ಪ್ರೀತಿ ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನು ಇರಿದು ಹತ್ಯೆ ಮಾಡಿದ ಯುವಕ

ಪ್ರೀತಿ ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನು ಇರಿದು ಹತ್ಯೆ ಮಾಡಿದ ಯುವಕ
Photo credit: INDIA TODAY

ರಾಮೇಶ್ವರಂ: ಪ್ರೀತಿ ನಿರಾಕರಿಸಿದ್ದಕ್ಕೆ ಕೋಪಗೊಂಡ 21 ವರ್ಷದ ಯುವಕನೊಬ್ಬ 12ನೇ ತರಗತಿಯ ವಿದ್ಯಾರ್ಥಿನಿಯನ್ನು ಚಾಕುವಿನಿಂದ ಇರಿದು ಕೊಂದಿರುವ ಹೃದಯವಿದ್ರಾವಕ ಘಟನೆ ಬುಧವಾರ ಬೆಳಿಗ್ಗೆ ರಾಮೇಶ್ವರಂನಲ್ಲಿ ನಡೆದಿದೆ.

ಸೆರಂಗೊಟ್ಟೈ ಮೂಲದ ಜಿಲ್ಲಾ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಶಾಲಿನಿ, ಕಳೆದ ಕೆಲವು ದಿನಗಳಿಂದ ಮುನಿಯರಾಜ್ ಎಂಬ ಯುವಕನಿಂದ ಕಿರುಕುಳಕ್ಕೆ ಒಳಗಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ‘ಪ್ರೀತಿಸುತ್ತಿದ್ದೇನೆ’ ಎಂಬ ನೆಪದಲ್ಲಿ ಹಿಂಬಾಲಿಸುತ್ತಿದ್ದ ಆತ, ಶಾಲಿನಿ ಕುಟುಂಬದವರ ಎಚ್ಚರಿಕೆ ನಿರ್ಲಕ್ಷಿಸಿ ಕಿರುಕುಳ ಮುಂದುವರೆಸಿದ್ದ ಎಂದು ತಿಳಿದು ಬಂದಿದೆ.

ಈ ಬಗ್ಗೆ ಶಾಲಿನಿ ತನ್ನ ತಂದೆ ಮರಿಯಪ್ಪನ್ ಅವರಿಗೆ ಮಾಹಿತಿ ನೀಡಿದ್ದರು. ಮರಿಯಪ್ಪನ್, ಮುನಿಯರಾಜ್ ಮನೆಗೆ ಭೇಟಿ ನೀಡಿ ಸಂಬಂಧಿಕರಿಗೆ ಈ ಬಗ್ಗೆ ನೀಡಿದ್ದರೂ, ಆತನ ನಡೆ ಬದಲಾಗಿರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

ಬುಧವಾರ ಬೆಳಿಗ್ಗೆ ಶಾಲೆಗೆ ತೆರಳುತ್ತಿದ್ದ ಶಾಲಿನಿಯನ್ನು ಮತ್ತೊಮ್ಮೆ ಅಡ್ಡಗಟ್ಟಿದ ಮುನಿಯರಾಜ್, ಚಾಕುವಿನಿಂದ ಬೆದರಿಸಿ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರಾಕರಿಸಿದ ಶಾಲಿನಿಯ ಮೇಲೆ ಆತ ಚಾಕುವಿನಿಂದ ಹಲ್ಲೆ ನಡೆಸಿ ಸ್ಥಳದಲ್ಲೇ ಕೊಲೆ ಮಾಡಿದ್ದಾನೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ದಾಳಿಯ ನಂತರ ಪರಾರಿಯಾಗಿದ್ದ ಆರೋಪಿ ಮುನಿಯರಾಜ್ ನನ್ನು ನಂತರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.