ಕಳಪೆ ಕಾಮಗಾರಿ ಗುತ್ತಿಗೆದಾರ ಕಪ್ಪುಪಟ್ಟಿಗೆ: ಶಾಸಕ ಮಂತರ್ ಗೌಡ ಖಡಕ್ ಸೂಚನೆ
ಮಡಿಕೇರಿ:ಕಡಗದಾಳು ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿ ಕಾಮಗಾರಿಯನ್ನು ಕಳಪೆಯಾಗಿ ನಿರ್ವಹಿಸಿದ ಗುತ್ತಿಗೆದಾರನನ್ನು ತಕ್ಷಣವೇ ಕಪ್ಪು ಪಟ್ಟಿಗೆ ಸೇರಿಸಿ ನಿರ್ವಹಣೆ ಹೊತ್ತ ಅಧಿಕಾರಿಯ ಮೇಲೆ ಶಿಸ್ತು ಕ್ರಮ ಜರುಗಿಸಲು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಸೂಚನೆ ನೀಡಿದ್ದು ಗುತ್ತಿಗೆದಾರನ ಬಿಲ್ ತಡೆಹಿಡಿಯಲು ಪಿ ಡಬ್ಲೂ ಡಿ ಮೇಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಇರುವ ಲೋಕೋಪಯೋಗಿ ಮುಖ್ಯ ರಸ್ತೆಗಳನ್ನು ದುರಸ್ತಿ ಪಡಿಸಲು ಶಾಸಕದ್ವಯರು ಅತೀ ಹೆಚ್ಚಿನ ಅನುದಾನ ತಂದಿದ್ದು ಟೆಂಡರ್ ಮೂಲಕ ಕಾಮಗಾರಿಗೆ ಚಾಲನೆ ನೀಡಿದ್ದಾರೆ.ಟೆಂಡರ್ ಪಡೆದಿರುವ ಕೆಲವು ಗುತ್ತಿಗೆದಾರರು ಅನೇಕ ವರ್ಷಗಳಿಂದ ಅರ್ಧಂಭರ್ಧ ಕೆಲಸ ಮಾಡುವುದನ್ನು ರೂಢಿ ಮಾಡಿಕೊಂಡಿದ್ದು ಅದೇ ಪ್ರಕೃಯೆ ಮುಂದುವರಿಸುತ್ತಿರುವುದು ಕಂಡು ಬಂದಿದ್ದು ಅಂತಹ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು.
ಅಲ್ಲದೆ ಕಾಮಗಾರಿ ಉಸ್ತುವಾರಿ ಹೊತ್ತಿರುವ ಇಂಜಿನಿಯರ್ ಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತೆನ್ನಿರ ಮೈನಾ ರವರು ಸ್ಪಷ್ಟಪಡಿಸಿದ್ದಾರೆ.