ಮಡಿಕೇರಿಯ ಗದ್ದಿಗೆ ಒತ್ತುವರಿದಾರರನ್ನು ತೆರವುಗೊಳಿಸಿ; ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಆಗ್ರಹ
ಮಡಿಕೇರಿ: ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಂತೆ ಕೂಡಲೇ ಮಡಿಕೇರಿಯ ಗದ್ದಿಗೆ ಒತ್ತುವರಿದಾರರನ್ನು ತೆರವುಗೊಳಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಆಗ್ರಹಿಸಿದರು. ಮಡಿಕೇರಿ ನಗರದಲ್ಲಿರುವ ರಾಜರ ಗದ್ದುಗೆಗೆ ಸೇರಿದ 19.86 ಎಕರೆ ಜಾಗದ ಪೈಕಿ .1.8 ಎಕರೆ ಜಾಗದಲ್ಲಿ ಅನಧಿಕೃವಾಗಿ ಒತ್ತುವರಿ ಮಾಡಲಾಗಿದೆ. ಈ ಸಂಬಂಧ ರಾಜ್ಯ ಉಚ್ಛ ನ್ಯಾಯಾಲಯವು ಒತ್ತುವರಿದಾರರನ್ನು ತೆರವುಗೊಳಿಸುವಂತೆ ಆದೇಶ ನೀಡಿದೆ. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಗದ್ದಿಗೆ ಸಂರಕ್ಷಣೆ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ಗದ್ದಿಗೆಯನ್ನು ಪರಭಾರೆ ಮಾಡುವಂತಿಲ್ಲ. ಅದನ್ನು ರಕ್ಷಣೆ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ. ನ್ಯಾಯಲಯ ಆದೇಶ ನೀಡಿ 7 ತಿಂಗಳು ಕಳೆದರು ಇದುವರೆಗೆ ಯಾವುದೇ ಕ್ರಮವಿಲ್ಲ. ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕಿತ್ತು. ಆದರೆ, ಉಲ್ಲಂಘಿಸಿದ್ದಾರೆ. ಇನ್ನಾದರೂ ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಂಡು ತೆರವು ಮಾಡಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಒತ್ತುವರಿದಾರರನ್ನು ಖಾಲಿ ಮಾಡುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮೂಡ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಬಿ.ಧರ್ಮಪ್ಪ, ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಾಂಭಶಿವಯ್ಯ, ಖಜಾಂಚಿ ಎಚ್.ಪಿ.ಉದಯ್ ಕುಮಾರ್ ಉಪಸ್ಥಿತರಿದ್ದರು.
(ವಿಶೇಷ ಸೂಚನೆ:ಸುದ್ದಿಯನ್ನು ಕದ್ದು ಸುದ್ದಿ ಮಾಡಬೇಡಿ)