ವಿಬಿ-ಜಿ-ರಾಮ್-ಜಿ ಯೋಜನೆ ಜಾರಿಯಾಗುವುದನ್ನು ಸಹಿಸದೆ ಕಾಂಗ್ರೆಸ್ ಸುಳ್ಳು ವದಂತಿಗಳನ್ನು ಹರಡುತ್ತಿದೆ:ಸಂಸದ ಯದುವೀರ್ ಒಡೆಯರ್
ಮಡಿಕೇರಿ: ವಿಬಿ-ಜಿ-ರಾಮ್-ಜಿ ಯೋಜನೆ ಉತ್ತಮ ಯೋಜನೆಯಾಗಿದೆ. ಆದರೆ, ಜಾರಿಯಾಗುವುದನ್ನು ಸಹಿಸದ ಕಾಂಗ್ರೆಸ್ ಸುಳ್ಳು ವದಂತಿಗಳನ್ನು ಹರಡುತ್ತಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದರು.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರೇಗಾ ಯೋಜನೆಯಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸಿ ಹೊಸ ರೂಪ ನೀಡಲಾಗಿದೆ. ಅಲ್ಲದೇ, ಸರ್ಕಾರದ ಆಡಳಿತಾತ್ಮಕ ಹಿತದೃಷ್ಟಿಯಿಂದ, ಕಾಲಕಾಲಕ್ಕೆ ಯೋಜನೆಗಳಲ್ಲಿ ಪಾರದರ್ಶಕತೆ ಮತ್ತು ಪರಿಣಾಮ ತರುವ ನಿಟ್ಟಿನಲ್ಲಿ ಕೆಲ ಯೋಜನೆಗಳಿಗೆ ಅಗತ್ಯ ಪರಿಷ್ಕರಣೆ ತರುವುದು ಅವಶ್ಯಕವಾಗಿದೆ.
ಯೋಜನೆಯ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಈ ಯೋಜನೆಯಲ್ಲಿ ಶೇ.೬೦ ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಒದಗಿಸಿದರೇ ಶೇ.೪೦ರಷ್ಟನ್ನು ರಾಜ್ಯ ಸರ್ಕಾರಗಳು ಒದಗಿಸಬೇಕಾಗಿದೆ ಎಂದರು.
ಮನರೇಗಾದಲ್ಲಿ ಲೆಕ್ಕಪರಿಶೋಧನೆ ಸಂದರ್ಭ ಸಮಸ್ಯೆಯಾಗುತ್ತಿತ್ತು. ಅದರಿಂದ ಸರಿಯಾದ ಅಭಿವೃದ್ಧಿ ಆಗುತ್ತಿರಲಿಲ್ಲ. ಅಲ್ಲದೇ, ಮನರೇಗಾದಲ್ಲಿ ಹಣದ ಸೋರಿಕೆಯಾಗುತ್ತಿತ್ತು. ಆದರೆ, ಇಂದು ಜೀ ರಾಮ್ ಜೀ ಒಂದು ಸೂಕ್ತ ಕಾಯ್ದೆಯಾಗಿದೆ. ಅಲ್ಲದೇ, ಕೊಡಗು ಜಿಲ್ಲೆಗೆ ವಿಬಿ-ಜಿ-ರಾಮ್-ಜಿ ಯೋಜನೆ ಉತ್ತಮ ಯೋಜನೆಯಾಗಿದೆ. ಆದ್ದರಿಂದ ಅಪಪ್ರಚಾರಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಬಿ.ಸಿ.ನವೀನ್, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ವಕ್ತಾರ ಅರುಣ್ ಕುಮಾರ್, ನಗರಾಧ್ಯಕ್ಷ ಉಮೇಶ್ ಸುಬ್ರಹ್ಮಣಿ ಇದ್ದರು.