ಬಸವಜಯಂತಿ ಅರ್ಥಪೂರ್ಣ ಆಚರಣೆಗೆ ಡಾ.ಐಶ್ವರ್ಯ ಕರೆ
ಮಡಿಕೇರಿ : ಏಪ್ರಿಲ್ 20 ರಂದು ಕೊಡಗು ಜಿಲ್ಲಾಡಳಿತದ ವತಿಯಿಂದ ನಡೆಯಲಿರುವ ಬಸವ ಜಯಂತಿಯ ಆರ್ಥಪೂರ್ಣ ಆಚರಣೆಗೆ ಕೊಡಗು ಜಿಲ್ಲಾ ಅಪರ ಜಿಲ್ಲಾಧಿಕಾರಿ ಡ.ಐಶ್ವರ್ಯ ಕರೆಕೊಟ್ಟರು.
ತಮ್ಮ ಕಛೇರಿಯಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಾಯಕ ಯೋಗಿ ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಅಧಿಕಾರಿಗಳು ಬಸವ ಅನುಯಾಯಿಗಳೊಂದಿಗೆ ಚರ್ಚಿಸಿ ಅರ್ಥಪೂರ್ಣ ಆಚರಣೆಗೆ ಮುಂದಾಗಬೇಕು. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಬಸವ ಜಯಂತಿ ಅರ್ಥಪೂರ್ಣ ಆಚರಣೆಗೆ ಡಾ.ಐಶ್ವರ್ಯ ಕರೆ ಕೊಟ್ಟರು.
ಈ ಸಂದರ್ಭ ಮಾತನಾಡಿದ ಕನ್ನಡ ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಕೊಡಗು ವೀರಶೈವ ಮಹಾಸಭಾ ಪದಾಧಿಕಾರಿಗಳ ಸಹಕಾರದೊಂದಿಗೆ ಬಸವ ಜಯಂತಿ ಅರ್ಥಪೂರ್ಣ ಆಚರಣೆಗೆ ಕ್ರಮ ಕೈಗೊಳ್ಳಲಾಗಿದೆ. ಮಡಿಕೇರಿ ಅರಮನೆ ಆವರಣದಿಂದ ಅಂದು ಬೆಳಗ್ಗೆ 10 ಗಂಟೆಗೆ ಬಸವೇಶ್ವರರ ಭಾವಚಿತ್ರವನ್ನು ಅಲಂಕೃತ ಬೆಳ್ಳಿ ರಥದಲ್ಲಿ ವಿವಿಧ ಕಲಾತಂಡಗಳೊಂದಿಗೆ ಗಾಂಧಿ ಭವನದವರೆಗೂ ಮೆರವಣಿಗೆ ನಡೆಸುವ ಬಗ್ಗೆ ವಿವರಣೆ ನೀಡಿದರು. ಬಳಿಕ ಗಾಂಧಿ ಭವನದಲ್ಲಿ ಬಸವಜಯಂತಿ ಕಾರ್ಯಕ್ರಮ ನಡೆಯುವ ಬಗ್ಗೆ ವಿವರಿಸಿದರು.
ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ, ಖಜಾಂಚಿ ಹೆಚ್.ಪಿ.ಉದಯಕುಮಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಸಮಾಜದ ಪ್ರಮುಖರಾದ ಮಡಿಕೇರಿಯ ಕೆ.ಎಸ್. ಪ್ರದೀಪ್ ಕುಮಾರ್, ಉದ್ಯಮಿ ಕುಮಾರ್ ಇದ್ದರು.