ಮನೆ ಭೋಗ್ಯ ವಿವಾದ: ಸಾಕ್ಷಿಗಳಾದ ಮಹಿಳೆ–ಮಗಳ ಮೇಲೆ ಹಲ್ಲೆ
ಚಿಕ್ಕಮಗಳೂರು, ಡಿ. 16: ಮನೆ ಭೋಗ್ಯಕ್ಕೆ ಸಂಬಂಧಿಸಿದ ವಿವಾದಕ್ಕೆ ಸಾಕ್ಷಿಯಾಗಿದ್ದ ಕಾರಣ ಮಹಿಳೆ ಹಾಗೂ ಆಕೆಯ ಪುತ್ರಿಯ ಮೇಲೆ ಹಲ್ಲೆ ನಡೆದ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಮೂಡಿಗೆರೆ ಸಮೀಪದ ಬೀಜುವಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಪೊಲೀಸರ ಪ್ರಕಾರ, ಆರೋಪಿ ಅರುಣ್ ಎಂಬಾತ ಹಲ್ಲೆ ನಡೆಸಿದ್ದು, ಘಟನೆಯ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸಬೀನಾ ಅವರು ಅರುಣ್ ಅವರ ತಾಯಿಯಿಂದ ಮನೆ ಭೋಗ್ಯಕ್ಕೆ ಪಡೆದಿದ್ದು, ಭೋಗ್ಯ ಹಣದ ವಿಚಾರವಾಗಿ ಸಬೀನಾ ಮತ್ತು ಅರುಣ್ ನಡುವೆ ಕೆಲಕಾಲದಿಂದ ವಿವಾದ ನಡೆಯುತ್ತಿತ್ತು ಎನ್ನಲಾಗಿದೆ.
ಈ ಸಂಬಂಧ ಪ್ರಕರಣಕ್ಕೆ ಸಾಕ್ಷಿಗಳಾಗಿ ಬೇಬಿ ಹಾಗೂ ಆಕೆಯ ಪುತ್ರಿ ಸಹಿ ಹಾಕಿದ್ದರು. ಇದರಿಂದ ಕೋಪಗೊಂಡ ಆರೋಪಿಯು, ಸಬೀನಾ ಅವರ ಮನೆ ಸಮೀಪ ವಾಸವಿದ್ದ ಬೇಬಿ ಅವರ ಪುತ್ರಿಯನ್ನು ಮನೆ ಮುಂದೆ ನಿಂತಿದ್ದಾಗ ಎಳೆದು ಚರಂಡಿಗೆ ತಳ್ಳಿ, ನಂತರ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ. ಸಬೀನಾ ಅವರ ಮೇಲೂ ಹಲ್ಲೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಮೂವರು ಯುವಕರು ಭಾಗಿಯಾಗಿರುವುದು ಸಿಸಿ ಕ್ಯಾಮೆರಾ ದೃಶ್ಯಗಳಿಂದ ತಿಳಿದುಬಂದಿದ್ದು, ಗಾಯಗೊಂಡ ಮಹಿಳೆಯರನ್ನು ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.