ಜಿ.ಪಂ.ಸಿಇಒ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಗೆ ಗಮನಹರಿಸಿ; ಆನಂದ್ ಪ್ರಕಾಶ್ ಮೀನಾ
ಮಡಿಕೇರಿ ಜೂ.19:-ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಸಂಬಂಧ ಜಿಲ್ಲಾ ನೀರು ಮತ್ತು ನೈರ್ಮಲ್ಯ ಅಭಿಯಾನ ಸಮಿತಿ ಸಭೆಯು ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ನಗರದ ಜಿಲ್ಲಾ ಪಂಚಾಯಿತಿ ಸಿಇಒ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಸಕ್ತ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಿಯಾಯೋಜನೆಗೆ ಅನುಮೋದನೆ ಸಂಬಂಧ ಚರ್ಚಿಸಲಾಯಿತು.
ಹಾಗೆಯೇ ಎಸ್ಡಿಪಿ ಮತ್ತು ನಾನ್ ಎಸ್ಡಿಪಿ ಯೋಜನೆಯನ್ನು ಮಾರ್ಪಡಿಸಿ ಕ್ರಿಯಾಯೋಜನೆ ತಯಾರಿಸುವ ಸಂಬಂಧ ಸುದೀರ್ಘ ಚರ್ಚೆ ನಡೆಯಿತು.
ಜಲಜೀವನ್ ಮಿಷನ್ ಯೋಜನಾ ಕಾಮಗಾರಿಗಳ ಕುಂದುಕೊರತೆ ಸಂಬಂಧಿಸಿದಂತೆ ಜಿ.ಪಂ.ಸಿಇಒ ಆನಂದ ಪ್ರಕಾಶ್ ಮೀನಾ ಅವರು ಮಾಹಿತಿ ಪಡೆದರು.
‘ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ತುರ್ತು ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಬೇಕು. ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನಲ್ಲಿ ನೀರು ಸಂಪರ್ಕ ಕಲ್ಪಿಸಬೇಕು. ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸಬೇಕು ಎಂದು ನಿರ್ದೇಶನ ನೀಡಿದರು.’
‘ಜಿಲ್ಲೆಯಲ್ಲಿ ಇದುವರೆಗೆ ಕಡಿಮೆ ಮಳೆಯಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನಿಗಾ ವಹಿಸಬೇಕು ಎಂದು ಆನಂದ್ ಪ್ರಕಾಶ್ ಮೀನಾ ಅವರು ಸ್ಪಷ್ಟ ನಿರ್ದೇಶನ ನೀಡಿದರು.’
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಭಾಸ್ಕರ್ ಅವರು ಮಾತನಾಡಿ ಜಲಜೀವನ್ ಮಿಷನ್ 2.0 ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ವಿವರಿಸಿದರು.
ಗ್ರಾಮೀಣ ಕುಡಿಯುವ ನೀರು ಪೂರೈಕೆ ಕುರಿತು ಮತ್ತು ಎಚ್ಜಿಜೆ ಘೋಷಣೆ, ಜಿಲ್ಲಾ ತಾಂತ್ರಿಕ ಘಟಕದಡಿ ಕೈಗೊಳ್ಳಲಾಗುವ ಕಾಮಗಾರಿ ಹಾಗೂ ಸುಜಲಾಂ ಭಾರತ್ ಆಪ್ ಮತ್ತು ಅಸೆಟ್ ಮ್ಯಾನೇಜ್ಮೆಂಟ್ ಆಪ್ ಅನುಷ್ಠಾನ ಕುರಿತು ಸಭೆಯ ಗಮನಕ್ಕೆ ತಂದರು.
ಸ್ವಚ್ಛತೆ ಮತ್ತು ದುರಸ್ತಿ ಕಾಮಗಾರಿಗಳು, ಕುಡಿಯುವ ನೀರಿನ ಸಮಸ್ಯೆಯಾಗಿರುವ ಗ್ರಾಮಗಳನ್ನು ಗುರುತಿಸಿ ಸಮರ್ಪಕ ನೀರು ಪೂರೈಕೆಗೆ ಕ್ರಮ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕಾಮಗಾರಿಗಳಿಗೆ ಚಾಲನೆ ಮತ್ತಿತರ ಬಗ್ಗೆ ಕಾರ್ಯಪಾಲಕ ಎಂಜಿನಿಯರ್ ಭಾಸ್ಕರ್ ಅವರು ಮಾಹಿತಿ ನೀಡಿದರು.
ಮತ್ತಷ್ಟು ಮಾಹಿತಿ: ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಂಗ್ರಹಣೆ ಕೇಂದ್ರಗಳು ಹಾಗೂ ನೀರಿನ ಮೂಲಗಳ ಸ್ವಚ್ಛತೆಗೆ ಆದ್ಯತೆ ನೀಡಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಹೇಳಿದರು.
ಸಭೆಯಲ್ಲಿ ತುರ್ತು ಕುಡಿಯುವ ನೀರಿನ ಬಗ್ಗೆ, ವಿಶೇಷ ಅಭಿವೃದ್ಧಿ ಕಾರ್ಯಕ್ರಮ, ಜಲಜೀವನ್ ಮಿಷನ್ ಯೋಜನೆಗಳ ಕಾಮಗಾರಿ, ಡಿಸಿನ್ಫೆಕ್ಷನ್ ಯೂನಿಟ್, ಹರ್ಘರ್ಜಲ್ ವಿಷಯ, ನೀರಿನ ಗುಣಮಟ್ಟ ಪರೀಕ್ಷೆ ಹಾಗೂ ಇಎಫ್ಐ ಮತ್ತು ಇ.ಒ.ಟಿಗಳ ಕುರಿತು ಚರ್ಚಿಸಲಾಯಿತು.
ಗಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಆರ್.ಭಾಸ್ಕರ್ ಅವರು ಮಾತನಾಡಿ, ಕೊಡಗು ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಗಳ ಪ್ರಗತಿ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ವಿವರಿಸಿದರು.
ಕೊಡಗು ಜಿಲ್ಲೆಯಾದ್ಯಂತ ಗ್ರಾಮೀಣ ಜನರಿಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರನ್ನು ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಪ್ರಗತಿ ಕಂಡುಬಂದಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾದ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆ, ತರ್ತು ಅಭಿವೃದ್ಧಿ ಕಾಮಗಾರಿಗಳು ಹಾಗೂ ನೀರಿನ ಗುಣಮಟ್ಟ ತಪಾಸಣೆಯ ಇತ್ತೀಚಿನ ಸಮಗ್ರ ಪ್ರಗತಿ ಪರಿಶೀಲನಾ ವರದಿಗಳು ಬಿಡುಗಡೆಯಾಗಿವೆ ಎಂದು ಕಾರ್ಯಪಾಲಕ ಎಂಜಿನಿಯರ್ ಹೇಳಿದರು.
ಜಲ ಜೀವನ್ ಮಿಷನ್ ಜಿಲ್ಲೆಯಲ್ಲಿ ಒಟ್ಟು 3 ಹಂತಗಳಲ್ಲಿ ಕೈಗೆತ್ತಿಕೊಳ್ಳಲಾದ 457 ಕಾಮಗಾರಿಗಳ ಪೈಕಿ 370 ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಯೋಜನೆಗಳ ಒಟ್ಟು ಅಂದಾಜು ಮೊತ್ತ ರೂ.354.74 ಕೋಟಿ ಆಗಿದ್ದು, ಈಗಾಗಲೇ ರೂ.245.85 ಕೋಟಿ ಹಣವನ್ನು ಪ್ರಗತಿಗಾಗಿ ಖರ್ಚು ಮಾಡಲಾಗಿದೆ ಎಂದು ಕಾರ್ಯಪಾಲಕ ಎಂಜಿನಿಯರ್ ಅವರು ಮಾಹಿತಿ ನೀಡಿದರು.
ಪ್ರಸ್ತುತ 85 ಕಾಮಗಾರಿಗಳು ಪ್ರಗತಿಯಲ್ಲಿದ್ದು, 2 ಕಾಮಗಾರಿ ಕೈಬಿಡಲಾಗಿದೆ. ಪೂರ್ಣಗೊಂಡ ಯೋಜನೆಗಳಲ್ಲಿ 236 ಕಾಮಗಾರಿಯನ್ನು ಈಗಾಗಲೇ ಸಾರ್ವಜನಿಕ ಬಳಕೆಗೆ ಹಸ್ತಾಂತರಿಸಲಾಗಿದೆ. ಸೋಮವಾರಪೇಟೆಯ ಒಟ್ಟು 245 ಕಾಮಗಾರಿಗಳಲ್ಲಿ 229 ಪೂರ್ಣ (ಅತಿ ಹೆಚ್ಚು ಪ್ರಗತಿ), ವಿರಾಜಪೇಟೆ ಒಟ್ಟು 122 ಕಾಮಗಾರಿಗಳಲ್ಲಿ 81 ಪೂರ್ಣ, ಮಡಿಕೇರಿ ಒಟ್ಟು 90 ಕಾಮಗಾರಿಗಳಲ್ಲಿ 60 ಕಾಮಗಾರಿ ಪೂರ್ಣಗೊಂಡಿದೆ ಎಂದು ಕಾರ್ಯಪಾಲಕ ಎಂಜಿನಿಯರ್ ಅವರು ತಿಳಿಸಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ, ವಿರಾಜಪೇಟೆ ಹಾಗೂ ಪೆÇನ್ನಂಪೇಟೆ ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರು ಒದಗಿಸಲು 2025-26ನೇ ಸಾಲಿನ 8 ಪ್ರಮುಖ ತುರ್ತು ಕಾಮಗಾರಿ ಗುರುತಿಸಲಾಗಿದೆ. ಅಲ್ಲದೆ ಹೊಸ ಕೊಳವೆ ಬಾವಿಗಳನ್ನು ಕೊರೆಯುವುದು, ಪಂಪ್ ಹಾಗೂ ಮೋಟಾರ್ ಅಳವಡಿಸುವುದು ಮತ್ತು ಕುಡಿಯುವ ನೀರಿನ ಪೈಪ್ಲೈನ್ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಲುಷಿತ ಮುಕ್ತ ನೀರನ್ನು ಖಚಿತಪಡಿಸಲು ಕೊಡಗು ವಿಭಾಗ ಮತ್ತು ಪೆÇನ್ನಂಪೇಟೆ ಉಪ ವಿಭಾಗದ ಒಟ್ಟು 2 ಪ್ರಯೋಗಾಲಯಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. 2026-27ನೇ ಹಣಕಾಸು ವರ್ಷದಲ್ಲಿ ಜೂನ್ 18, 2026 ರವರೆಗೆ ಜಿಲ್ಲೆಯ 288 ಹಳ್ಳಿಗಳಿಂದ 1,022 ನೀರಿನ ಮಾದರಿ ಸಂಗ್ರಹಿಸಿ ತಪಾಸಣೆ ನಡೆಸಲಾಗಿದೆ. ಕೊಡಗು ವಿಭಾಗದಲ್ಲಿ ಪರೀಕ್ಷಿಸಲಾದ ಮಾದರಿಗಳಲ್ಲಿ 2 ನೀರಿನ ಮಾದರಿಗಳು ಕಲುಷಿತಗೊಂಡಿರುವುದು ಪತ್ತೆಯಾಗಿದ್ದು, ಅಧಿಕಾರಿಗಳು ತಕ್ಷಣವೇ ಸೂಕ್ತ ಪರಿಹಾರ ಕ್ರಮ ಕೈಗೊಂಡಿರುವುದಾಗಿ ಕಾರ್ಯಪಾಲಕ ಎಂಜಿನಿಯರ್ ಅವರು ಹೇಳಿದರು.
ವರ್ಷದ ಒಟ್ಟು ಗುರಿ 6 ಸಾವಿರ ಮಾದರಿಗಳಾಗಿದ್ದು, ಪ್ರಸ್ತುತ ಶೇ.17.03 ರಷ್ಟು ಪ್ರಗತಿ ಸಾಧಿಸಲಾಗಿದೆ. ಗ್ರಾಮೀಣ ಮಟ್ಟದ ಕ್ಷೇತ್ರ ಪರೀಕ್ಷಾ ಕಿಟ್ಗಳ ಮೂಲಕ 2,487 ನೀರಿನ ಮಾದರಿ ಪರೀಕ್ಷಿಸಿ, ಶೇ.53.34 ರಷ್ಟು ಗುರಿ ತಲುಪಲಾಗಿದೆ. ಏಪ್ರಿಲ್ 1 - ಜೂನ್ 18, 2026ರ ಮೂರು ತಿಂಗಳ ಅವಧಿಗೆ 1,500 ಮಾದರಿಗಳ ಗುರಿ ಹೊಂದಲಾಗಿತ್ತು, ಅದರಲ್ಲಿ 1,022 ಮಾದರಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದರು.
ಜೂನ್ 1 ರಿಂದ ಜೂನ್ 18 ರವರೆಗಿನ ಅವಧಿಯಲ್ಲಿ ಒಟ್ಟು ಪರೀಕ್ಷಿಸಲಾದ 113 ಮಾದರಿಗಳಲ್ಲಿ, 69 ಮಾದರಿಗಳನ್ನು ಜಿಲ್ಲಾ ಲ್ಯಾಬ್ನಲ್ಲಿ ಮತ್ತು 44 ಮಾದರಿಗಳನ್ನು ತಾಲ್ಲೂಕು ಲ್ಯಾಬ್ನಲ್ಲಿ ಪರೀಕ್ಷಿಸಲಾಗಿದೆ. ಮಡಿಕೇರಿಯಲ್ಲಿ ಅತ್ಯಂತ ಹೆಚ್ಚು (43), ವಿರಾಜಪೇಟೆಯಲ್ಲಿ 28 ಮತ್ತು ಕುಶಾಲನಗರದಲ್ಲಿ 17 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಒಟ್ಟಾರೆಯಾಗಿ, ಕೊಡಗು ಜಿಲ್ಲೆಯು ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಹಾಗೂ ನೀರಿನ ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಶಂಸನೀಯ ಪ್ರಗತಿಯತ್ತ ಹೆಜ್ಜೆ ಇಡುತ್ತಿದೆ ಎಂದು ತಿಳಿಸಿದರು.
ಗಾಳಿಬೀಡು ಗ್ರಾ.ಪಂ.ವ್ಯಾಪ್ತಿಯ ಜವಾಹರ್ ನವೋದಯ ಶಾಲೆಗೆ ರೂ.78.50 ಲಕ್ಷ ವೆಚ್ಚದಲ್ಲಿ ಹೊಸ ನೀರು ಶುದ್ಧಿಕರಣ ಘಟಕ ನಿರ್ಮಾಣದ ಆಡಳಿತಾತ್ಮಕ ಅನುಮೋದನೆಗೆ ಚರ್ಚೆ ನಡೆಸಲಾಯಿತು. ವಾಟರ್ ಬಜೆಟ್, 20 ಓವರ್ ಹೆಡ್ ಟ್ಯಾಂಕ್ಗಳ ದುರಸ್ತಿ ಮತ್ತು ಕಂಪ್ಯೂಟರ್ ಆಪರೇಟರ್ ಹಾಗೂ ಡ್ರೈವರ್-ಸಿಬ್ಬಂದಿ ಮುಂದುವರಿಕೆ ಕುರಿತು ಇದೇ ಸಂದರ್ಭ ಚರ್ಚಿಸಲಾಯಿತು.
ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಟಿ.ಪಿ.ವಿರೇಂದ್ರ, ತಾಲ್ಲೂಕು ಆರೋಗ್ಯಧಿಕಾರಿ ಡಾ.ಸನತ್ ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನಕುಮಾರ್, ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಕುಮಾರ್, ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಪುಟ್ಟಸ್ವಾಮಿ, ಸಹಾಯಕ ಎಂಜಿನಿಯರ್ಗಳು, ಕಿರಿಯ ಸಹಾಯ ಎಂಜಿನಿಯರ್ಗಳು, ಐಎಂಇಎಸ್, ಐಎಸ್ಎ ಸಿಬ್ಬಂದಿಗಳು, ಮಾದರಿ ಸಂಗ್ರಹ ತಂಡ, ಸ್ವಚ್ಛ ಭಾರತ್ ಮಿಷನ್ ಸಿಬ್ಬಂದಿಗಳು ಹಾಜರಿದ್ದರು.

