ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್–1;ಯಶಸ್ವಿಯಾಗಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ

ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್–1;ಯಶಸ್ವಿಯಾಗಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ

ಸಿದ್ದಾಪುರ:-ಸಿಜೆ ಬಿಲ್ಡ್‌ವೇರ್ ಪ್ರಸ್ತುತಿಯಲ್ಲಿ ಐಪಿಎಲ್ ಮಾದರಿಯಲ್ಲಿ ಆಯೋಜಿಸಲಾಗುತ್ತಿರುವ ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಆವೃತ್ತಿ–1ರ ಕ್ರಿಕೆಟ್ ಕ್ರೀಡಾಕೂಟದ ಆಟಗಾರರ ಹರಾಜು (ಬೀಡಿಂಗ್) ಪ್ರಕ್ರಿಯೆ ಸಿದ್ದಾಪುರದ ಚರ್ಚ್ ಹಾಲ್‌ನಲ್ಲಿ ಯಶಸ್ವಿಯಾಗಿ ನಡೆಯಿತು.

 ಮುಂದಿನ ಏಪ್ರಿಲ್ 10, 11 ಮತ್ತು 12ರಂದು ಸಿದ್ದಾಪುರದ ಪ್ರೌಢಶಾಲಾ ಮೈದಾನದಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಕೊಡಗಿನ ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಯುವಕರಿಗೆ ಕ್ರೀಡಾ ವೇದಿಕೆ ಒದಗಿಸುವ ಉದ್ದೇಶದಿಂದ ಈ ಲೀಗ್‌ನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ವಿರಾಜಪೇಟೆ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್ ಅವರು, ಸಿಪಿಎಲ್ ಮೂಲಕ ಕೊಡಗಿನ ರೋಮನ್ ಕ್ಯಾಥೋಲಿಕ್ ಯುವಕರನ್ನು ಒಗ್ಗೂಡಿಸುವ ಮಹತ್ವದ ಪ್ರಯತ್ನ ನಡೆಯುತ್ತಿದೆ ಎಂದರು.

ಯುವಕರು ತಮ್ಮ ಜೀವನ ಶೈಲಿಯನ್ನು ಸಕಾರಾತ್ಮಕ ದಾರಿಗೆ ಕೊಂಡೊಯ್ಯಬೇಕು ಹಾಗೂ ಯಾವುದೇ ವ್ಯಸನಗಳಿಂದ ದೂರವಿರಬೇಕು ಎಂಬ ಸಂದೇಶವನ್ನು ಈ ಕ್ರೀಡಾಕೂಟ ನೀಡುತ್ತದೆ ಎಂದು ಹೇಳಿದರು. ಸಿದ್ದಾಪುರ ಧರ್ಮಕೇಂದ್ರದ ಯುವಕರ ಈ ಪ್ರಯತ್ನ ಶ್ಲಾಘನೀಯ ಎಂದರು.

ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತನಾಡಿ, ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ ಮಾದರಿಯ ಕ್ರಿಕೆಟ್ ಟೂರ್ನಿ ನಡೆಯುತ್ತಿರುವುದು ಸಂತೋಷಕರ ವಿಚಾರ ಎಂದು ಹೇಳಿದರು. ಇದು ಯುವಕರಲ್ಲಿ ಕ್ರೀಡಾಸ್ಪೂರ್ತಿ ಬೆಳೆಸುವ ಜೊತೆಗೆ ಐಕ್ಯತೆಯನ್ನು ವೃದ್ಧಿಸುವ ವೇದಿಕೆಯಾಗಿದೆ ಎಂದರು.

 ಜಾನಪದ ಪರಿಷತ್ ವಿರಾಜಪೇಟೆ ತಾಲೂಕು ಅಧ್ಯಕ್ಷ ಟೋಮಿ ತೋಮಸ್ ಅವರು, ಕ್ರೀಡೆ ದೈಹಿಕ ಹಾಗೂ ಮಾನಸಿಕ ದೃಢತೆಯನ್ನು ಬೆಳೆಸುವ ಮಹತ್ವದ ಸಾಧನವಾಗಿದ್ದು, ಸಿದ್ದಾಪುರ ಯುವಕರು ಕ್ರೈಸ್ತ ಕ್ರೀಡಾ ಪ್ರೇಮಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸೌಹಾರ್ದತೆ ಮತ್ತು ಐಕ್ಯತೆಯ ಸಂದೇಶ ಸಾರುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಸಿಜೆ ಬಿಲ್ಡ್‌ವೇರ್ ಮಾಲಿಕ ಪ್ರಿನ್ಸ್, ಟಿ.ಪಿ ಕನ್ಸ್ಟ್ರಕ್ಷನ್ ಹರೀಶ್, ಸಮಾಜಸೇವಕರಾದ ಸೈಜನ್ ಪೀಟರ್ (ಕುಶಾಲನಗರ), ವಿರಾಜಪೇಟೆ ರೋಮನ್ ಕ್ಯಾಥೋಲಿಕ್ ಸಂಘದ ಉಪಾಧ್ಯಕ್ಷ ಜೋಶಿ, ಸೇವಾ ಸಂಘದ ಸದಸ್ಯ ಡಾನ್ ಮ್ಯಾಕ್ಸ್, ಟಿ.ಪಿ. ಅನೀಶ್, ಲಿಯೊರೋ ಗೋಲ್ಡ್ ವ್ಯವಸ್ಥಾಪಕ ರೋಬಿನ್, ಅನಿಲ್, ವಿನ್ಸಿ, ರೀಗಲ್ ಸೇರಿದಂತೆ 12 ತಂಡಗಳ ಮಾಲೀಕರು ಹಾಗೂ ಎಸ್.ಜೆ.ಸಿ ತಂಡದ ಸದಸ್ಯರು ಉಪಸ್ಥಿತರಿದ್ದರು.