ಡಿ.22ರಂದು ಮಡಿಕೇರಿ ನಗರಕ್ಕೆ ಆಗಮಿಸಲಿರುವ ಆದಿಯೋಗಿ ರಥಯಾತ್ರೆ

ಡಿ.22ರಂದು  ಮಡಿಕೇರಿ ನಗರಕ್ಕೆ ಆಗಮಿಸಲಿರುವ ಆದಿಯೋಗಿ ರಥಯಾತ್ರೆ

ಮಡಿಕೇರಿ: ಕೊಯಮತ್ತೂರಿನ ಈಶ ಯೋಗ ಮಹಾಶಿವರಾತ್ರಿ ಶಿವಾಂಗ ಸಾಧನದ ಭಾಗವಾಗಿ 70 ದಿನಗಳ ಕಾಲ ಸಂಚರಿಸುವ ಆದಿಯೋಗಿ ರಥಯಾತ್ರೆ ಡಿ.7 ರಂದು ಆರಂಭಗೊಂಡಿದ್ದು, ಮಡಿಕೇರಿ ನಗರಕ್ಕೆ ಡಿ.22ರಂದು ಆಗಮಿಸಲಿದೆ ಎಂದು ಈಶ ಕೇಂದ್ರದ ಭಕ್ತ ದನಂಜಯ್ ತಿಳಿಸಿದರು.

ಶಿವನ ಬಗೆಗಿನ ಭಕ್ತಿಯ ಅಭಿವ್ಯಕ್ತಿಯಾಗಿ ರೂಪಿಸಲಾಗಿರುವ ಈ ಯಾತ್ರೆ ಎಲ್ಲರನ್ನು ಶಿವರಾತ್ರಿ ಮಹೋತ್ಸವಕ್ಕೆ ಸ್ವಾಗತಿಸುವುದರೊಂದಿಗೆ ಕರ್ನಾಟಕದಾದ್ಯಂತ ಸಾವಿರಾರು ಜನರಿಗೆ ಈ ಪಯಣದಲ್ಲಿ ಭಾಗಿಯಾಗಲು, ಸ್ವಯಂಸೇವೆ ಮಾಡಲು ಮತ್ತು ತನ್ಮಯರಾಗಲು ಅವಕಾಶ ಕಲ್ಪಿಸುತ್ತದೆ. ಅರ್ಪಣೆಯ ಮನೋಭಾವಕ್ಕೆ ಅನುಗುಣವಾಗಿ ಆದಿಯೋಗಿ ರಥವನ್ನು ಶಿವಾಂಗ ಸಾಧಕರು ಮತ್ತು ಭಕ್ತರು ತಾವಾಗಿಯೇ ಎಳೆಯುತ್ತಾರೆ. ಡಿ.22ರಂದು ಮಡಿಕೇರಿಗೆ ರಥವು ಆಗಮಿಸುವ ಸಂದರ್ಭ ಮಡಿಕೇರಿಯ ಏರುದಾರಿ ಕಠಿಣವಾಗಲಿದೆ. ಅಂದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಅಂದು ಸಂಜೆ 5 ರಿಂದ 6 ಗಂಟೆಯವರೆಗೆ ಜನರಲ್ ತಿಮ್ಮಯ್ಯ ವೃತ್ತ, ಕೋಟೆ, ಮಹದೇವಪೇಟೆ, ಚೌಕಿಯಾಗಿ ರಥ ಸಂಚಾರ ಮಾಡಲಿದೆ. ಯಾತ್ರೆಯಲ್ಲಿ ಎಲ್ಲರಿಗೂ ಮುಕ್ತವಾಗಿದ್ದು, ಭಾಗವಹಿಸಲು ಇಚ್ಚಿಸುವವರು 8861641755, 9448813955 ಸಂಖ್ಯೆಯನ್ನು ಸಂಪರ್ಕಿಸಬಹದು ಎಂದರು.

ಸುದ್ದಿಗೋಷ್ಠಿಯಲ್ಲಿ ಈಶ ಕೇಂದ್ರದ ಸ್ವಯಂ ಸೇವಕರಾದ ಅಖಿಲ್, ನಾಗರಾಜ್, ಅಗಸ್ತ್ಯ, ರಂಜಿತ್, ಗಣೇಶ್ ಶೆಣೈ ಇದ್ದರು.