುರ ಎಸ್.ಎಮ್.ಓ ಅನಾಥಾಶ್ರಮ
ಸಿದ್ದಾಪುರ ; ಅನಾಥ ಮಕ್ಕಳ ಬಾಳಿಗೆ ಬೆಳಕಾಗಿ ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಲು 1975 ರಲ್ಲಿ ಸ್ಥಾಪನೆಯಾದ ಸಿದ್ದಾಪುರದ ಎಸ್ ಎಮ್ ಓ ಅನಾಥಾಶ್ರಮವು 50 ವರ್ಷಗಳನ್ನು ಪೂರೈಸಿ. ಸುವರ್ಣ ಸಂಭ್ರಮಕ್ಕೆ ಸಜ್ಜಾಗಿದೆ.
ಸುವರ್ಣ ಮಹೋತ್ಸವ ಆಚರಿಸಲು ಸಿದ್ದಾಪುರದ ಮುಸ್ಲಿಂ ಜಮಾಅತ್ ಕಮಿಟಿ ನೇತ್ರತ್ವದಲ್ಲಿ ಸುವರ್ಣ ಸಂಭ್ರಮ ಆಚರಣೆ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ನೇತ್ರತ್ವದಲ್ಲಿ ಸುವರ್ಣ ಮಹೋತ್ಸವ ಆಚರಿಸಲು ಸಿದ್ದಾಪುರದ ಎಸ್ ಎಮ್ಓ ಆವರಣದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ.
ಮೇ 13 ರಂದು ಅಪರಾಹ್ನ 3:30 ಕ್ಕೆ ಮಖಾಂ ಝಿಯಾರತ್ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳಿಕ ಮರ್ಹೂಮ್ ಮಜೀದ್ ಹಾಜಿ ನಗರದಲ್ಲಿ ಸುವರ್ಣ ಸಮ್ಮೇಳನ ಹಾಗೂ ರಾತ್ರಿ 7 ಗಂಟೆಗೆ ಮರ್ಹೂಮ್ ಉಸ್ಮಾನ್ ಹಾಜಿ ವೇದಿಕೆಯಲ್ಲಿ ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು, ನವಾಸ್ ಮನ್ನಾನಿ ಮುಖ್ಯ ಭಾಷಣ ಮಾಡಲಿದ್ದಾರೆ. ಮೇ 14 ರಂದು ಬೆಳಿಗ್ಗೆ 10 ಗಂಟೆಗೆ ಸಮಾವೇಶ ಹಾಗೂ ಸಂಜೆ 4 ಗಂಟೆಗೆ ಎಸ್.ಎಂ.ಓ ಪೂರ್ವ ವಿದ್ಯಾರ್ಥಿಗಳ ಸಮ್ಮೇಳನ ನಡೆಯಲಿದೆ.
ರಾತ್ರಿ 7 ಗಂಟೆಗೆ ಸಮಾರೋಪ ಮಹಾ ಸಮ್ಮೇಳನ ನಡೆಯಲಿದ್ದು, ಕೊಡಗು ಉಪ ಖಾಝಿ ಎಂ.ಎಂ ಅಬ್ದುಲ್ಲಾ ಫೈಝಿ ಪ್ರಾರ್ಥನೆ ನೆರವೇರಿಸಲಿದ್ದಾರೆ. ಸಿದ್ದಾಪುರ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಯು ಎಂ ಮುಸ್ತಫ ಹಾಜಿ ಅಧ್ಯಕ್ಷತೆ ವಹಿಸಲಿದ್ದು, ಎಸ್.ಎಂ.ಓ ನಡೆದು ಬಂದ ಹಾದಿ ಎಂಬ ವಿಷಯದಲ್ಲಿ ಅಬ್ದುಲ್ ರವೂಫ್ ಹಾಜಿ ವಿಷಯ ಮಂಡನೆ ಮಾಡಲಿದ್ದಾರೆ.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಗಳ್ ಉದ್ಘಾಟನೆ ಮಾಡಲಿದ್ದಾರೆ. ಅನ್ವರ್ ಮುಹಿಯುದ್ದೀನ್ ಹುದವಿ ಮುಖ್ಯ ಭಾಷಣ ಮಾಡಲಿದ್ದಾರೆ.
ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಸಮಸ್ತ ಕೇಂದ್ರ ಮುಶಾವರ ಸದಸ್ಯ ಎಂ.ಎಂ. ಅಬ್ದುಲ್ಲಾ ಪೈಝಿ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.
