ಶರಣ್ಯ ನಾಪತ್ತೆ ಪ್ರಕರಣದಲ್ಲಿ ಕಾಣದ ಕೈಗಳ ಕೈವಾಡ ಆರೋಪ; ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬಿಜೆಪಿ ಗ್ರಾಮಾಂತರ ಮಂಡಲದಿಂದ ನಾಪೋಕ್ಲು ಠಾಣೆಯಲ್ಲಿ ದೂರು
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಕಕ್ಕಬ್ಬೆ ಬಳಿಯ ತಡಿಯಂಡಮೊಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿದ ಕೇರಳದ ಯುವತಿ ಶರಣ್ಯ ನಾಪತ್ತೆಯಾಗಿ ಬಳಿಕ ಪೊಲೀಸ್,ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಶೋಧದ ಬಳಿಕ ಪತ್ತೆಯಾಗಿದ್ದು ಶರಣ್ಯಳ ನಡವಳಿಕೆ ಸಂಶಯಕ್ಕೆ ಎಡೆಮಾಡಿದ್ದು ಸೂಕ್ತ ತನಿಖೆ ನಡೆಸುವಂತೆ ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಮುಖರು ನಾಪೋಕ್ಲು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಪೋಕ್ಲು ಠಾಣೆಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪೊಕ್ಕುಳಂಡ್ರ ದನೋಜ್ (ದಿವ್ಯ)ಅವರು ಠಾಣಾಧಿಕಾರಿ ರಾಘವೇಂದ್ರ ಅವರಿಗೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ. ದೂರು ನೀಡಿದ ಬಳಿಕ ಮಾಧ್ಯಮದೊಂದಿಗೆ ಪೊಕ್ಕುಳಂಡ್ರ ದನೋಜ್ ಮಾತನಾಡಿ ಕಳೆದ ಏಪ್ರಿಲ್ 2ರಂದು ತಡಿಯಂಡ ಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ ಕೇರಳದ ಶರಣ್ಯ ಎಂಬ ಯುವತಿ ನಾಪತ್ತೆಯಾಗಿದ್ದಳು.
ನಾಲ್ಕನೇ ದಿನ ಪತ್ತೆಯಾದ ಶರಣ್ಯಳ ನಡುವಳಿಕೆಯಿಂದ ಸಂಶಯ ವ್ಯಕ್ತವಾಗಿದೆ. ಇದರಲ್ಲಿ ಕಾಣದ ಕೈಗಳ ಕೈವಾಡವಿದೆ ಆರೋಪಿಸಿರುವ ದನೋಜ್ ದಟ್ಟಾರಣ್ಯದಲ್ಲಿ ಆಹಾರವಿಲ್ಲದೆ ಯಾವುದೇ ಕಾರಣಕ್ಕೂ 4 ದಿನಗಳ ಕಾಲ ಇರಲು ಸಾಧ್ಯವಿಲ್ಲ. ಎಲ್ಲ ಭಾಗಗಳಲ್ಲೂ ನಕ್ಸಲ್ ಚಟುವಟಿಕೆ ಕಾರ್ಯಗಳು ನಡೆಯುತ್ತಿದ್ದು ಈ ಪ್ರಕರಣ ಮತ್ತಷ್ಟು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಇದರಿಂದ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಜನರಿಗೆ ಇದರ ಸತ್ಯಾಸತ್ಯತೆಯನ್ನು ತಿಳಿಸಬೇಕೆಂದು ಒತ್ತಾಯಿಸಿದರು.
ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿಕಾರ್ಯಪ್ಪ ಮಾತನಾಡಿ ಶರಣ್ಯ ನಾಪತ್ತೆ ಪ್ರಕರಣ ಮೇಲ್ನೋಟಕ್ಕೆ ಪ್ರಚಾರಕ್ಕೋಸ್ಕರ ಮಾಡಿದ ರೀತಿಯಲ್ಲಿದೆ. ನಮ್ಮ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕೆಟ್ಟ ಹೆಸರು ತರಲು ನಾಟಕವಾಡುವ ರೀತಿಯಲ್ಲಿ ಕಾಣುತ್ತಿದೆ. ಅದಲ್ಲದೆ ಕಳೆದ ನಾಲ್ಕು ದಿನಗಳಿಂದ ದಟ್ಟಾರಣ್ಯದಲ್ಲಿದ್ದ ಶರಣ್ಯಳಿಗೆ ಯಾವುದೇ ಆಯಾಸವಾಗದ ರೀತಿಯಲ್ಲಿ ಪತ್ತೆಯಾಗಿರುವುದರಲ್ಲಿ ಸಂಶಯ ವ್ಯಕ್ತವಾಗಿದೆ. ಆದ್ದರಿಂದ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಅಂಬಿಕಾರ್ಯಪ್ಪ ಆಗ್ರಹಿಸಿದರು.
ಈ ಸಂದರ್ಭ ಬಿಜೆಪಿ ಮಹಾಶಕ್ತಿ ಕೇಂದ್ರದ ಗ್ರಾಮಾಂತರ ಮಂಡಲದ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ, ಉಪಾಧ್ಯಕ್ಷ ಪಾಡಿಯಂಡ ಕಟ್ಟಿಕುಶಾಲಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೊಳಿಯಾಡಿರ ಸಂತು ಸುಬ್ರಮಣಿ ಮತ್ತಿತರರು ಶರಣ್ಯ ಪ್ರಕರಣವನ್ನು ಕುಲಂಕುಶವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ದೂರು ಸ್ವೀಕರಿಸಿದ ಬಳಿಕ ಠಾಣಾಧಿಕಾರಿ ರಾಘವೇಂದ್ರ ಅವರು ತನಿಖೆ ನಡೆಸುವ ಭರವಸೆ ನೀಡಿದರು. ಈ ಸಂದರ್ಭ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಉಮಾ ಪ್ರಭು,ಪವನ್ ತೋಟಂಬೈಲು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕೋಟೆರ ನೀಲಮ್ಮ,ಕಲಿಯಂಡ ಸುನಂದ, ಬಿಜೆಪಿಯ ಪ್ರಮುಖರಾದ ಮನು ಮಹೇಶ್,ಬಿದ್ದಾಟಂಡ ಸಂಪತ್,ಸುರಾ ನಾಣಯ್ಯ,ಕಂಗಂಡ ಜಾಲಿ ಪೂವಪ್ಪ,ನಿರನ್ ಕಾರ್ಯಪ್ಪ, ನಿಡುಮಂಡ ಕೃತಿ,ಮತ್ತಿತರರು ಹಾಜರಿದ್ದರು.