ಶನಿವಾರಸಂತೆಯಲ್ಲಿ ಯಶಸ್ವಿಯಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಶನಿವಾರಸಂತೆ:ಜನರ ಆರೋಗ್ಯ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಮತ್ತು ಆರೋಗ್ಯ ಇಲಾಖೆ, ಸಹಭಾಗಿತ್ವದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಅಭಿಯಾನ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹಿರಿಯ ತಜ್ಞ ವೈದ್ಯರಾದ ಚೇತನ್ ಅಭಿಪ್ರಾಯಪಟ್ಟರು.
ಅವರು ಬುಧವಾರ ಆಲೂರು ಸಿದ್ದಾಪುರ ಸಮುದಾಯ ಭವನದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಸಂಸ್ಥೆ, ಬೋಧಕ ಆಸ್ಪತ್ರೆ,ಶನಿವಾರಸಂತೆ ವಲಯ ಅರಣ್ಯ ಇಲಾಖೆ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ರಕ್ತ ನಿಧಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಲ್ಲಿ ವೈದ್ಯರು ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರು ಉತ್ತಮ ಬಾಂಧವ್ಯದಿಂದ ಸಹಕರಿಸಿದರೆ ಮಾತ್ರ ವೈದ್ಯರು ವೈದ್ಯರು ವರ್ಗಾವಣೆಗೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಗೆ ಸಾರ್ವಜನಿಕರು ಸಹಕರಿಸುವಂತೆ
ಮನವಿ ಮಾಡಿದರು. ಇಂದು ಎಲ್ಲರೂ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು ಹಣ ಕಳೆದುಕೊಂಡರೆ ಮತ್ತೆ ಪಡೆಯಬಹುದು ಆದರೆ ಒಮ್ಮೆ ಆರೋಗ್ಯ ಕಳೆದುಕೊಂಡರೆ ನಾವು ಪಡೆಯುವುದು ಕಷ್ಟ ಹಾಗಾಗಿ ಆರೋಗ್ಯವನ್ನ ಯಾರು ಕಳೆದುಕೊಳ್ಳಬಾರದು. ಆಹಾರ ಪದ್ಧತಿ ಬದಲಾವಣೆ ಮಾಡಿಕೊಂಡು ಜೀವನ ನಡೆಸಬೇಕಿದೆ. ಹೆಚ್ಚು ಸಕ್ಕರೆ ಕಾಯಿಲೆ, ಬಿಪಿ, ಹೃದಯ ಸಂಬಂದಿ ಕಾಯಿಲೆಗಳು ಹೆಚ್ಚಾಗುತ್ತಿದ್ದು ಯಾವುದೇ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಯಾವುದನ್ನೂ ನಿರ್ಲಕ್ಷ್ಯ ಮಾಡಬಾರದು ಎಂದರು. ಇಂತಹ ಶಿಬಿರ ನಿಮ್ಮ ಮನೆ ಬಾಗಿಲಿಗೆ ಬರುತ್ತಿರುವುದನ್ನ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾತನಾಡಿದ ಶನಿವಾರಸಂತೆ ವಲಯ ಅರಣ್ಯಧಿಕಾರಿ ಪೂಜಾಶ್ರೀ ಮಾತನಾಡಿ, ಗ್ರಾಮೀಣ ಭಾಗದ ಜನರು ಅದರಲ್ಲೂ ರೈತರು ಹೆಚ್ಚು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು.ಆ ನಿಟ್ಟಿನಲ್ಲಿ ಇಲಾಖೆ ನಿಮ್ಮ ಮನೆ ಬಾಗಿಲಿಗೆ ಈ ಆರೋಗ್ಯ ಶಿಬಿರ ಹಮ್ಮಿಕೊಳ್ಳುವ ಯೋಜನೆ ಮಾಡಿದೆ, ಇದರ ಜೊತೆಗೆ ರಕ್ತ ದಾನ ಶಿಬಿರವನ್ನು ಮಾಡಿರುವುದರಿಂದ ಎಷ್ಟು ಜೀವಗಳಿಗೆ ಅನುಕೂಲ ಆಗುತ್ತದೆ. ಎಲ್ಲರೂ ತಮ್ಮ ವೃತ್ತಿ ಬದುಕಿನ ನಡುವೆ ಅರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಉಪ ವಲಯ ಅರಣ್ಯಧಿಕಾರಿ ಮಲ್ಲಯ್ಯ, ವನಪಾಲಕ ವೆಂಕಟೇಶ್, ರಮೇಶ್, ಪುನೀತ್, ದಂತ ವೈದ್ಯ ನಚಿಕೇತ್,ಮೂಳೆ ತಜ್ಞ ಅಭಿಜಿತ್ , ಕಾರ್ತಿಕ್, ಮುಂತಾದವರಿದ್ದರು.
ಶಿಬಿರದಲ್ಲಿ, ಕಿವಿ, ಮೂಗು, ಗಂಟಲು ತಜ್ಞರು, ಚರ್ಮ ರೋಗ ತಜ್ಞರು, ಕೀಲು ಮೂಳೆ ತಜ್ಞರು, ಸ್ತ್ರೀರೋಗ ತಜ್ಞರು, , ದಂತ ವೈದ್ಯರು ಸೇರಿದಂತೆ ವಿವಿಧ ತಜ್ಞರು ಕಾಯಿಲೆಗಳಿಗೆ ಸಂಬಂಧ ರೋಗಿಗಳಿಗೆ ತಪಾಸಣೆ ನಡೆಸಿದರು. ಶಿಬಿರದಲ್ಲಿ ನೂರಾರು ಆಲೂರು ಸಿದ್ದಾಪುರ ಸುತ್ತಮುತ್ತಲಿನ ಸಾರ್ವಜನಿಕರು ಪಾಲ್ಗೊಂಡು ಶಿಬಿರದ ಲಾಭ ಪಡೆದುಕೊಂಡರು.
ಅರಣ್ಯ ಇಲಾಖೆಯ ವಲಯ ಅಧಿಕಾರಿ ಪೂಜಾಶ್ರೀ, ಉಪ ವಲಯ ಅರಣ್ಯಧಿಕಾರಿ ಮಲ್ಲಯ್ಯ, ಇತರೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರು ರಕ್ತ ದಾನ ಮಾಡಿದರು.
