ಗೊಬ್ಬರ ತೂಕದಲ್ಲಿ ವ್ಯತ್ಯಾಸ ಪ್ರಕರಣ : ರೂ. 5 ಲಕ್ಷ ದಂಡ
ಮಡಿಕೇರಿ, ಮೇ 25: ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸರಬರಾಜಾದ ಗೊಬ್ಬರ ಚೀಲದ ತೂಕದಲ್ಲಿ ವ್ಯತ್ಯಾಸ ಕಂಡುಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಮಾಪನಶಾಸ್ತ್ರ ಇಲಾಖೆ ಇಂಡಿಯನ್ ಪೊಟಾಶ್ ಸಂಸ್ಥೆ (ಐಪಿಎಲ್) ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ರೂ. 5 ಲಕ್ಷ ದಂಡ ವಿಧಿಸಿದೆ.
ಕೆಲವು ದಿನಗಳ ಹಿಂದೆ ಹಾತೂರು ಸಹಕಾರ ಸಂಘಕ್ಕೆ ಸರಬರಾಜಾದ ಬಹುತೇಕ 50 ಕೆಜಿಯ ಗೊಬ್ಬರ ಚೀಲದ ತೂಕದಲ್ಲಿ ವ್ಯತ್ಯಾಸ ಕಂಡುಬಂದಿತ್ತು.
ಈ ಸಂಬಂಧ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ನೇತೃತ್ವದಲ್ಲಿ ಆಡಳಿತ ಮಂಡಳಿ, ಸದಸ್ಯರು ಚೀಲ ಸಹಿತ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಬಂದು ಅಲ್ಲಿಯೇ ಚೀಲದ ತೂಕ ಮಾಡಿಸಿ ಮೋಸವನ್ನು ಬೆಳಕಿಗೆ ತಂದಿದ್ದರು.
ನಂತರ ಕೃಷಿ ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ಸಂಸ್ಥೆಗೆ ನೋಟೀಸ್ ನೀಡಿದ್ದರು. ಕಾನೂನು ಮಾಪನಶಾಸ್ತ್ರ ಇಲಾಖೆ ಐಪಿಎಲ್ ಸಂಸ್ಥೆ ವಿರುದ್ಧ ತಾ. 19 ರಂದು ಪ್ರಕರಣ ದಾಖಲಿಸಿಕೊಂಡಿತ್ತು. ನಂತರ ರೂ. 5 ಲಕ್ಷ ದಂಡ ವಿಧಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ. ದಾಸ್ತಾನಿರುವ ಗೊಬ್ಬರ ಚೀಲಗಳನ್ನು ಸಂಸ್ಥೆಗೆ ಹಿಂದಿರುಗಿಸಲು ಸಹಕಾರ ಸಂಘಕ್ಕೆ ಸೂಚಿಸಿದೆ.
