ಜೀರ್ಣೋದ್ಧಾರಗೊಂಡ ಭಾಗಮಂಡಲ ತಾವೂರು ಗ್ರಾಮದ ಶ್ರೀ ಮಹಿಷಾಸುರ ಮರ್ಧಿನಿ ದೇವಸ್ಥಾನದ ನವೀಕೃತ ಪೌಳಿ ಉದ್ಘಾಟನೆ
ಭಾಗಮಂಡಲ : ಗೊಂದಲಗೊಂಡ ಮನಸ್ಸನ್ನು ನಿರಾಳತೆ, ನಿರ್ಮಲತೆಗೆ ಕೊಂಡೊಯ್ಯಲು ದೇವಲಾಯದ ವಾತಾವರಣದಿಂದ ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಸೂರು ಸತೀಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜೀರ್ಣೋದ್ಧಾರಗೊಂಡ ಭಾಗಮಂಡಲ ತಾವೂರು ಗ್ರಾಮದ ಶ್ರೀ ಮಹಿಷಾಸುರ ಮರ್ಧಿನಿ ದೇವಸ್ಥಾನದ ನವೀಕೃತ ಪೌಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ತನ್ನ ನೋವುಗಳನ್ನು ಸಂಕೋಚವಿಲ್ಲದೆ ವ್ಯಕ್ತಪಡಿಸಿಕೊಳ್ಳಲು ದೇವಾಲಯಗಳ ಅವಶ್ಯಕತೆ ಇದೆ. ಗರ್ಭಗುಡಿಯಲ್ಲಿ ಸ್ಥಾಪಿಸಿರುವ ದೇವರ ಮೂರ್ತಿಗಳು ಮನುಷ್ಯನ ಬದುಕಿಗೆ ಆಶಾಭಾವನೆಯ ಶಕ್ತಿಯನ್ನು ತುಂಬಬಲ್ಲದು. ಹೀಗಾಗಿ ಪ್ರಾರ್ಥನೆ ಮತ್ತು ಧಾರ್ಮಿಕ ಕಾರ್ಯಗಳು ಪ್ರತಿಯೊಬ್ಬನಿಗೂ ಅಗತ್ಯ ಎಂದು ತಿಳಿಸಿದರು.
ಮನುಷ್ಯನ ಮನದೊಳಗೆ ಅಡಗಿರುವ ರಹಸ್ಯ ವಿಚಾರಗಳನ್ನು ಮತ್ತೊಬ್ಬ ವ್ಯಕ್ತಿಯೊಂದಿಗೆ ಹಂಚಿಕೊAಡಾಗ ಅದು ಅಪಾಯದ ಸನ್ನಿವೇಶಗಳನ್ನು ತರಬಹುದು, ಆದರೆ ದೇವಾಲಯದಲ್ಲಿರುವ ದೇವರ ಮೂರ್ತಿಯೊಂದಿಗೆ ಮನಸ್ಸು ಮತ್ತು ಗರ್ಭಗುಡಿಯಲ್ಲಿನ ಸ್ಥಾಪಿತ ಮೂರ್ತಿಯೊಂದಿಗೆ ಮನದ ಮಾತುಕತೆ ನಡೆಸಿದಾಗ ಮನಸು ಶಾಂತಿಯುತವಾಗಿರಲು ಸಾಧ್ಯವಾಗಬಲ್ಲದು ಎಂದು ತಿಳಿಸಿದರು.
ಧಾರ್ಮಿಕ ಆಚರಣೆಗಳಿಗೆ, ಸಮಾನತೆಯ ವ್ಯವಸ್ಥೆಗಳಿಗೆ ದೇವಸ್ಥಾನಗಳು ಸ್ಥಳೀಯ ಗ್ರಾಮಗಳ ಶಕ್ತಿಯಾಗುತ್ತದೆ ಎಂದು ಹೇಳಿದರು. ದೇವಸ್ಥಾನದಲ್ಲಿ ಬಾರಿಸುವ ಗಂಟೆಯ ನಾದ ಮನುಷ್ಯನ ಮನದಲ್ಲಿರುವ ಕಲ್ಮಶಗಳನ್ನು ತೊಳೆದು ಹಾಕುವ ಬಲ್ಲದು ಎಂದರು.
ಆಡಳಿತ ಮಂಡಳಿ ಅಧ್ಯಕ್ಷ ಕೋಳಿಬೈಲು ವೆಂಕಟೇಶ್ ಮಾತನಾಡಿ, ಗ್ರಾಮೀಣ ಭಾಗದ ಪದ್ಧತಿ, ಪರಂಪರೆ ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ಮತ್ತು ಧಾರ್ಮಿಕತೆಯನ್ನು ಎತ್ತಿ ಹಿಡಿಯಲು ದೇವಾಲಯಗಳು ಮಹತ್ವರ ಪಾತ್ರವಹಿಸುತ್ತದೆ.
ಆ ನಿಟ್ಟಿನಲ್ಲಿ ತಾವೂರು ಗ್ರಾಮದಲ್ಲಿ ಸಾವಿರಾರು ವರ್ಷಗಳ ಹಿಂದೆ, ಮಹಿಷಾಸುರ ಮರ್ದಿನಿ ದೇವರು ನೆಲೆಸಿ ಈ ಗ್ರಾಮದ ಜನರ ಬದುಕಿಗೆ ಭಕ್ತಿಯ ಮನಸ್ಥಿತಿಯನ್ನು ಹೊಂದಲು ಅವಕಾಶ ನೀಡಿ, ಸಮೃದ್ಧಿ ಮತ್ತು ಶಾಂತಿಯ ಬದುಕು ನಡೆಸಲು ದೇವರ ಕೃಪೆ ಅಗತ್ಯತೆಯನ್ನು ನೀಡಿದೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಬಾರಿಕೆ ರಾಘವ ಮಾತನಾಡಿದರು. ದೇವಾಲಯದ ತಕ್ಕ ಮುಖ್ಯಸ್ಥ ಕುರುಂಜಿ ದೇವಯ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಕುದುಕುಳಿ ಅಶ್ವಥ್ , ಮಾಜಿ ಅಧ್ಯಕ್ಷ ಅಮೆ ಬಾಲಕೃಷ್ಣ, ಮಾಜಿ ಕಾರ್ಯದರ್ಶಿ ಬಾರಿಕೆ ವೆಂಕಟರಮಣ, ದೇವಾಲಯದ ಶಿಲ್ಪಿ ಉಮೇಶ್ ಇದ್ದರು.
ಈ ಸಂದರ್ಭ ದೇವಾಲಯಕ್ಕೆ ಘನ ಸಹಕಾರ ನೀಡಿದ ದಾನಿಗಳಾದ ಬಾರಿಕೆ ರಾಘವ, ಹೊಸೂರು ಸತೀಶ್ ಕುಮಾರ್, ಬಾರಿಕೆ ನಿರಂಜನ್, ಮರ ದಾನಿಗಳಾದ ಅಯ್ಯನಿರ ದಿನೇಶ್, ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಹಾಗೂ ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿಗಳಿಗೆ ಸೇರಿದಂತೆ ಹಲವರಿಗೆ ಸನ್ಮಾನ ಮಾಡಲಾಯಿತು.
ಧನ ಸಹಕಾರ ನೀಡಿದ ದಾನಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಸ್ವಾಗತವನ್ನು ಚೇತನ್ ಕೂಡಕಂಡಿ, ವಂದನಾರ್ಪಣೆ ಹೊಸಗದ್ದೆ ಪೂರ್ಣಿಮಾ, ನಿರೂಪಣೆ ಚೈತ್ರ ಕುದುಕುಳಿ ನೆರವೇರಿಸಿದರು.