ರಾಜ್ಯದಲ್ಲಿ ಕಿಡ್ನಿ ಕಸಿಗೆ ಹೆಚ್ಚಿದ ಬೇಡಿಕೆ ಮೂತ್ರಪಿಂಡ ಬೇಕಾದರೆ ಎರಡು–ಮೂರು ವರ್ಷ ಕಾಯ್ಬೇಕು!
ಬೆಂಗಳೂರು, ಡಿ. 29: ರಾಜ್ಯದಲ್ಲಿ ಮೂತ್ರಪಿಂಡ (ಕಿಡ್ನಿ) ಕಸಿಗೆ ಬೇಡಿಕೆ ಆತಂಕಕಾರಿ ಮಟ್ಟಕ್ಕೆ ಹೆಚ್ಚಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಕಿಡ್ನಿ ಕಸಿಗಾಗಿ ಕಾಯುತ್ತಿರುವುದು ಅಧಿಕೃತ ಅಂಕಿಅಂಶಗಳಿಂದ ತಿಳಿದುಬಂದಿದೆ.
2025ರ ಡಿಸೆಂಬರ್ ವರೆಗೆ ಲಭ್ಯವಿರುವ ಮಾಹಿತಿಯಂತೆ, ಈ ವರ್ಷ ರಾಜ್ಯದಲ್ಲಿ ಸುಮಾರು 300 ಮಂದಿಗೆ ಕಿಡ್ನಿ ಕಸಿ ಮಾಡಲಾಗಿದೆ. ಆದರೆ ದಾನಿಗಳ ಕೊರತೆ ಮತ್ತು ವೈದ್ಯಕೀಯ ಹೊಂದಾಣಿಕೆ ಸಮಸ್ಯೆಯಿಂದಾಗಿ ಇನ್ನೂ ಬಹುಸಂಖ್ಯೆಯ ರೋಗಿಗಳು ನಿರೀಕ್ಷೆಯಲ್ಲೇ ಉಳಿದಿದ್ದಾರೆ. ಪರಿಣಾಮವಾಗಿ ಕಿಡ್ನಿ ಕಸಿಗಾಗಿ ಸರಾಸರಿ ಎರಡು ರಿಂದ ಮೂರು ವರ್ಷಗಳವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಂಕ್ರಾಮಿಕವಲ್ಲದ ಕಾಯಿಲೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಜೀವನಶೈಲಿ ಸಂಬಂಧಿತ ಸಮಸ್ಯೆಗಳ ಏರಿಕೆಯಾಗಿರುವುದೇ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತರೆ ಅಂಗಾಂಗ ಕಸಿಗಳ ಹೋಲಿಕೆಯಲ್ಲಿ ಕಿಡ್ನಿಗೆ ಬೇಡಿಕೆ ಹೆಚ್ಚು ಕಂಡುಬಂದಿದೆ. ಪ್ರಸ್ತುತ ಯಕೃತ್ತಿಗೆ 698 ಮಂದಿ, ಹೃದಯಕ್ಕೆ 118 ಮಂದಿ ಹಾಗೂ ಶ್ವಾಸಕೋಶಕ್ಕೆ 44 ಮಂದಿ ಕಸಿಗಾಗಿ ಕಾಯುತ್ತಿದ್ದಾರೆ. ಈ ವರ್ಷ ಸುಮಾರು 150 ಮಂದಿ ಕಿಡ್ನಿ ದಾನ ಮಾಡಿದ್ದು, ಅದರ ಮೂಲಕ 300 ರೋಗಿಗಳಿಗೆ ಲಾಭವಾಗಿದೆ. ಇದೇ ಅವಧಿಯಲ್ಲಿ 161 ಯಕೃತ್ತಿನ ದಾನ, 49 ಹೃದಯ ದಾನ ಹಾಗೂ 29 ಶ್ವಾಸಕೋಶ ದಾನಗಳು ನಡೆದಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಪ್ರಕಾರ, ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹೆಚ್ಚಳವು ಕಿಡ್ನಿ ಸ್ವೀಕರಿಸುವವರಷ್ಟೇ ಅಲ್ಲದೆ ದಾನಿಗಳ ಮೇಲೂ ಪರಿಣಾಮ ಬೀರುತ್ತಿದೆ. ಮಧುಮೇಹ ಅಥವಾ ರಕ್ತದೊತ್ತಡ ನಿಯಂತ್ರಣದಲ್ಲಿಲ್ಲದಿರುವುದು, ಅಥವಾ ದಾನಿಯ ಮೂತ್ರಪಿಂಡದಲ್ಲೇ ಸಮಸ್ಯೆ ಇರುವಂತಹ ಸಂದರ್ಭಗಳಲ್ಲಿ ದಾನಕ್ಕೆ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ದಾನಿಯ ಕಿಡ್ನಿ ಹೊಂದಾಣಿಕೆಯಾಗಲು ರಕ್ತದ ಗುಂಪು ಹಾಗೂ ಮಾನವ ಲ್ಯೂಕೋಸೈಟ್ ಆಂಟಿಜೆನ್ (ಎಚ್ಎಲ್ಎ) ಹೊಂದಾಣಿಕೆ ಕಡ್ಡಾಯವಾಗಿದೆ. ಪೋಷಕರು ಅಥವಾ ಸಹೋದರರು ದಾನ ಮಾಡಿದರೆ ಮಾತ್ರ ಸಂಪೂರ್ಣ ಹೊಂದಾಣಿಕೆ ಸಾಧ್ಯವಾಗುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಿಡ್ನಿ ಕಸಿಯನ್ನು ರೋಗದ ತೀವ್ರತೆ ಮತ್ತು ನೋಂದಣಿ ಹಿರಿತನದ ಆಧಾರದ ಮೇಲೆ ಹಂಚಲಾಗುತ್ತದೆ. ಕಿಡ್ನಿ ಲಭ್ಯವಾಗುವವರೆಗೆ ಡಯಾಲಿಸಿಸ್ ಮೂಲಕ ರೋಗಿಗಳನ್ನು ನಿರ್ವಹಿಸಬಹುದಾದ ಕಾರಣ, ಹಿರಿತನವನ್ನು ಪ್ರಮುಖ ಮಾನದಂಡವಾಗಿ ಅನುಸರಿಸಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.