ನೀವು ಮುಸುಕಿನ ಜೋಳ ಬೆಳೆಯುತ್ತಿದ್ದೀರಾ! ಆಗಾದರೆ IMPORTANT ವಿಷಯ ಇದೆ ನೋಡಿ
ಮಡಿಕೇರಿ:-2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕುಶಾಲನಗರ ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ರೈತರು ಮುಸುಕಿನ ಜೋಳ ಬೆಳೆಯನ್ನು ಬೆಳೆದಿದ್ದು ಪ್ರಸ್ತುತ ಅಲ್ಲಲ್ಲಿ ಮುಸುಕಿನ ಜೋಳ ಬೆಳೆಗೆ ಸುಳಿ ಎಲೆ ಬಿಳಿ ರೋಗ ಅಥವಾ ಕೇದಿಗೆ ರೋಗ ಅಥವಾ Downey mildew ರೋಗದ ಬಾಧೆ ಕಂಡು ಬಂದಿರುತ್ತದೆ. ಈ ರೋಗವನ್ನು ಹತೋಟಿ ಮಾಡಲು ರೈತರು ಈ ಕ್ರಮಗಳನ್ನು ಅನುಸರಿಸಲು ಕೋರಿದೆ.
ಮುಸುಕಿನ ಜೋಳ ಬೆಳೆಯ ಹೊಲದಲ್ಲಿರುವ ಕಳೆಗಳನ್ನು ಕಿತ್ತುಹಾಕುವುದು ಹಾಗೂ ಬದುಗಳು ಸಹ ಕಳೆಯಿಂದ ಮುಕ್ತವಾಗಿರುವಂತೆ ನೋಡಿಕೊಳ್ಳುವುದು. ಮುಸುಕಿನ ಜೋಳ ಬಿತ್ತನೆ ಸಂದರ್ಭದಲ್ಲಿ ಪೆಟ್ಯಾಶ್ ರಸಗೊಬ್ಬರ ಕೊಡದೆ ಇರುವ ರೈತರು ತುರ್ತಾಗಿ 25 ಕೆಜಿ ಪೆಟ್ಯಾಶ್ ಗೊಬ್ಬರವನ್ನು ಪ್ರತಿ ಎಕರೆಗೆ ನೀಡತಕ್ಕದ್ದು. ರಾಸಾಯನಿಕ ನಿಯಂತ್ರಣವಾಗಿ 1.0 ಎಂಎಲ್ ಟೆಬುಕೋನೊಜೋಲ್ ಅಥವಾ 2 ಗ್ರಾಂ ಮೆಟಲಾಕ್ಸಿಲ್+ ಮ್ಯಾನ್ಕೋಜೆಬ್ ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ ಅಂಟು ದ್ರಾವಣದೊಂದಿಗೆ ಬೆರೆಸಿ ಮುಸುಕಿನ ಜೋಳದ ಬೆಳೆಯ ಎಲ್ಲಾ ಎಲೆಗಳು ನೆನೆಯುವಂತೆ ಸಿಂಪಡಿಸಬಹುದಾಗಿದೆ. ಮುಸುಕಿನ ಜೋಳ ಬೆಳೆಯಲ್ಲಿ ಸುಳಿ ಕೊರೆಯುವ ಹುಳು ಅಥವಾ ಫಾಲ್ ಆರ್ಮಿ ವರ್ಮ್ ಹುಳುವಿನ ಬಾಧೆ ಕಂಡುಬಂದಿದ್ದಲ್ಲಿ 0.4 ಗ್ರಾಂ ಇಮಾ ಮೆಕ್ಟಿನ್ ಬೆಂಜೊಯೆಟ್ ಅನ್ನು ಪ್ರತಿ ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪರಣೆ ಕೈಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುವಂತೆ ಸೋಮವಾರಪೇಟೆ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.